ಹಾಸನ: ಕುತೂಹಲ ಕೆರಳಿಸಿದ್ದ ಜಿಲ್ಲೆಯ ರಾಜಕೀಯ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಏಳು ಕ್ಷೇತ್ರಗಳ ಪೈಕಿ ಜೆಡಿಎಸ್ ಆರು ಸ್ಥಾನ ಪಡೆದರೆ, ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ.
ಘಟಾನುಘಟಿ ರಾಜಕಾರಣಿಗಳೆಸಿದ್ದ ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಸ್.ಪ್ರಕಾಶ್ ಹಾಗೂ ಸಚಿವ ಎ.ಮಂಜು ಹೀನಾಯ ಸೋಲು ಕಂಡರು.
ಹಾಸನದಲ್ಲಿ ಗೌಡರ ಶಿಷ್ಯ ಎಚ್.ಎಸ್.ಪ್ರಕಾಶ್ ಅವರಿಗೆ ಬಿಜೆಪಿಯ ಹೊಸ ಮುಖ ಪ್ರೀತಂ ಜೆ. ಗೌಡ ಅವರು ಸೋಲಿನ ರುಚಿ ತೋರಿಸಿದರು. 19 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಿದರು.
ಹೊಳೆನರಸೀಪುರದಲ್ಲಿ ಪ್ರಭಾವಿ ರಾಜಕಾರಣಿ ಜೆಡಿಎಸ್ನ ಎಚ್.ಡಿ.ರೇವಣ್ಣ ವಿರುದ್ಧ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್ನ ಬಿ.ಪಿ.ಮಂಜೇಗೌಡ ಸೋಲುನುಭವಿಸಿದ್ದಾರೆ. ಒಕ್ಕಲಿಗ ಸಮುದಾಯದ ಜೆಡಿಎಸ್ನ ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ ಲಿಂಗಾಯತೇತರ ಶಾಸಕರಾಗಿ ದಾಖಲೆ ಸ್ಥಾಪಿಸಿದ್ದಾರೆ.
ಮೀಸಲು ಕ್ಷೇತ್ರ ಸಕಲೇಶಪುರದಲ್ಲಿ ಜೆಡಿಎಸ್ನ ಎಚ್.ಕೆ.ಕುಮಾರಸ್ವಾಮಿ ಹ್ಯಾಟ್ರಿಕ್ ಸಾಧಿಸಿದರು. ಬಿಜೆಪಿಯ ಜೆ.ಸೋಮಶೇಖರ್ ಪ್ರಬಲ ಪೈಪೋಟಿ ನೀಡಿದರೇ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಮೂರನೇ ಸ್ಥಾನ ಪಡೆದರು. ಕೊನೆ ಚುನಾವಣೆ ಎಂದೇ ಕಣಕ್ಕಿಳಿದಿದ್ದ ಶ್ರವಣಬೆಳಗೊಳದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಪುಟ್ಟೇಗೌಡ ಸೋಲಿನೊಂದಿಗೆ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಾಹುಬಲಿ ಮೂರ್ತಿ ಎತ್ತರದಷ್ಟೇ ಭಾರಿ ಅಂತರದ ಮತಗಳಿಂದ ಬಾಲಕೃಷ್ಣ ಜಯಭೇರಿ ಬಾರಿಸಿದರು.
ಉಸ್ತುವಾರಿ ಸಚಿವ ಎ.ಮಂಜು ಅವರು ಜೆಡಿಎಸ್ನ ಎ.ಟಿ.ರಾಮಸ್ವಾಮಿ ವಿರುದ್ಧ ಪರಭಾವಗೊಂಡರು. ಆಡಳಿತ ವಿರೋಧಿ ಅಲೆಯಲ್ಲಿ ರಾಮಸ್ವಾಮಿ ಗೆಲುವಿನ ದಡ ಸೇರಿದರು.
ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದಿ.ವೈ.ಎನ್. ರುದ್ರೇಶ್ಗೌಡರ ಪತ್ನಿ ಎಂ.ಎನ್.ಕೀರ್ತನಾ ಸೋತಿದ್ದಾರೆ. ಜೆಡಿಎಸ್ ಅಲೆ ನಡುವೆ ಅನುಕಂಪದ ಅಲೆ ಕೈ ಹಿಡಿಯಲಿಲ್ಲ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತ್ತಿದ್ದ ಜೆಡಿಎಸ್ನ ಕೆ.ಎಸ್.ಲಿಂಗೇಶ್ ಗೆಲುವಿನ ನಗೆ ಬೀರಿದರು. ಕೀರ್ತನಾಗೆ ಪತಿ ಅಗಲಿಕೆಯಿಂದ ಎದ್ದಿರುವ ಅನುಕಂಪದ ಅಲೆ ಮುನ್ನಡೆ ತರಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ರುದ್ರೇಶ್ಗೌಡರು ಶಾಸಕರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ಕಾರ್ಯ ಕ್ರಮಗಳು ಕೈ ಹಿಡಿಯಲಿಲ್ಲ. ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಿತು.
