ಬಾಗಲಕೋಟೆ: ಜಿಲ್ಲೆಯ ಕೆಲವು ಭಾಗದಲ್ಲಿಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ (ಲದ್ದಿ ಹುಳು) ಬಾಧೆ ಕಾಣಿಸಿಕೊಂಡಿದೆ.
ಗುಂಪಿನಲ್ಲಿ ದಾಳಿ ಮಾಡಿ ಗೋವಿನ ಜೋಳದ ಸುಳಿಯಲ್ಲಿನ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ. ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೊಚರಿಸುತ್ತವೆ. ಎಲೆಗಳಲ್ಲಿ ದೊಡ್ಡ ದೊಡ್ಡ ರಂಧ್ರಗಳನ್ನು ಕೊರೆಯುತ್ತವೆ.ಜೊತೆಗೆ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಬೆಳೆಗೆ ತೀವ್ರ ಹಾನಿ ಮಾಡುತ್ತವೆ.
ಗೋವಿನ ಜೋಳದ ಬೆಳೆಯಲ್ಲಿ ಈ ರೀತಿಯ ರಂಧ್ರಗಳು ಕಂಡುಬಂದಲ್ಲಿ ಸೈನಿಕ ಹುಳು ಒಳಗಡೆ ಇದೆ ಎಂದು ಭಾವಿಸಬೇಕು. ಈ ಹುಳುಗಳು ಹೆಚ್ಚಾದಂತೆ ಹಾನಿಯ ಪ್ರಮಾಣ ತೀವ್ರವಾಗುತ್ತದೆ. ನಿರಂತರವಾಗಿ ಆಹಾರ ಭಕ್ಷಿಸುವ ಕಾರಣ ಹೊಲದಲ್ಲಿ ಆಹಾರವು ಖಾಲಿಯಾದ ತಕ್ಷಣ ಮತ್ತೊಂದು ಕಡೆಗೆ ದಾಳಿ ಇಡುತ್ತವೆ.
ಸೈನಿಕ ಹುಳುವಿನ ನಿರ್ವಹಣೆ :
ಬೆಳೆಯ ಎತ್ತರ ಕಡಿಮೆಯಿದ್ದಲ್ಲಿ : ರಾಸಾಯನಿಕಗಳಾದ ಎಮಾಮೆಕ್ಟೆನ್ ಬೆಂಜೋಯೆಟ್ ಶೇ 5 ಎಸ್.ಜಿ. (Emamectin benzoate) 0.4 ಗ್ರಾಂ ಅಥವಾ ಸ್ಪೈನೋಸ್ಯಾಡ್ ಶೇ 45 ಎಸ್.ಸಿ. (Spinosad) 0.2 ಮಿ.ಲೀ. ಅಥವಾ ಕ್ಲೋರೆಂಟ್ರಾನಿಲಿಪ್ರೋಲ್ ಶೇ 18.5 ಎಸ್.ಸಿ. (Chlorantraniliprole) 0.2 ಮಿ.ಲೀ. ಅಥವಾ ಫ್ಲ್ಯೂಬೆಂಡಿಯಾಮೈಡ್ ಶೇ 39.35 ಎಸ್.ಸಿ. (Flubendiamide) 0.1ಮಿ.ಲೀ. ಅಥವಾ ಲ್ಯಾಮ್ಡಾ ಸೈಹೆಲೋಥ್ರೀನ್ ಶೇ 5 ಇ.ಸಿ.(Lambda cyhalothrin) 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿ ಹಾಗೂ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು. ಜೈವಿಕ ಕ್ರಮವಾಗಿ 2 ಗ್ರಾಂ ನ್ಯೂಮೋರಿಯಾ ರಿಲೈ (Nomuraea rileyi) ಅಥವಾ 2 ಗ್ರಾಂ ಬಿಟಿ ದಂಡಾಣು (Bacillus thuringiensis) ಅಥವಾ 2 ಗ್ರಾಂ ಮೆಟಾರೈಜಿಯಂ (Metarhizium) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ಬೆಳಿಗ್ಗೆ ಅಥವಾ ಸಾಯಂಕಾಲ ಮಾಡುವುದು ಸೂಕ್ತ.
ಬೆಳೆಯು ಎತ್ತರವಾಗಿದ್ದಲ್ಲಿ ಒಂದು ಎಕರೆಗೆ 20 ಕಿ.ಜಿ. ಯಂತೆ ವಿಷಪಾಷಾಣ ಬೇಕಾಗುತ್ತದೆ. ವಿಷಪಾಷಾಣ ತಯಾರಿಸುವ ವಿಧಾನ: 2 ಕಿ.ಜಿ. ಬೆಲ್ಲ + 250 ಮಿ.ಲೀ.ಮೋನೊಕ್ರೋಟೊಫಾಸ್ ಶೇ 36 ಎಸ್.ಎಲ್. (Monocrotophos) +20 ಕಿ.ಜಿ. ಭತ್ತ ಅಥವಾ ಗೋಧಿ ತೌಡು ತಕ್ಕ ಮಟ್ಟಿಗೆ ನೀರನ್ನು ಬೆರೆಸಿ ರಾತ್ರಿಯಿಡಿ ಕಳೆಯಲು ಬಿಡಬೇಕು. ಅಥವಾ 2 ಕಿ.ಜಿ. ಬೆಲ್ಲ + 20 ಕಿ.ಜಿ. ಭತ್ತ ಅಥವಾ ಗೋಧಿ ತೌಡು ತಕ್ಕ ಮಟ್ಟಿಗೆ ನೀರನ್ನು ಬೆರೆಸಿ ರಾತ್ರಿಯಿಡಿ ಕಳೆಯಲು ಬಿಟ್ಟು ಮಾರನೇ ದಿನ 200 ಗ್ರಾಂ ಥೈಯೋಡಿಕಾರ್ಬ (Thiodicarb)ಕೀಟನಾಶಕ ಮಿಶ್ರಣ ಮಾಡಿ ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.
ಕೀಡೆಗಳು ವಿಷಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಹೊಲದಲ್ಲಿ ಇಟ್ಟು ಕೀಡೆಗಳನ್ನು ಆಕರ್ಷಿಸಿ ನಾಶ ಮಾಡಬಹುದು. ಕೀಟಬಾಧೆ ಕಂಡ ತಕ್ಷಣ ತುರ್ತಾಗಿ ಹಾಗೂ ಸಾಮೂಹಿಕವಾಗಿ ರೈತರು ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಇಲ್ಲವೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.