ಚುನಾವಣಾ ಸಂದರ್ಭದಲ್ಲಿ ಹಲವು ಮುಖಂಡರು ಆಡಿದ ಮಾತುಗಳನ್ನು ಉಲ್ಲೇಖಿಸಿ, ಎನ್. ನರಹರಿ ಅವರು ‘ಆಡಿದ ಮಾತಿಗೆ ಅರ್ಥವಿಲ್ಲವೇ?’ (ವಾ.ವಾ., ಮೇ 21) ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿ, ರಾಜಕಾರಣಿಗಳು ಆಡುವ ಮಾತುಗಳನ್ನು ನಮ್ಮ ಮತದಾರರು ನಂಬುವುದನ್ನು ಬಿಟ್ಟು ದಶಕಗಳೇ ಸಂದಿವೆ. ತಾವು ಇನ್ನೂ ನಂಬಿದ್ದೀರಿ ಎಂದರೆ ಆಶಾವಾದಿಗಳೇ ಸರಿ.
ಕೆಲವೇ ವರ್ಷಗಳ ಹಿಂದೆ ಕುಮಾರಸ್ವಾಮಿಯವರು ಇಪ್ಪತ್ತು ತಿಂಗಳ ಆಡಳಿತ ನಡೆಸಿ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೆ ‘ವಚನಭ್ರಷ್ಠ’ ಅನ್ನಿಸಿಕೊಂಡದ್ದು ಮರೆತುಹೋಯಿತೇ? ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆಡಿದ ಮಾತುಗಳನ್ನು ಮರೆತಿರಾ?
ರಾಜಕಾರಣಿಗಳ ಮಾತು ನಂಬಿ ಕೆಟ್ಟವರು ಮತದಾರರು ಮಾತ್ರ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದೇ ನಕ್ಕು ಮುಂದೆ ಸಾಗಬೇಕು.