ಡಾ. ವಿಜಯ ರಾಘವೇಂದ್ರ ಎಚ್. ಎಲ್
‘ಹಾಯ್ ಸರ್, ಆರ್ ಯು ಫ್ರೀ ಟುಡೇ?’ ವಾಟ್ಸ್ಆ್ಯಪ್ ಕೂಗಿತು- ಹುಂಜದ ಕೂಗೆಂದರೆ ನನಗೊಂಥರಾ ಹುಮ್ಮಸ್ಸು.
‘ಡೋಂಟ್ ನೋ, ಎಂದ ವಿಶೇಷಮ್?’ - ಮಲಯಾಳಂ ನನಗೂ ಬರುತ್ತದೆಂಬ ತೋರ್ಪಡಿಕೆಯಾಡಂಬರ.
‘ಒನ್ನೂ ಇಲ್ಲ, ಇನ್ ಹಡ್ತಾಳಲ್ಲೋ? ಸೊ...’ ಮತ್ತೆ ಕೂಗಿತು ಕೋಳಿ. ಫಜೀತಿಗಿಟ್ಟುಕೊಂಡಿತು.
‘ಸೌಮ್ಯೆ, ವಾಟ್ ಐಸ್ ಹಡ್ತಾಳ್?’ ಎಂದೂ ನಗದ ಸೌಮ್ಯೆ ನಕ್ಕಳು.
‘ಸ್ಟ್ರೈಕ್- ಇವತ್ತು ಕಮ್ಯುನಿಸ್ಟ್ ಪಾರ್ಟಿ ಸ್ಟ್ರೈಕ್ ಗೆ ಕರೆಕೊಟ್ಟಿದೆ’ ಎಂದಳು.
‘ಅದೇನು ಮಹಾ, ನಮ್ಮಲ್ಲೂ ಆಗೊಮ್ಮೆ ಈಗೊಮ್ಮೆ ಬಂದ್ ಆಗುತ್ತೆ’ ನಕ್ಕೆ. ಸೌಮ್ಯೆಯೂ ನಕ್ಕಳು.
‘ನಮ್ಮಲ್ಲಿ ಬಂದ್ ಅಂದರೆ ಸಂಪೂರ್ಣ ಬಂದ್’. ನನಗದರ ತೀವ್ರತೆ ಅರ್ಥವಾಗಿದ್ದು ಬೆಳಗಿನ ತಿಂಡಿಗೆ ಯಾವುದೇ ಹೋಟೆಲ್ ತೆರೆದಿರದೆ, ಸ್ಕ್ಯಾನಿಂಗ್ ಸೆಂಟರ್ನಲ್ಲಿದ್ದ ಬಿಸ್ಕತ್ ತಿನ್ನುತ್ತಾ, ಆಯಮ್ಮ ಮಾಡಿದ ಗ್ರೀನ್ ಟೀ ಕುಡಿಯುತ್ತಾ, ಮಧ್ಯಾಹ್ನದ ಊಟದ ಬಗ್ಗೆ ತಲೆಕೆಡಿಸಿಕೊಂಡಾಗ.
‘ಏತಕ್ಕಾಗಿ ಬಂದ್?’ ಸೌಮ್ಯೆಯನ್ನು ಕೇಳಿದೆ. ಅವಳು ಎದ್ದು ಮರೆಯಾಗುತ್ತಾ ಹೋದಳು, ಆದರೆ ಧ್ವನಿ ಮಂಕಾಗಿ ಕೇಳಿತು ‘ಅರಿವಿಲ್ಲ’.
ಅಂದಹಾಗೆ ಸೌಮ್ಯೆ ನನ್ನ ಟೈಪಿಸ್ಟ್.
***
ಮಧ್ಯಾಹ್ನ ಪೇಶಂಟ್ಸ್ ಇಲ್ಲದ ಕಾರಣ ಫ್ಲ್ಯಾಟ್ನಲ್ಲಿ ಮಲಗಿದಂತೆ ನಟಿಸುತ್ತಿದ್ದೆ.
