ಶಿವಮೊಗ್ಗ: ‘ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಕುಮಾರಸ್ವಾಮಿ ಪೂರ್ಣ ಬಹುಮತ ಇಲ್ಲದ ಕಾರಣ ರೈತರ ಸಾಲ ಮನ್ನಾ ಅಸಾಧ್ಯ ಎಂದು ಹೇಳಿರುವುದು ರಾಜ್ಯದ ರೈತ ಸಮುದಾಯಕ್ಕೆ ಬಗೆದ ದ್ರೋಹ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
‘ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯಬೇಕು. ಇಲ್ಲವೆ ರಾಜ್ಯದ ಜನರ ಕ್ಷಮೆಯಾಚಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮೊದಲು ಜೆಡಿಎಸ್ಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಸಚಿವ ಸ್ಥಾನ ಅಧಿಕಾರಕ್ಕಾಗಿ ಲಾಭಿ ಆರಂಭಿಸಿದೆ. ಕಚ್ಚಾಟ ನಡೆದಿದೆ. ಬಹುಮತ ಸಾಬೀತಿಗೂ ಮೊದಲೇ ಕುಮಾರಸ್ವಾಮಿ ರಾಜೀನಾಮೆ ನೀಡುವ ಸಾಧ್ಯತೆ ಇದೆ’ ಎಂದರು.
‘ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಕಾಂಗ್ರೆಸ್ ಶಾಸಕರು ಆತ್ಮಸಾಕ್ಷಿಯ ಮತ ಚಲಾಯಿಸುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲಿ ಜಯಿಸಿದರು ಈ ಸರ್ಕಾರದ ಆಯಸ್ಸು ಕೇವಲ 6 ತಿಂಗಳು’ ಎಂದು ಭವಿಷ್ಯ ನುಡಿದರು.