ಹುಬ್ಬಳ್ಳಿ: ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮಾರ್ಚ್ 5ರಿಂದ 10ರ ವರೆಗೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಕೆಪಿಸಿಸಿ ಸಮಯಾವಕಾಶ ನೀಡಿತ್ತು. ಈ ಅವಧಿಯಲ್ಲಿ, ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರಕ್ಕೆ ಐವರು, ಸೆಂಟ್ರಲ್ ಕ್ಷೇತ್ರಕ್ಕೆ ಆರು, ಪಶ್ಚಿಮ ಕ್ಷೇತ್ರಕ್ಕೆ 13, ಧಾರವಾಡಕ್ಕೆ ಒಬ್ಬರು, ನವಲಗುಂದಕ್ಕೆ 10, ಕಲಘಟಗಿಗೆ ಮೂವರು ಹಾಗೂ ಕುಂದಗೋಳ ಕ್ಷೇತ್ರಕ್ಕೆ ನಾಲ್ವರು ಸೇರಿದಂತೆ ಒಟ್ಟು 42ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಸಚಿವರಾದ ವಿನಯ ಕುಲಕರ್ಣಿ, ಸಂತೋಷ ಲಾಡ್ ಮತ್ತು ಶಾಸಕರಾದ ಪ್ರಸಾದ ಅಬ್ಬಯ್ಯ, ಸಿ.ಎಸ್.ಶಿವಳ್ಳಿ ಅವರೂ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಧಾರವಾಡ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರೊಬ್ಬರೇ ಆಕಾಂಕ್ಷಿಯಾಗಿರುವುದು ವಿಶೇಷ. ಇದಕ್ಕೆ ವ್ಯತಿರಿಕ್ತ ಎಂಬಂತೆ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ 13 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನಾಗರಾಜ ಛಬ್ಬಿ, ಪಾಲಿಕೆ ಸದಸ್ಯರಾದ ದೀಪಕ್ ಚಿಂಚೋರೆ, ಪ್ರಫುಲ್ಲಚಂದ್ರ ರಾಯನಗೌಡ್ರ, ಮೋಹನ ಹಿರೇಮನಿ ಮತ್ತು ದೀಪ ಗೌರಿ ಅವರು ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.
ಐವರು ಮಹಿಳಾ ಆಕಾಂಕ್ಷಿಗಳು: ಸ್ವಾತಿ ಮಳಗಿ, ದೀಪಾ ಗೌರಿ, ದಾಕ್ಷಾಯಿಣಿ ಬಸವರಾಜ, ಚಂದನ ರಾಣಿ ಮತ್ತು ರಜಿಯಾಬೇಗಂ ಸಂಗೊಳ್ಳಿ ಟಿಕೆಟ್ ಕೇಳಿರುವ ಮಹಿಳಾ ಆಕಾಂಕ್ಷಿಗಳಾಗಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಸಲ್ಲಿಸಿರುವವರ ಹೆಸರು ಇಂತಿವೆ.
ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರ: ಪ್ರಸಾದ ಅಬ್ಬಯ್ಯ, ಎಫ್.ಎಚ್.ಜಕ್ಕಪ್ಪನವರ, ಮೋಹನ ಹಿರೇಮನಿ, ಚಂದನರಾಣಿ ಮತ್ತು ಗೋವಿಂದರಾಜ ಹರಿವಾಣ.
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ: ಡಾ.ಮಹೇಶ ನಾಲವಾಡ, ನಾಗರಾಜ ಛಬ್ಬಿ, ಪ್ರಫುಲ್ಲಚಂದ್ರ ರಾಯನಗೌಡ್ರ, ಸದಾನಂದ ಡಂಗನವರ, ಸತೀಶ ಮೆಹರವಾಡೆ ಮತ್ತು ಕುಮಾರ ದೇಸಾಯಿ.
ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರ: ಎಸ್.ಆರ್. ಮೋರೆ, ದೀಪಕ್ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ಸ್ವಾತಿ ಮಳಗಿ, ದೀಪಾ ಗೌರಿ, ನಾಗರಾಜ ಗೌರಿ, ಶರಣಪ್ಪ ಕೊಟಗಿ, ದಾಕ್ಷಾಯಿಣಿ ಬಸವರಾಜ, ರಜಿಯಾಬೇಗಂ ಸಂಗೊಳ್ಳಿ, ಯೂಸೂಫ್ ಸವಣೂರು, ಶಂಕರಗೌಡ ಪಾಟೀಲ, ಅನ್ವರ್ ಬಾಗೇವಾಡಿ, ಇಕ್ಬಾಲ್ ಜಮೀನ್ದಾರ.
