ಲಂಡನ್: ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನಕ್ಕೆ ಕುಸಿದಿದೆ ಎಂದು ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (ಆರ್ಎಸ್ಎಫ್) ವರದಿ ಹೇಳಿದೆ.
ಪತ್ರಕರ್ತರ ಮೇಲಿನ ದೈಹಿಕ ಹಲ್ಲೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಂತಹ ಪ್ರಕರಣಗಳಿಂದಾಗಿ ಭಾರತ ಎರಡು ಸ್ಥಾನ ಕುಸಿದಿದೆ ಎಂದು ವರದಿ ತಿಳಿಸಿದೆ. ಅಧ್ಯಯನದಲ್ಲಿ 180 ದೇಶಗಳನ್ನು ಪರಿಗಣಿಸಲಾಗಿದೆ.
‘2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಹಿಂದೂ ಮೂಲಭೂತವಾದಿಗಳು ಪತ್ರಕರ್ತರ ವಿರುದ್ಧ ಕಿಡಿ ಕಾರುವುದು ಹೆಚ್ಚಿದೆ’ ಎಂದು ವರದಿ ಹೇಳಿದೆ.
ಜನರ ದೃಷ್ಟಿಕೋನ ಬದಲಿಸಬಲ್ಲವು ಪತ್ರಿಕಾ ಬರಹ
ವಾಷಿಂಗ್ಟನ್ (ಪಿಟಿಐ): ಪತ್ರಿಕೆಗಳಲ್ಲಿ ಪ್ರಕಟವಾಗುವ ಅಭಿಪ್ರಾಯ, ಚಿಂತನೆಯುಳ್ಳ ಬರಹಗಳು ಜನರ ಮನಸ್ಥಿತಿ ಬದಲಾಯಿಸಬಲ್ಲವು ಎಂದು ಅಧ್ಯಯನವೊಂದು ತಿಳಿಸಿದೆ.
ಜನರಲ್ಲಿನ ರಾಜಕೀಯ ದೃಷ್ಟಿಕೋನಗಳ ಮೇಲೆ ಪತ್ರಿಕಾ ವರದಿ ಪ್ರಭಾವ ಬೀರುತ್ತವೆ ಎಂಬ ಅಧ್ಯಯನ ವರದಿಯನ್ನು ಪೊಲಿಟಿಕಲ್ ಸೈನ್ಸ್ ಪತ್ರಿಕೆ ಪ್ರಕಟಿಸಿದೆ.
ಸಂಪಾದಕೀಯ ಪುಟದ ಎದುರಿನ ‘ಒಪೆಡ್’ ಪುಟದ ಗಂಭೀರ ಲೇಖನಗಳನ್ನು ಬರೆಯಲು ವ್ಯಯಿಸುವ ಸಮಯದ ಸಾರ್ಥಕತೆ ಮತ್ತು ಓದುಗರು ನಿಜಕ್ಕೂ ಈ ಪುಟ ಓದಿ ಪ್ರಭಾವಿತರಾಗುತ್ತಿದ್ದಾರಾ? ಎಂದು ತಿಳಿಯಲು ಅಮೆರಿಕದ ಯಾಲೆ ವಿಶ್ವವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಅಲೆಕ್ಸಾಂಡರ್ ಕಾಪ್ಪೊಕ್ ಈ ಅಧ್ಯಯನ ನಡೆಸಿದ್ದಾರೆ.
‘ಪತ್ರಿಕಾ ಬರಹಗಳು ಜನರ ರಾಜಕೀಯ ದೃಷ್ಟಿಕೋನದ ಮೇಲೆ ಪ್ರಭಾವ ಬೀರುವುದರೊಂದಿಗೆ, ಅವರ ಮನವೊಲಿಸುವಲ್ಲಿಯೂ ಯಶಸ್ವಿಯಾಗಿವೆ’ ಎನ್ನುತ್ತಾರೆ ಕಾಪ್ಪೊಕ್.