ಬೆಂಗಳೂರು: ಕಾಲೇಜಿನಲ್ಲಿ ಕಳೆದ ನೆನಪುಗಳು, ಗುರುಗಳಿಗೆ ಕೀಟಲೆ ಮಾಡಿದ್ದು, ಸ್ನೇಹಿತರ ಕುಶಲೋಪರಿ, ಅಳು–ನಗು... ಹೀಗೆ ಭಾವಾನುರಾಗದ ವಾತಾವರಣವೊಂದು ಇಲ್ಲಿ ಮೂಡಿತ್ತು.
ಇದು ಕಂಡುಬಂದದ್ದು, ಡಾನ್ ಬಾಸ್ಕೋ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಗೇರುಪಾಳ್ಯದಲ್ಲಿ ಆಯೋಜಿಸಿದ್ದ ‘ಮಿಲನ್–2018’ರ ಕಾರ್ಯಕ್ರಮದಲ್ಲಿ.
‘ನಾವೆಲ್ಲ ಉತ್ತಮ ಹುದ್ದೆಗಳಲ್ಲಿರುವುದಕ್ಕೆ ನಮ್ಮ ಪ್ರಾಧ್ಯಾಪರ ಬೋಧನೆ ಹಾಗೂ ಮಾರ್ಗದರ್ಶನವೇ ಮೂಲ ಕಾರಣ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಳಗಾವಿ ವಿಭಾಗದ ಉಪವ್ಯವಸ್ಥಾಪಕ ಅಕ್ಷಯ ಜೈನ್ ಹೇಳಿದರು.
‘ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ಸಮಾಜಪರ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶದ ಸತ್ಪ್ರಜೆಯಾದಾಗ ಮಾತ್ರ ಶಿಕ್ಷಣದ ಮೌಲ್ಯ ಹೆಚ್ಚುತ್ತದೆ’ ಎಂದರು.
ಎಪಿಎಂಎಸ್ ಇಂಡಿಯಾ ಪ್ರೈ. ಲಿ.ನ ಭಾರತೀಯ ವಿಭಾಗದ ಮುಖ್ಯಸ್ಥ ಎಸ್.ಬಾಲಾಜಿ, ‘ವಿದ್ಯಾರ್ಥಿಗಳು ಪದವಿಗೆ ಮಾತ್ರ ಸೀಮಿತರಾಗದೆ ಉನ್ನತ ವ್ಯಾಸಂಗಹಾಗೂ ಸಂಶೋಧನೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಡಾನ್ಬಾಸ್ಕೋ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಮುರಳೀಧರ್ ರಾವ್, ‘ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಬದ್ಧವಾಗಿದೆ’ ಎಂದರು.
ಡಾನ್ಬಾಸ್ಕೋ ತಾಂತ್ರಿಕ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಆರ್.ಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಿಸರ್ಗ ಆರ್.ಎನ್., ಕಾರ್ಯದರ್ಶಿ ಆರ್.ಸೋಮಶೇಖರ್, ಸಹ ಕಾರ್ಯದರ್ಶಿ ಪವನ್ಕುಮಾರ್ ಮಾತನಾಡಿದರು.