ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ತೀವ್ರಗೊಂಡಿದೆ.ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಉದ್ಯಮಿ ಗುರುನಾಥ ಕೊಳ್ಳೂರು ಮಧ್ಯೆ ಟಿಕೆಟ್ಗಾಗಿ ಪೈಪೋಟಿ ನಡೆದಿದೆ.
ರಘುನಾಥ ಅವರು ಕುರುಬ ಸಮಾಜವನ್ನು ಪ್ರತಿನಿಧಿಸಿದರೆ, ಈಶ್ವರಸಿಂಗ್ ಠಾಕೂರ್ ಬೆಸ್ತ ಸಮುದಾಯಕ್ಕೆ ಸೇರಿದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಲಿಂಗಾಯತ ಸಮಾಜದ ಬೆಂಬಲ ಇದೆ. ಬಿಜೆಪಿ ಹಿಂದುಳಿದ ಸಮಾಜಕ್ಕೆ ಮಣೆ ಹಾಕುತ್ತಿಲ್ಲ ಎನ್ನುವ ದೂರುಗಳು ಬಂದ ಕಾರಣ ಮೊದಲ ಹಂತದಲ್ಲಿ ಯಾರಿಗೂ ಟಿಕೆಟ್ ಪ್ರಕಟಿಸಿಲ್ಲ.
ಬಸವಕಲ್ಯಾಣ ಕ್ಷೇತ್ರದ ಟಿಕೆಟ್ನ್ನು ಲಿಂಗಾಯತರಿಗೆ ಬಿಟ್ಟುಕೊಡಲಾಗಿದೆ. ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ದಕ್ಷಿಣದ ಟಿಕೆಟ್ಅನ್ನು ಸಹ ಲಿಂಗಾಯತರಿಗೆ ಕೊಡಬೇಕು ಎನ್ನುವ ಒತ್ತಡ ಇದೆ. ಹೀಗಾಗಿ ಮುಖಂಡರು ರಘುನಾಥ ಮಲ್ಕಾಪುರೆ ಅಥವಾ ಈಶ್ವರಸಿಂಗ್ ಠಾಕೂರ್ ಅವರಿಗೆ ಟಿಕೆಟ್ ಕೊಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.
‘ಪಕ್ಷ ನನ್ನ ಶಕ್ತಿಯನ್ನು ಗುರುತಿಸಿ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ, ಚುನಾವಣಾ ಸಮಿತಿ ಸದಸ್ಯ, ರಾಜ್ಯ ಸಂಸದೀಯ ಮಂಡಳಿ ಸದಸ್ಯ, ಪಕ್ಷದ ರಾಜ್ಯ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಹೇಳುತ್ತಾರೆ.
‘ಪಕ್ಷ ಸಮೀಕ್ಷೆ ನಡೆಸಿದೆ. ಪಕ್ಷದ ಬಗೆಗಿನ ನಿಷ್ಠೆ, ಸಾಮಾಜಿಕ ನ್ಯಾಯ, ಗೆಲ್ಲುವ ಸಾಮರ್ಥ್ಯ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಟಿಕೆಟ್ ನೀಡಲಿದೆ. ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಾದರೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷ ನನಗೆ ಟಿಕೆಟ್ ಕೊಡಲಿದೆ ಎನ್ನುವ ವಿಶ್ವಾಸ ಇದೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುವೆ’ ಎನ್ನುತ್ತಾರೆ.
‘ಮಹಿಳಾ ಸ್ವಸಹಾಯ ಸಂಘಕ್ಕೆ ಬ್ಯಾಂಕುಗಳು ಸಾಲ ಕೊಡಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ನನ್ನ ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಅವರು ಸ್ವಸಹಾಯ ಸಂಘಗಳಿಗೆ ತಲಾ ಒಂದು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು. ಇಂದು ಈ ಸಂಘಗಳು ಬ್ಯಾಂಕ್ನಲ್ಲಿ ಸುಮಾರು ₹ 120 ಕೋಟಿ ಠೇವಣಿ ಇಟ್ಟಿವೆ. ₹ 600 ಕೋಟಿ ವ್ಯವಹಾರ ನಡೆಸುತ್ತಿವೆ. ಚಿಕ್ಕ ತಾಳಿ ಹಾಕಿಕೊಳ್ಳುತ್ತಿದ್ದ ಸಾಮಾನ್ಯ ಕುಟುಂಬದ ಮಹಿಳೆಯರೂ ನೆಕ್ಲೆಸ್ ಹಾಕಿಕೊಳ್ಳುತ್ತಿದ್ದಾರೆ’ ಎಂದು ಸೂರ್ಯಕಾಂತ ನಾಗಮಾರಪಳ್ಳಿ ವಿವರಿಸುತ್ತಾರೆ.