‘ಏನ್ ರೂಮೀ... ರಾತ್ರಿಗೆ ಏನು ಊಟದ ವ್ಯವಸ್ಥೆ?’ ಎಂದ ದೀಪಕ್ ಗೌಡ ಪಕ್ಕದಲ್ಲೇ ಹೊರಳುತ್ತಾ. ಮಗ್ಗುಲು ಹೊರಳಿದೆ ಗಾಢನಿದ್ರೆಯಲ್ಲಿರುವನಂತೆ.
‘ನಾಟಕ ಸಾಕು ಸರ್, ನಂದಿನಿ ಮನೆಗೆ ಊಟಕ್ಕೆ ಕರೆದಿದ್ದಾಳಂತೆ?’
ಎಲಾ ಕಿಡಿಗೇಡಿ! ಒಂದು ರೀತಿಯ ಹಿಡಿದಿಟ್ಟುಕೊಳ್ಳಲಾಗದ ಆನಂದ, ನಕ್ಕೇಬಿಟ್ಟೆ. ‘ನಿನಗೆ ಹೇಗೆ ಗೊತ್ತು?’
‘ಗುರುಗಳೇ ನಾನೇ ಈ ನಾಟಕದ ಸೂತ್ರದಾರ.’
‘ಸರ್ ಕೇರಳದಲ್ಲಿ ಹೆಣ್ಣುಮಕ್ಳು ಜಾಸ್ತಿ, 150 ಎಂ.ಬಿ.ಬಿ.ಎಸ್ ಸ್ಟೂಡೆಂಟ್ಸ್ನಲ್ಲಿ 80- 90 ಜನ ಹೆಣ್ಮಕ್ಕಳೆಯಾ, ಎಲ್ಲರಿಗೂ ಮದುವೆ ಆಗುವ ಗಂಡು ಡಾಕ್ಟ್ರೇ ಆಗಿರಬೇಕು ಅಂತ. ಎಲ್ಲಿಂದ ಸಿಕ್ತಾರೆ? ಅದಕ್ಕೆ ನಂದಿನಿಗೆ ನಿಮ್ಮನ್ನ ಕ್ಯಾಚ್ ಹಾಕೋ ಅಸೆ. ಸರ್, ನೀವು ಹೇಳಿ ಕೇಳಿ ರೇಡಿಯೊಲೊಜಿಸ್ಟ್, ಒಂಥರಾ ಬಂಪರ್ ಲಾಟ್ರಿ ಸರ್’. ಮಂಕಾದೆ.
‘ಹೌದೇನೋ?’- ಇಂಡಿಯನ್ ಕಾಫಿ ಹೌಸ್ನಲ್ಲಾದ ಪರಿಚಯದ ಮುದ ನೀಡುತಿದ್ದ ನೆನಪು ಮುದುಡಿತು, ನಾನು ಅವಳನ್ನು ಕ್ಯಾಚ್ ಹಾಕಿದ್ನೋ... ಅವಳೇ ನನ್ನ ಕ್ಯಾಚ್ ಹಾಕಿದ್ಲೋ?
‘ಹೌದು ಸರ್, ಇದು ಕೇರಳ- ಕರ್ನಾಟಕ ಕೆಟ್ಟೋಯ್ತಾ! ಆದ್ರೂ ನೀವು ಪುಣ್ಯವಂತರು ಸರ್. ಹುಡುಗಿ ಮಾತ್ರ ಸೂಪರ್ ಕ್ಯೂಟ್, ಎಂ.ಬಿ.ಬಿ.ಎಸ್ನಲ್ಲಿ ಅವಳಿಗೊಂಬತ್ತು ಗೋಲ್ಡ್ ಮೆಡಲ್, ತಂಗಿಗೆ ಆರು, ಇರೋಬರೋವೆಲ್ಲ ಅವ್ರಿಬ್ಬರೇ ತಗೊಂಡಿದಾರೆ.’
‘ಅವಳಿಗೆ ತಂಗಿ ಇದಾಳ?’ ಕೇಳಿದೆ.
