ಹನೂರು: ‘ಕ್ಷೇತ್ರ ಹಲವಾರು ಸಮಸ್ಯೆಗಳಿಂದ ನಲುಗುತ್ತಿದೆ. 10 ವರ್ಷಗಳಿಂದ ಆಳ್ವಿಕೆ ಮಾಡುತ್ತಿರುವ ಇಲ್ಲಿನ ಶಾಸಕರು ಸಮಸ್ಯೆಯನ್ನು ನಿವಾರಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಆರ್.ನರೇಂದ್ರ ವಿರುದ್ಧ ಪ್ರೀತನ್ ನಾಗಪ್ಪ ವಾಗ್ದಾಳಿ ನಡೆಸಿದರು. ಸಮೀಪದ ಕಾಮಗೆರೆ ಮತ್ತು ಮಂಗಲ ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.
‘ಎರಡು ಅವಧಿಯಲ್ಲಿ ಗೆದ್ದರೂ ಕ್ಷೇತ್ರಕ್ಕೆ ಇಲ್ಲಿನ ಶಾಸಕರ ಕೊಡುಗೆ ಶೂನ್ಯ. ಗ್ರಾಮೀಣ ಭಾಗದ ಜನತೆ ಇಂದಿಗೂ ಅಗತ್ಯ ಮೂಲಸೌಕರ್ಯಕ್ಕಾಗಿ ಪರದಾಡುವಂತಾಗಿದೆ. ಜನರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಶಾಸಕರಿಗೆ ಜನಸಾಮಾನ್ಯರ ಕಷ್ಟದುಃಖಗಳು ಅರ್ಥವಾಗುವುದಾದರೂ ಹೇಗೆ’ ಎಂದು ವ್ಯಂಗವಾಡಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ನರೇಂದ್ರಮೋದಿ ಅವರು ಜನಸಾಮಾನ್ಯರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂದು ದೇಶದ ಜನತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಇಂದು ನಾವು ಶ್ರಮಿಸಬೇಕಿದೆ. ಹನೂರು ಕ್ಷೇತ್ರದ ಅಭಿವೃದ್ಧಿ ಹಾಗೂ ತಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ನಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಚಿನ್ನಸ್ವಾಮಿ, ಮಲ್ಲಪ್ಪ, ಕುಮಾರ, ಮಾದಪ್ಪ, ಚಿಕ್ಕಸ್ವಾಮಿ ಹಾಜರಿದ್ದರು.