ಮಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ಜನರ ನಿರೀಕ್ಷೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ಜನರ ಪ್ರಣಾಳಿಕೆ. ಆದರೆ, ಬಿಜೆಪಿ ಪ್ರಣಾಳಿಕೆಯಲ್ಲಿ ಆರ್ಎಸ್ಎಸ್ ವಿಚಾರಧಾರೆ, ಭ್ರಷ್ಟಾಚಾರ, ರೆಡ್ಡಿ ಸಹೋದರರ ಚಿಂತನೆ ತುಂಬಿರುತ್ತೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಇಲ್ಲಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
ನಮಗೆ ಜನರ ಜತೆಗಿನ ಸಂಪರ್ಕದಲ್ಲಿ ನಂಬಿಕೆ ಇದೆ. ಮುಂದಿನ ಐದು ವರ್ಷ ಏನು ಮಾಡಬೇಕು ಎಂಬುದನ್ನು ಜನರ ಜತೆ ಚರ್ಚಿಸಿ ನಾವು ತೀರ್ಮಾನ ಮಾಡಿದ್ದೇವೆ ಎಂದರು.
ಬಿಜೆಪಿಯಲ್ಲಿ ಮೂರು ಮಂದಿ ಕೊಠಡಿಯಲ್ಲಿ ಕುಳಿತು ಪ್ರಣಾಳಿಕೆ ರೂಪಿಸುತ್ತಾರೆ. ಅವರಿಗೆ ಸಂಘ ಪರಿವಾರ ಮತ್ತು ರೆಡ್ಡಿ ಸಹೋದರರು ಏನು ಹೇಳುತ್ತಾರೆ ಎಂಬುದು ಮುಖ್ಯ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ತಮ್ಮ ಪಕ್ಷಕ್ಕೆ ಬಸವಣ್ಣನ ಸಿದ್ಧಾಂತದಲ್ಲಿ ನಂಬಿಕೆ ಇದೆ. ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ 99ರಷ್ಟನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಬಾರಿಯೂ ಅದು ಪುನರಾವರ್ತನೆ ಆಗುತ್ತದೆ ಎಂದರು.
ಕರ್ನಾಟಕದ ಚುನಾವಣೆ ದೇಶಕ್ಕೆ ದಿಕ್ಸೂಚಿ ಆಗಲಿದೆ. ಭಾರತದ ಭವಿಷ್ಯದ ಬದಲಾವಣೆಗೆ ಇದು ನಾಂದಿ ಹಾಡಲಿದೆ ಎಂದು ರಾಹುಲ್ ಹೇಳಿದರು.