ಸಾಗರ: ಹರತಾಳು ಹಾಲಪ್ಪ ಅವರ ಬೆಂಬಲಿಗ ವಿನಾಯಕ ಅವರ ಮೇಲೆ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೇಟೆ ಠಾಣೆ ಪೊಲೀಸರು ಇಬ್ಬರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.
ವಿನೋಬ ನಗರ ಬಡಾವಣೆಯ ಮೋಹನ, ಸೂರನಗದ್ದೆಯ ಮಂಜಪ್ಪ ಅಲಿಯಾಸ್ ಗಡ್ಡೆ ಮಂಜ ಎಂಬುವವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ.
ನಿಂದನೆ ಪ್ರಕರಣ:
ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಕುರಿತು ಅವಹೇಳನಕಾರಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಜನ್ನೇಹಕ್ಲು ಗ್ರಾಮದ ಭಾಸ್ಕರ ಎಂಬುವವರ ವಿರುದ್ಧ ಇಲ್ಲಿನ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಪ್ಪ ಅವರ ಸಹೋದರನ ಪುತ್ರ ಉದಯಕುಮಾರ್ ಅವರು ನೀಡಿರುವ ದೂರಿನ ಆಧಾರದ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬಿಜೆಪಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿಯೂ ಪ್ರಕರಣ ದಾಖಲಾಗಿದೆ.