ಧರ್ಮಶಾಲಾ(ಹಿಮಾಚಲ ಪ್ರದೇಶ): ಇಲ್ಲಿನ ಮನಾಲಿ–ಲೇಹ್ ಹೆದ್ದಾರಿಯ ರೋಹ್ಟಂಗ್ ಪಾಸ್ನಲ್ಲಿ ಸಂಚರಿಸುತ್ತಿದ್ದ ಎಸ್ಯುವಿ ಕಾರೊಂದು ಪ್ರಪಾತಕ್ಕೆ ಬಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 5 ಮಕ್ಕಳು, 3 ಮಹಿಳೆಯರು ಸೇರಿದ್ದಾರೆ.
‘ಈ ದುರ್ಘಟನೆ ಬುಧವಾರ ರಾತ್ರಿ ಘಟಿಸಿದೆ. ವಾಹನದಲ್ಲಿ ಇರುವವರು ಮನಾಲಿಯಿಂದ ಪಂಗಿ ಎಂಬ ಊರಿಗೆ ತೆರಳುತಿದ್ದರು’ ಎಂದು ಪೋಲಿಸರು ತಿಳಿಸಿದ್ದಾರೆ.
‘ವಾಹನ ಪ್ರಪಾತಕ್ಕೆ ಬಿದ್ದಿರುವುದನ್ನು ದಾರಿಹೋಕರೊಬ್ಬರು ನಮ್ಮ ಗಮನಕ್ಕೆ ತಂದರು. ರಕ್ಷಣಾ ತಂಡ ಸ್ಥಳಕ್ಕೆ ತಲುಪಿದಾಗ, ಸವಾರರೆಲ್ಲರೂ ಮೃತಪಟ್ಟಿದ್ದರು. ಮೃತರ ಗುರುತನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರಿನ ನೋಂದಣಿ ಸಂಖ್ಯೆHP-45 7000 ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿಕೂಲ ಹವಾಮಾನ ಮತ್ತು ದಟ್ಟವಾದ ಮಂಜು ಕವಿದ ವಾತಾವರಣವೆ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಪಷ್ಟ ಕಾರಣ ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.