ತುಮಕೂರು: ಹೂವು ಕೀಳುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಹಿಡಿದುಕೊಂಡು ಅತ್ಯಾಚಾರ ಎಸಗಿದ ಆರೋಪಿಗೆ ಮಧುಗಿರಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಲಾವಣ್ಯ ಲತಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ.
ಮಧುಗಿರಿ ತಾಲ್ಲೂಕು ಬೋರನಕುಂಟೆ ಗ್ರಾಮದಲ್ಲಿ 2017ರಲ್ಲಿ ರಂಗನಾಥ್ ಈ ಕೃತ್ಯ ಎಸಗಿದ್ದ. ಈ ಸಂಬಂಧ ಬಡವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಜೈಲು ಹಾಗೂ ₹ 10 ಸಾವಿರ ದಂಡ ಹಾಗೂ ಕಲಂ 506 ರಡಿಯ ಅಪರಾಧಕ್ಕಾಗಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರವಾಗಿ ವಕೀಲ ಎಸ್.ಕೆ.ನಾರಾಯಣ ಸ್ವಾಮಿ ವಾದಿಸಿದ್ದರು.
–––
ಕೊಲೆ: ಇಬ್ಬರಿಗೆ ಜೀವಾವಧಿ ಶಿಕ್ಷೆ
ತುಮಕೂರು: ಕೂಲಿಯಲ್ಲಿ ಪಾಲು ಕೇಳಿದ ಕಾರಣಕ್ಕಾಗಿ ಮೇಸ್ತ್ರಿಯನ್ನು ಕೊಲೆ ಮಾಡಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಭರತ್ ಕುಮಾರ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಮಂಡ್ಯದ ಮಹಾದೇವ ನಾಯ್ಕ, ಶಂಕರಪ್ಪ ಶಿಕ್ಷೆಗೆ ಒಳಗಾದವರು. 2015ರಲ್ಲಿ ಇವರು ಮೇಸ್ತ್ರಿ ಬೋಜರಾಜ ಅವರೊಂದಿಗೆ ಹುಲಿಯೂರುದುರ್ಗದ ಚಂದ್ರಶೇಖರ್ ಅವರ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದರು.
’ನಾನು ಮೇಸ್ತ್ರಿ. ನನಗೆ ಮದ್ಯ ಕೊಡಿಸಬೇಕು. ಖರ್ಚಿಗೆ ಕಾಸು ಕೊಡಬೇಕು. ನಾನು ಹೇಳಿದಂತೆ ಕೇಳಬೇಕು’ ಎಂದು ಭೋಜರಾಜ ಒತ್ತಾಯಿಸುತ್ತಿದ್ದರು. ಇದರಿಂದಾಗಿ ಸಿಟ್ಟಿಗೆದ್ದಿದ್ದ ಇಬ್ಬರು ಬೋಜರಾಜ್ ಮಲಗಿದ್ದಾಗ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದರು.
ಸರ್ಕಾರದ ಪರವಾಗಿ ವಕೀಲ ಎಸ್.ಕೆ.ನಾರಾಯಣ ಸ್ವಾಮಿ ವಾದಿಸಿದ್ದರು.