‘ಅವಳಿ-ಜವಳಿ ಸರ್, ನಂದಿನಿ ಮತ್ತೆ ನಂದಿತಾ’ ಕಿಸ್ದ.
‘ನಂದಿನಿ ಮಾಂತೇರೋ ಜೇವರ್ಗೀಸ್, ನಂದಿತಾ ಮಾಂತೇರೋ ಜೇವರ್ಗೀಸ್.’
‘ಅದೇನೋ ಹಾಗೆ?’
‘ಕ್ರಿಶ್ಚಿಯನ್ಸ್ ಸರ್.’ ಅವಾಕ್ಕಾದೆ.
‘ಮೈತುಂಬ ಬಂಗಾರ, ಚರ್ಚಲ್ಲಿ ಮದುವೆ, ಎಣ್ಣೆ- ತುಂಡು ಧಾರಾಳ, ಅತ್ತೆ ಮನೆಯಲ್ಲಿ ಕುಡಿಯೋಕೆ ಬಣ್ಣದ ಬಿಸಿನೀರು, ತಣ್ಣೀರ ಸ್ನಾನ, ಕೊಬ್ಬರಿ ಎಣ್ಣೆ ಊಟ, ತುಪ್ಪದ ಬಿರಿಯಾನಿ...’ ನಕ್ಕ. ನನಗೆ ನಗಲಾಗಲಿಲ್ಲ. ಅವನು ಜೂನಿಯರ್ ಆದರೂ ಕ್ಯಾಂಪಸ್ ಕೃಷ್ಣನಂತಿದ್ದ, ನಾನೋ ಬರಗೆಟ್ಟಿದ್ದೆ, ಡಾಕ್ಟರ್ ಒಬ್ಬಳ ಮದುವೆಯಾದರೆ ಸಾಕೆಂಬ ಜಿಜ್ಞಾಸೆ.
***
ಸಂಜೆ ಏಳೂವರೆಗೆ ಬರುತ್ತೇನೆಂದವ ಆರೂವರೆಗೇ ಹೋದೆ. ಅವರ ಮನೆಯಲ್ಲೆಲ್ಲಾ ಗಡಿಬಿಡಿಯಾದರು. ಛೆ! ಸ್ವಲ್ಪ ತಡವಾಗಿ ಹೋಗಬೇಕಿತ್ತೇನೋ, ಆದರೆ ಮನಸ್ಸು ತಡೀಬೇಕಲ್ಲ. ನಂದಿನಿ ನಗುನಗುತ್ತಲೇ ಬಂದು ಮನೆಯ ಅಂಗಳವ ತೋರಿಸತೊಡಗಿದಳು. ಕೇರಳದಲ್ಲಷ್ಟೇ ಕಾಣುವ ದೊಡ್ಡ ವಿಶಾಲವಾದ ರಸ್ತೆಯಂಚಿನ ಮನೆ, ಮನೆ ಹಿಂದಿನ ವಿಶಾಲವಾದ ಜಾಗ, ಅಲ್ಲಿ ಬೆಳೆದ ರಬ್ಬರ್ ಮತ್ತು ತೆಂಗಿನ ಗಿಡಗಳು, ನೆಲ ಮಟ್ಟದ ತೆರೆದ ಬಾವಿ. ಹೂ ಗಿಡಗಳು, ಒಂದು ಮನೆಗೂ ಮತ್ತೊಂದಕ್ಕೂ ಫರ್ಲಾಂಗಿನ ದೂರ.
ಅಷ್ಟರಲ್ಲೇ ನಂದಿತಾ ಚಹಾ ತಂದಳು. ಅವಳಿ- ಜವಳಿಯಾದರೂ ಇಬ್ಬರನ್ನೂ ಗುರುತಿಸಬಹುದೆನಿಸಿತು. ನಂದಿತಾಳ ಕೆನ್ನೆ ಮೇಲಿನ ಮಚ್ಚೆ ಮನಸ್ಸಲ್ಲಚ್ಚಾಯಿತು. ನಂದಿನಿಯೇ ಚಂದವೆನಿಸಿದಳು. ನಂದಿತಾ ಒಳ ಹೋಗುವ ಮೊದಲು ನನಗೆ ಕಾಣದಂತೆ ಅಕ್ಕನಿಗೆ ಕಣ್ಣೊಡೆದದ್ದು ನನ್ನ ಸೂಕ್ಷ್ಮದೃಷ್ಟಿಗೆ ಕಂಡಿತ್ತು.