ದೇವೇಗೌಡರ ತೀರ್ಮಾನ ಅಂತಿಮ
ಕ್ಷೇತ್ರದ ಜನರು, ತಂದೆ ಎಚ್.ಡಿ.ದೇವೇಗೌಡ, ಆಶೀರ್ವಾದ, ಸಹೋದರ ಕುಮಾರಸ್ವಾಮಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಸಮ್ಮಿಶ್ರ ಸರ್ಕಾರ ರಚನೆ ವಿಷಯದಲ್ಲಿ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ನಿರ್ಧಾರ ಅಂತಿಮ. ಹಾಸನದಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್–ಬಿಜೆಪಿ ಒಳ ಒಪ್ಪಂದ ಕಾರಣ. ಅದಕ್ಕೆ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ
– ಎಚ್.ಡಿ.ರೇವಣ್ಣ, ಶಾಸಕ, ಜೆಡಿಎಸ್, ಹೊಳೆನರಸೀಪುರ
ಸತ್ಯ, ಪ್ರಾಮಾಣಿಕತೆಗೆ ಸಂದ ಜಯ
ಸತ್ಯ, ಪ್ರಾಮಾಣಿಕತೆ, ನ್ಯಾಯಕ್ಕೆ ಸಂದ ಜಯವಾಗಿದೆ. ಕ್ಷೇತ್ರದ ಜನರು ಆಸೆ, ಆಮಿಷಗಳಿಗೆ ಬಲಿಯಾಗದೆ ಮತ ಚಲಾವಣೆ ಮಾಡಿದ್ದಾರೆ. ಜವಾಬ್ದಾರಿ ಹೆಚ್ಚಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮತದಾರರಿಗೆ ಶುದ್ಧವಾದ ಆಡಳಿತ ನೀಡುತ್ತೇನೆ.
ದೂರದೃಷ್ಟಿ ಇಟ್ಟುಕೊಂಡು ಹೊಂದಾಣಿಕೆ ಮಾಡಿಕೊಳ್ಳುವಂತೆ ದೇವೇಗೌಡರ ಜತೆ ಚರ್ಚಿಸಿದ್ದೇನೆ. ಬೆಂಗಳೂರು ಬಿಬಿಎಂಪಿ ಯಂತೆ ಆಗಬಾರದು. ಮುಂದೆ ವಿಧಾನ ಪರಿಷತ್ , ರಾಜ್ಯಸಭಾ, ಲೋಕಸಭಾ ಚುನಾವಣೆ ಇದೆ. ಇದನ್ನೆಲ್ಲಾ ಗಮನದಲ್ಲಿರಿಸಿಕೊಳ್ಳುವಂತೆ ಗೌಡರಿಗೆ ಹೇಳಿದ್ದೇನೆ
– ಎ.ಟಿ.ರಾಮಸ್ವಾಮಿ, ಅರಕಲಗೂಡು ಜೆಡಿಎಸ್ ಶಾಸಕ
ಬದಲಾವಣೆ ಬಯಸಿದ ಜನತೆ
19 ವರ್ಷಗಳ ಬಳಿಕ ಹಾಸನದಲ್ಲಿ ಬಿಜೆಪಿ ಖಾತೆ ತೆರೆದಿದೆ. ಜನರು ಬದಲಾವಣೆ ಬಯಸಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ. ಜವಾಬ್ದಾರಿ ಹೆಚ್ಚಿದ್ದು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಾಲ್ಕು ವರ್ಷಗಳಿಂದ ಸೇವಾ ಮನೋಭಾವದಿಂದ ಕೆಲಸ ಮಾಡಿದೆ. ಕಸ ತೆಗೆಯುತ್ತೇನೆ, ನೀರು ಕೊಡುತ್ತೇನೆ ಅಂದಾಗ ಲೇವಡಿ ಮಾಡಿದರು. ಕ್ಷೇತ್ರದ ಜನರಿಗೆ 24*7 ಕುಡಿಯುವ ನೀರು, ಗುಂಡಿ, ದೂಳು ಮುಕ್ತ, ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವುದು ಹಾಗೂ ಪದವೀಧರರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು
– ಪ್ರೀತಂ ಜೆ.ಗೌಡ, ಹಾಸನ ಬಿಜೆಪಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.