ಧಾರವಾಡ ಕ್ಷೇತ್ರ: ವಿನಯ ಕುಲಕರ್ಣಿ.
ನವಲಗುಂದ ಕ್ಷೇತ್ರ: ಕೆ.ಎನ್.ಗಡ್ಡಿ, ಎಚ್.ವಿ.ಮಾಡಳ್ಳಿ, ವಿಜಯ ಕುಲಕರ್ಣಿ, ಸುಭಾಷ ದ್ಯಾಮಕ್ಕನವರ, ವಿನೋದ ಅಸೂಟಿ, ಬಿ.ಕೆ.ಮಹೇಶ, ಪ್ರಕಾಶ ಅಂಗಡಿ, ಲೋಹಿತ್ ನಾಯ್ಕರ, ರಾಜಶೇಖರ ಮೆಣಸಿನಕಾಯಿ, ಕಿರಣ ಮೂಗಬಸ್ತ.
ಕಲಘಟಗಿ ಕ್ಷೇತ್ರ: ಸಂತೋಷ ಲಾಡ್, ಡಿ.ವೈ.ಪಾಟೀಲ, ಎಸ್.ಎಂ.ಚಿಕ್ಕಣ್ಣವರ.
ಕುಂದಗೋಳ ಕ್ಷೇತ್ರ: ಸಿ.ಎಸ್.ಶಿವಳ್ಳಿ, ಚಂದ್ರಶೇಖರ ಜುಟ್ಟಲ್, ಸುರೇಶ ಸವಣೂರ ಮತ್ತು ವಿಶ್ವನಾಥ ಕೂಬಿಹಾಳ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಎಚ್.ವಿ.ಮಾಡಳ್ಳಿ, ‘ಇದುವರೆಗೂ ಟಿಕೆಟ್ ಆಕಾಂಕ್ಷಿಗಳು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅರ್ಜಿ ಸಲ್ಲಿಸುತ್ತಿದ್ದರು. ಅರ್ಜಿಗಳನ್ನು ಪರಿಶೀಲಿಸಿ ಮೂರು ಹೆಸರನ್ನು ಅಂತಿಮಗೊಳಿಸಿ, ಕೆಪಿಸಿಸಿಗೆ ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಈ ಬಾರಿ ಆಕಾಂಕ್ಷಿಗಳಿಂದ ಕೆಪಿಸಿಸಿ ನೇರವಾಗಿ ಅರ್ಜಿ ಸ್ವೀಕರಿಸಿದೆ’ ಎಂದರು.
ಸಚಿವರು, ಶಾಸಕರಿಗೆ ಟಿಕೆಟ್ ಬಹುತೇಕ ಖಚಿತ
ಧಾರವಾಡ ಕ್ಷೇತ್ರಕ್ಕೆ ಸಚಿವ ವಿನಯ ಕುಲಕರ್ಣಿ, ಕಲಘಟಗಿ ಕ್ಷೇತ್ರಕ್ಕೆ ಸಂತೋಷ ಲಾಡ್, ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಕುಂದಗೋಳ ಕ್ಷೇತ್ರಕ್ಕೆ ಸಿ.ಎಸ್.ಶಿವಳ್ಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.
ಕೆಪಿಸಿಸಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿಲ್ಲೆಯ ಈ ನಾಲ್ಕು ಕ್ಷೇತ್ರಗಳು ಇರಲಿವೆ ಎಂದು ತಿಳಿದುಬಂದಿದೆ.
ಉಳಿದಂತೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್, ಹುಬ್ಬಳ್ಳಿ–ಧಾರವಾಡ ಪಶ್ಚಿಮ ಮತ್ತು ನವಲಗುಂದ ಕ್ಷೇತ್ರಗಳಿಗೆ ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ಕ್ಷೇತ್ರಗಳ ಟಿಕೆಟ್ಗಾಗಿ ಲಾಬಿ ತೀವ್ರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.