ಹುಬ್ಬಳ್ಳಿ: ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರು ಮತ್ತು ರೈತರು ಏ. 25ರಂದು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ನಗರದ ಮೂರುಸಾವಿರ ಮಠದಿಂದ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕು ಜಿಲ್ಲೆಗಳು 11 ತಾಲ್ಲೂಕಿನ ರೈತರು ಹತಾಶೆಗೊಂಡಿದ್ದೇವೆ. ಹೋರಾಟದಲ್ಲಿ ಭಾಗವಹಿಸಿ ಮೂಲ ನೆಲೆಯನ್ನೇ ಕಳೆದುಕೊಂಡಿದ್ದೇವೆ. ಆದ್ದರಿಂದ, ದಯಾಮರಣವೇ ಅಂತಿಮ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ದೆಹಲಿಗೆ ತೆರಳಿ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಭೇಟಿಯಾಗುತ್ತೇವೆ. ಮೂರು ದಶಕಗಳಿಂದ ಬಾಕಿ ಉಳಿದಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೋರುತ್ತೇವೆ. ಸಮಸ್ಯೆಗೆ ರಾಷ್ಟ್ರಪತಿ, ಕೇಂದ್ರ ಸ್ಪಂದಿಸದಿದ್ದರೆ ದೆಹಲಿಯಲ್ಲಿಯೇ ಅಹೋರಾತ್ರಿ ಆಮರಣ
ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದರು.
ನರಗುಂದ ವೇದಿಕೆಯ ಕೋಶಾಧ್ಯಕ್ಷ ಎಸ್.ಬಿ. ಜೋಗನ್ನವರ, ಸಮನ್ವಯ ಸಮಿತಿಯ ಸದಸ್ಯರಾದ ಮಲ್ಲಣ್ಣ ಅಲೇಕಾರ, ಗುರು ರಾಯನಗೌಡ್ರು, ಸೋಮು ಸಾಬಳೆ ಮತ್ತು ಮೃತ್ಯುಂಜಯ ಹಿರೇಮಠ ಇದ್ದರು.