ಚಿತ್ರ: ಸೃಜನ್
‘ನಂದಿನಿ ತುಂಬಾ ಸೈಲೆಂಟ್’ ಅಂದಿದ್ದ ದೀಪಕ್ ಗೌಡ, ಅದು ಹಾಗಲ್ಲ ಅನಿಸಿತು. ಇಂಡಿಯನ್ ಕಾಫಿ ಹೌಸ್ನಲ್ಲಿ ನಾನು ಅನಿರೀಕ್ಷಿತವಾಗಿ ಎದುರು ಕೂತು ಪರಿಚಯ ಕೇಳಿದಾಗ ಗಾಬರಿಯಾಯ್ತಂತೆ, ರೇಡಿಯೊಲೋಜಿ ವಿಭಾಗದಲ್ಲಿ ಪಾಠ ಮಾಡುತ್ತಾ ಕಣ್ಣು- ಕಣ್ಣು ಕೂಡಿಸಿದಾಗ ರೋಮಾಂಚನವಾಯಿತಂತೆ, ಜೊತೆಯಲ್ಲಿ ಕಾಫಿಗೆ ಹೋಗುತ್ತಿದ್ದದ್ದ ಕಂಡು ಅವರ ಬ್ಯಾಚ್ ಮಾತ್ರವೇ ಅಲ್ಲ, ಇಡೀ ಮೆಡಿಕಲ್ ಕಾಲೇಜು ತುಂಬ ಗುಲ್ಲೇ- ಗುಲ್ಲಂತೆ. ಕೇರಳದಲ್ಲಿ ಒಬ್ಬ ಹುಡುಗ- ಹುಡುಗಿ ಜೊತೆಯಲ್ಲಿ ಮಾತಾಡುವುದೇ ದೊಡ್ಡ ಸಾಧನೆಯಂತೆ... ನಾನು ಅವಳ ಕಂಗಳ ಹೊಳಪು, ಕೆನ್ನೆ ಮೇಲೆ ಬೀಳುವ ಗುಳಿ, ನಡಿಗೆಯಲ್ಲಿನ ನಾಟ್ಯ, ಮಾತನಾಡುವಾಗ ಮೂತಿಯಲ್ಲಾಗುವ ಬದಲಾವಣೆ, ಆಗಾಗ ಮುಂಗುರುಳ ಹಿಂದೆ ಸರಿಸುವ ಪರಿ, ಇವುಗಳಲ್ಲೇ ಕಳೆದ್ಹೋಗಿದ್ದೆ.
ಅಷ್ಟರಲ್ಲೇ ಅವರಮ್ಮ ಬಂದು ಅವಳನ್ನು ರೆಡಿಯಾಗಲು ಕಳುಹಿಸಿದರು. ‘ನಮಸ್ತೆ ಅಮ್ಮ’ ಎಂದೆ, ‘ನಮಸ್ತೆ’ ಎಂದರು. ಅಲ್ಲೇ, ಅಂಗಳದಲ್ಲಿನ ಮರದ ಚೇರುಗಳ ಮೇಲೆ ನಾನು, ಇಂದಿರಾ ಮಾಂತೇರೋ ಜೇವರ್ಗೀಸ್ ಮತ್ತು ಆಗಷ್ಟೇ ಲುಂಗಿಯುಟ್ಟು ಬಂದ ಮಿಸ್ಟರ್ ಮಾಂತೇರೋ ಜೇವರ್ಗೀಸ್ ಕುಳಿತೆವು.
ಏನು ಮಾತಾಡಬೇಕೋ ತಿಳಿಯದೆ ‘ಮನೆ ವಿಶಾಲವಾಗಿದೆ’ ತಿಣುಕಿದೆ, ನಕ್ಕರವರು.
