ಶ್ರೀನಗರ:ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದಿನ್ನ ಮುಖಂಡ ಸೈಯದ್ ಸಲಾವುದ್ದೀನ್ನ ಪುತ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಗುರುವಾರ ಬೆಳಿಗ್ಗೆ ಶ್ರೀನಗರದಲ್ಲಿ ಬಂಧಿಸಿದೆ.
ಸೈಯದ್ ಶಕಿಲ್ ಅಹಮದ್ ಬಂಧಿತ ಆರೋಪಿ. ಈತ ಭಯೋತ್ಪಾದನೆ ಕೃತ್ಯ ನಡೆಸಿದ ಆರೋಪ ಹೊತ್ತಿದ್ದು, ನಗರದ ರಾಮ್ಘರ್ ಪ್ರದೇಶದಲ್ಲಿ ನಡೆದ ದಾಳಿ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಕಿಲ್ ಸೌರಾದಲ್ಲಿರುವ ‘ಶೇರ್–ಇ–ಕಾಶ್ಮೀರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ನ ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಐಎ ತಂಡವು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಲಾವುದ್ದಿನ್ನ ಎರಡನೇ ಪುತ್ರ ಶಕಿಲ್ನನ್ನು ಬಂಧಿಸಿದ್ದಾರೆ ಎಂದು ಎನ್ಡಿ ಟಿ.ವಿ ವರದಿ ಮಾಡಿದೆ.
ಹಿಜ್ಬುಲ್ ಮುಖ್ಯಸ್ಥನ ಮತ್ತೊಬ್ಬ ಪುತ್ರ ಶಾಹಿದ್ ಯೂಸುಫ್ನನ್ನು 2017ರ ಅಕ್ಟೋಬರ್ನಲ್ಲಿ ಬಂಧಿಸಲಾಗಿದೆ. ಶಾಹಿದ್ ಯೂಸುಫ್ ಜಮ್ಮು ಮತ್ತು ಕಾಶ್ಮೀರದ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಬಂಧಿಸಲಾಗಿತ್ತು. ಬಳಿಕ, ಇಲಾಖೆ ಆತನನ್ನು ಅಮಾನತುಗೊಳಿಸಿತ್ತು.