‘ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಲ್ಲಿ 3.93 ಲಕ್ಷ ಮಹಿಳೆಯರಿದ್ದಾರೆ. ಬೀದರ್ ನಗರವೊಂದರಲ್ಲೇ 40 ಸಾವಿರ ಮಹಿಳಾ ಸದಸ್ಯರಿದ್ದು, ಇವರಾರೂ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೇರಿಲ್ಲ. ತಂದೆಯ ಪರಿಶ್ರಮದ ಫಲ ನನಗೆ ಶ್ರೀರಕ್ಷೆಯಾಗಲಿದೆ. ನಾನೊಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ಆಗಿಲ್ಲ. ಆದರೆ, ಬೀದರ್ನಲ್ಲಿ ಉದ್ಯೋಗ ಮೇಳ ನಡೆಸಿ 2,400 ಜನರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದೇನೆ’ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳುತ್ತಾರೆ.
‘ಕ್ಷೇತ್ರದ ಜನ ನನ್ನೊಂದಿಗೆ ಇದ್ದಾರೆ. ಇದು ಪಕ್ಷದ ಮುಖಂಡರಿಗೂ ಗೊತ್ತಿರುವ ವಿಷಯವೇ ಆಗಿದೆ. ಹೀಗಾಗಿ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿ ಸೇರಿಸಿಕೊಂಡಿದ್ದಾರೆ. ಟಿಕೆಟ್ ನನಗೇ ಕೊಡಲಿದ್ದಾರೆ ಎನ್ನುವ ವಿಶ್ವಾಸ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ’ ಎನ್ನುತ್ತಾರೆ ಅವರು.
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಮೂಲಕ ಬಿಜೆಪಿಗೆ ಬಂದಿರುವೆ. ಪಕ್ಷ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಿರುವೆ. ಪಕ್ಷದ ವರಿಷ್ಠ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ನನ್ನ ಸಾಧನೆಯ ಪಟ್ಟಿಯನ್ನೂ ಅವರಿಗೆ ಕೊಟ್ಟಿದ್ದೇನೆ. ಈ ಬಾರಿ ಪಕ್ಷದ ಆಯ್ಕೆ ಸಮಿತಿಯು ಹಿಂದುಳಿದ ಸಮಾಜಕ್ಕೆ ಪ್ರಾತಿನಿಧ್ಯ ನೀಡಲಿದೆ ಎನ್ನುವ ವಿಶ್ವಾಸ ಇದೆ’ ಎಂದು ಹೇಳುತ್ತಾರೆ ಈಶ್ವರಸಿಂಗ್ ಠಾಕೂರ್.
ಬೃಹತ್ ಸೇತುವೆ, ರಸ್ತೆ, ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಕಂಪನಿಯ ವ್ಯವಹಾರವನ್ನು ಪುತ್ರನ ಕೈಗೆ ಕೊಟ್ಟು ಉದ್ಯಮಿ ಗುರುನಾಥ ಕೊಳ್ಳೂರು ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪಕ್ಷದ ವರಿಷ್ಠರು ಇವರಿಗೂ ಟಿಕೆಟ್ ಕೊಡುವ ಭರವಸೆ ಕೊಟ್ಟಿದ್ದಾರೆ. ಈವರೆಗೂ ಟಿಕೆಟ್ ಯಾರಿಗೆ ದೊರಕಲಿದೆ ಎನ್ನವುದು ಸ್ಪಷ್ಟವಾಗಿಲ್ಲ.ಹೀಗಾಗಿ ಮುಖಂಡರು ಆತಂಕದಲ್ಲಿದ್ದರೆ, ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.