ಮಾಂತೇರೋ ಹೇಳಿದರು ‘ಕೇರಳ ಟ್ರೆಂಡ್. ವಯಸ್ಸಲ್ಲಿ ಗಲ್ಫ್ ದೇಶಗಳಿಗ್ಹೋಗಿ ದುಡಿದು ವಾಪಸ್ ಬಂದು ಒಂದು ದೊಡ್ಡ ಮನೆ ಕಟ್ಟಿ, ಐಷಾರಾಮಿ ಕಾರು ಕೊಂಡು, ಲುಂಗಿ ಕಟ್ಟಿ, ಲೋಕಲ್ ರಾಜಕೀಯದಲ್ಲಿ ಓಡಾಡಿಕೊಂಡಿದ್ದರೆ ಮುಗೀತು ಮಲಯಾಳಿ ಜೀವನ.’
‘ಇನ್ನೂ ದೊಡ್ಡವರು ಆನೆ ಕಟ್ಟುತ್ತಾರೆ’ ಇಂದಿರಾ ಸೇರಿಸಿದರು. ಇಬ್ಬರೂ ನಕ್ಕರು. ನಾನೂ ಪೆಚ್ಚುಪೆಚ್ಚಾಗಿ ನಕ್ಕೆ.
‘ನಿಮ್ಮಲ್ಲಿ ದುಬೈನಲ್ಯಾರಿದ್ದಾರೆ?’ ಕೇಳಿದೆ. ಈಗ್ಯಾರೂ ಇಲ್ಲ, ಇಂದಿರಾ ನರ್ಸ್ ಆಗಿ ಸುಮಾರು 12 ವರ್ಷ ಅಲ್ಲೇ ಇದ್ದರಂತೆ, ಹಿಂತಿರುಗಿ ಬಂದು ಮದುವೆಯಾದಾಗ ಅವರಿಗೆ 34 ವರ್ಷವಂತೆ. ಮಾಂತೇರೋ ನಕ್ಕರು ‘ನಾನು ಮದುವೆಯಾಗಲೆಂದು ನೋಡಿದ ಮೊದಲನೇ ಹಾಗೂ ಕೊನೆಯ ಹುಡುಗಿ ಇಂದಿರಾ’ ಎಂದರು. ಇಂದಿರಾ ಸ್ವಲ್ಪ ನಾಚಿದಂತೆನಿಸಿತು. ಮದುವೆಯಾಗಿ ವರ್ಷಕ್ಕೇ ಗರ್ಭಿಣಿಯಾದ ಇಂದಿರಾರ ಗರ್ಭಚೀಲದ ಬಾಯಿಯ ಮೇಲೆ ಕಸ ಕೂತು (Placenta Previa) ಗರ್ಭಚೀಲವನ್ನೇ ತೆಗೆಯಬೇಕಾಯಿತಂತೆ.
‘ಮತ್ತೆ ನಂದಿನಿ- ನಂದಿತಾ?’ ಕುತೋಹಲದಿಂದ ಕೇಳಿದೆ.
‘ವಿ ಆರ್ ಗಾಡ್ ಪೇರೆಂಟ್ಸ್’ ನಿಟ್ಟುಸಿರಿಟ್ಟರು ಮಾಂತೇರೋ, ‘ಮಾಲಂಕಾರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ನ ಅನಾಥಾಶ್ರಮದಿಂದ ಕಾನೂನಿನ ಪ್ರಕಾರ ದತ್ತು ಪಡೆದ ಅನಾಥ ಮಕ್ಕಳು. ಕಿರಿಯ ಮಗಳು ನಂದಿತಾಳನ್ನು ಮದುವೆಯಾಗುವವ ಸಿರಿಯನ್ ಕ್ಯಾಥೊಲಿಕ್ ಕಾನೂನಿನ ಪ್ರಕಾರ ಮಗನಾಗುತ್ತಾನೆ. ಈ ವಿಷಯ ಮಕ್ಕಳಿಬ್ಬರಿಗೂ ಗೊತ್ತಿಲ್ಲ’ ಎಂದರು. ಸ್ವಲ್ಪ ಸಮಯದ ಹೆಪ್ಪುಗಟ್ಟಿದ ಮೌನದ ನಂತರ ಮಾಂತೇರೋ ಕೊಚ್ಚಿಯಲ್ಲಿ ಫುಟ್ಬಾಲ್ ಕೋಚ್ ಆಗಿ ಕೆಲಸ ಮಾಡುತ್ತಾರಂತಲೂ ಹಾಗೂ ಕೇರಳದಲ್ಲಿ ಕ್ರಿಕೆಟ್ಟಿಗಿಂತ ಫುಟ್ಬಾಲ್ನದ್ದೇ ಹವಾ ಅಂತಲೂ ಹೇಳಿ, ಸನ್ನಿವೇಶವನ್ನು ತಿಳಿಗೊಳಿಸಲೆಂಬಂತೆ ‘ಟೊಡಿ’ ಹೊಂದಿಸುತ್ತೇನೆಂದು ಮನೆ ಹಿಂಭಾಗಕ್ಕೆ ಹೋದರು.
‘ಟೊಡಿ ಎಂದರೇನು?’ ಇಂದಿರಾ ಅವರನ್ನೇ ನಿರುಕಿಸಿದೆ.
‘ಅದು ತೆಂಗಿನ ಮರದ ಕೊನೆಯಿಂದ ತೆಗೆಯುವ ಪೇಯ, ಮನೆ ಹಿಂದಿನ ತೆಂಗಿನ ಮರಗಳಿಗೆ ಇಗೋ ಈ ರಬ್ಬರು ಮರಗಳಿಗೆ ಕಟ್ಟಿರುವಂತೆ ಹೊಂಬಾಳೆಯ ಬುಡದಡಿ ಚಕ್ಕಿ ಮಡಿಕೆ ಕಟ್ಟಿರುತ್ತೇವೆ. ಆ ಹೊಂಬಾಳೆಯ ಬುಡದಡಿಯ ಗಾಯದಿಂದ ಹೊಸರುವ ದ್ರವವೇ ಟೊಡಿ, ನಮ್ಮಲ್ಲಿ ಊಟಕ್ಕೆ ಮೊದಲು ಅದನ್ನು ಸೂಪಿನಂತೆ ಕುಡಿಯುವ ಅಭ್ಯಾಸ’ ಎಂದರು. ನೀರಾದಂತಿರಬೇಕು ಎಂದುಕೊಂಡೆ.
ಮಾತುಗಳು ಮುಗಿದವೆಂಬಂತೆ ನೀರವ ಮೌನ. ಮನೆಯ ಮುಂದಿನ ತಾರಸಿಗೆ ಕಟ್ಟಿದ್ದ ನಕ್ಷತ್ರವನ್ನೇ ನಿರುಕಿಸುತಿದ್ದೆ. ಅವರು ಅದನ್ನೇ ಕ್ಷಣ ಹೊತ್ತು ನೋಡಿ ನುಡಿದರು ‘ನಮ್ಮ ಪೂರ್ವಜರೂ ನಂಬೂದರಿ ಬ್ರಾಹ್ಮಣರೇ, ಕಾಲಡಿಯವರು. ಕಾಲಡಿ ಗೊತ್ತಲ್ಲ? ಪೆರಿಯಾರ್ ನದಿಯಂಚಿನ ಆದಿಶಂಕರಾಚಾರ್ಯರ ಹುಟ್ಟೂರು. ಅದೇನು ಶಂಕರಾಚಾರ್ಯರ ಶಾಪವೋ, ಸತ್ತ ಹೆಣವನ್ನು ಕುಯ್ದು ಚೂರು ಮಾಡಿ, ಅದಕ್ಕೆ ಮನೆ ಹಿಂದೆಯೇ ಬೆಂಕಿ ಹಚ್ಚುವ ಕರ್ಮ. ಅದನ್ನು ತಪ್ಪಿಸಲೆಂದೇ ನಂಬೂದರಿಗಳೆಲ್ಲಾ ಕ್ರಿಶ್ಚಿಯನ್ನರಾಗಿ ಮತಾಂತರರಾದರಂತೆ. ಈ ಧರ್ಮದಲ್ಲಾದರೆ ಸತ್ತ ದೇಹವನ್ನು ಪವಿತ್ರವೆಂದು ಪರಿಗಣಿಸಿ ಶುಚೀಕರಿಸಿ, ಮಣ್ಣಾಗಿಸುವ ಸಂಪ್ರದಾಯವಿದ್ದು. ನೆನಪಿಗಾಗಿ ಸಮಾಧಿಯನ್ನಾದರೂ ಸಂಧಿಸುವ ಸುಯೋಗವಿದೆ.’ ಸ್ವಲ್ಪ ಹೊತ್ತಿನ ನಂತರ ತಮ್ಮೊಳಗೆಂಬಂತೆ ನಕ್ಕು ‘ಒಂದು ಮಜಾ ಗೊತ್ತಲ್ಲ, ಮಲಬಾರಿನ ಮಾಪಿಳ್ಳೆ(ಮುಸ್ಲಿಂ)ಗಳಿಗಾಗಲಿ ಅಥವಾ ಕೊಚ್ಚಿ- ಟ್ರಾವಂಕೋರಿನ ಕ್ರಿಶ್ಚಿಯನ್ನರಿಗಾಗಲಿ ಉರ್ದು ಅಥವಾ ಇಂಗ್ಲಿಷ್ ಹಾಳಾಗಲಿ ಮಲಯಾಳಂ ಬಿಟ್ಟು ಬೇರೊಂದು ಭಾಷೆ ಬರುವುದಿಲ್ಲ.’
ಅದ್ಯಾವಾಗ ಬಂದರೋ ಮಾಂತೇರೋ ‘ನಡೀರಿ ಊಟಮಾಡುವ’ ಎಂದರು.
‘ನಿಮ್ಮಲ್ಲಿ ಕೆಲಸ ಮಾಡುವ ಸೌಮ್ಯೆ ಇದ್ದಾಳಲ್ಲ ಅಗೋ ಅದೇ ಅವಳ ಮನೆ’ ಎಂದರು ಇಂದಿರಾ. ಏಳುತ್ತಾ ದೂರದಲ್ಲಿ ಕಾಣುವ ಬೆಳಕೊಂದ ತೋರಿದರು. ‘ನಿಮ್ಮ ಬಗ್ಗೆ ತುಂಬಾನೇ ಹೇಳುತ್ತಾಳವಳು... ಪಾಪ, ಅವಳ ಗಂಡ ನಾಲ್ಕು ವರ್ಷದ ಹಿಂದೆ ಯಾವಳೋನ ಹಿಂದೆಯೋ ಹೋದವ ನಿನ್ನೆಯಷ್ಟೇ ಬಂದಿದ್ದಾನಂತೆ, ಅದಕ್ಕೇ ಅವಳಿಗಿನ್ನೂ ಮಕ್ಕಳಾಗಿಲ್ಲ, ಈಗ ನೋಡು ಅವಳ ಮನೆಯಲ್ಲಿ ಈಸ್ಟರ್ನ ಸಂಭ್ರಮ.’
***
‘ಚಿಯರ್ಸ್’ ಹೇಳಿ ಎಲ್ಲ ಒಗರು ಒಗರಾದ ಒಂದು ಗ್ಲಾಸ್ ಟೊಡಿ ಕುಡಿದ ಮೇಲೆ ಕಂಡದ್ದು ಡೈನಿಂಗ್ ಟೇಬಲ್ ಮೇಲಿನ ಬಗೆ- ಬಗೆಯ ಮಾಂಸಾಹಾರಿ ಭಕ್ಷ್ಯಗಳು. ಕೊಬ್ಬರಿ ಎಣ್ಣೆಯಲ್ಲಿ ಕರಿದಿದ್ದ ಕೋಳಿ ಕಬಾಬ್ ಒಂಥರಾ ರುಚಿಯಾಗೇ ಇತ್ತು. ಕತ್ತರಿಸಿದ ಬೇಯಿಸಿದ ಮೊಟ್ಟೆಗಾಕಿದ್ದ ಮೆಣಸು ನೆತ್ತಿಗೇರಿದಾಗ, ಪಕ್ಕದಲ್ಲೇ ಇದ್ದ ನಂದಿನಿ ನೀರಿನ ಗ್ಲಾಸ್ ಮುಂದೆ ಮಾಡಿದಳು. ನೀರು ಕುಡಿಯುತ್ತಾ ಕುಹಕವಾಡಿದೆ ‘ನೀವು ಬಣ್ಣದ ಬಿಸಿ ನೀರೇಕೆ ಕುಡಿಯುತ್ತೀರಿ?’
‘ಹೇ, ಇದು ಚುಕ್ಕುವೆಲ್ಲಂ - Caesalpinia Sappan ಅಥವಾ ಪಥಿಮುಗಮ್ ಮರದ ಗಟ್ಟಿ ಕಾಂಡ ಹಾಕಿ ಕುದಿಸಿದ ನೀರು. ಆಯುರ್ವೇದದ ಅದ್ಭುತ. ನೀರಡಿಕೆ ತಣಿಸುತ್ತೆ, ಸಕ್ಕರೆ ಕಾಯಿಲೆ ದೂರ ಮಾಡುತ್ತೆ, ಹೆಪಟೈಟಿಸ್ ಎ ಬರದಂತೆ ತಡೆಗಟ್ಟುತ್ತೆ.’
‘ಮತ್ತೆ ತಣ್ಣೀರ ಸ್ನಾನ?’ ಮತ್ತೆ ಕೆದಕಿದೆ.
‘ಈ humidityಯಲ್ಲಿ ಮತ್ತೇನು ಬಿಸಿನೀರ ಸ್ನಾನ ಮಾಡಕಾಗುತ್ತಾ?’ ನಂದಿನಿ ಕಣ್ಣರಳಿಸಿದಳು.
ಬಿರಿಯಾನಿ ಬಡಿಸಿಕೊಂಡರೆ, ತುಪ್ಪದಲ್ಲಿ ತೋಯ್ದೆದ್ದ ಬಾಸ್ಮತಿ ಅನ್ನ ಜೊತೆಗೆ ದ್ರಾಕ್ಷಿ- ಗೋಡಂಬಿ ನಡುವೆ ಸಿಕ್ಕ ಕೋಳಿಮಾಂಸವ ತಿನ್ನಲಾರದೆ ತಿನ್ನುತ್ತಿದ್ದೆ. ಮೌನವ ಮುರಿಯಲೆಂಬಂತೆ ಇಂದಿರಾ ಹೇಳಿದರು ‘ನಮ್ಮ ನಂದಿನಿಗಂತೂ ಇಡಿಯಪ್ಪಂ- ಬೀಫ್ ಕರಿನೇ ಬೇಕು ಟು ಬ್ರೇಕ್ ದಿ ಫಾಸ್ಟ್.’
ನಂದಿನಿ ನಕ್ಕಿದ್ದು ಕೇಳಿಸಿತು... ಆದರೆ ನನಗೆ ನಗಲಾಗಲಿಲ್ಲ.
ಒಂದಂತೂ ಸತ್ಯ... ನಾನು- ನಂದಿನಿ ಕೈ- ಹಿಡಿದು ನಡೆದಿದ್ದ ಕುಮಾರಕ್ಕಮ್ ಹಿನ್ನೀರಿನ ಸೂರ್ಯೋದಯದಲ್ಲಿದ್ದ ಭವಿಷ್ಯದ ಭರವಸೆ- ಸಂಭ್ರಮ-ಸಂತೋಷ... ಇಡಿಯಪ್ಪಂ ಬೀಫ್ ಕರಿಯ ನೆನಪಿಸಿದ ಸೂರ್ಯಾಸ್ತದಲ್ಲಂತೂ ಇರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.