ವಿರಾಜಪೇಟೆ: ‘ಜಿಲ್ಲೆಯಲ್ಲಿ ಪ್ರತಿ ಸಮುದಾಯಗಳು ಕ್ರೀಡೋತ್ಸವವನ್ನು ಆಚರಿಸುತ್ತಿರುವುದು ಸಮುದಾಯಗಳ ನಡುವೆ ಒಮ್ಮತ ಉಂಟಾಗಲು ಸಾಧ್ಯ ವಾಗುತ್ತಿದೆ’ ಎಂದು ವಿಧಾನಸಭೆಯ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಭಾನು ವಾರ ನಡೆದ ಬಿಲ್ಲವ ಸಮಾಜದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಕ್ರೀಡಾಕೂಟಗಳಿಂದ ವಿವಿಧ ಸಮುದಾಯಗಳು ತಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಸಮುದಾಯಗಳ ಕ್ರೀಡಾಕೂಟ ರಾಷ್ಟ್ರಕ್ಕೆ ಮಾದರಿಯಾಗಿದೆ’ ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಸಿ.ಸಿ.ಬಿ ಡಿವೈಎಸ್ಪಿ ಬಿ.ಆರ್.ಲಿಂಗಪ್ಪ ಮಾತನಾಡಿ, ‘ಸಮುದಾಯ ಬಾಂಧವರು ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಸಮುದಾಯ ಬಾಂಧವರಲ್ಲಿ ಒಮ್ಮತವಿದ್ದರೆ ಸಾಧನೆ ಸಾಧ್ಯ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ ‘ಸಮುದಾಯ ಬಾಂಧವರ ಸಹಕಾರದಿಂದ ಸಂಘಟನೆ ಕಳೆದ 17 ವರ್ಷಗಳಿಂದ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದರಿಂದ ಸಮುದಾಯದ ಕುಟುಂಬಗಳ ನಡುವೆ ಸಾಮರಸ್ಯ ಸಾಧ್ಯವಾಗಿದೆ’ ಎಂದರು.
ತಾಲ್ಲೂಕು ಬಿಲ್ಲವ ಸಮಾಜದಿಂದ ಆಯೋಜಿಸಿದ್ದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಅಮ್ಮತ್ತಿಯ ಬಿಲ್ಲವ ವಾರಿಯರ್ಸ್ ಎ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ಸುಂಟಿಕೊಪ್ಪದ ಬಿಲ್ಲವ ಪ್ಯಾಂಥರ್ಸ್ ತಂಡವನ್ನು ಮಣಿಸಿದ ಬಿಲ್ಲವ ವಾರಿಯರ್ಸ್ ತಂಡ, ಪ್ರಶಸ್ತಿ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಇಂಜಿಲಗೆರೆಯ ಬಿಲ್ಲವ ಜಾಜಿ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ, ವಿರಾಜಪೇಟೆಯ ಬೇಬಿ ಫ್ರೆಂಡ್ಸ್ ಎರಡನೇ ಸ್ಥಾನ ಪಡೆದುಕೊಂಡಿತು.
ಕೇಂದ್ರ ಸಹಕಾರ ಬ್ಯಾಂಕಿನ ಡಿ.ಜಿ.ಎಂ ಬಿ.ಆರ್.ಮೋಹನ್, ಮ್ಯಾನೇಜರ್ ಬಿ.ಕೆ.ಜನಾ ರ್ಧನ್, ಸುಂಟಿಕೊಪ್ಪದ ಬಿಲ್ಲವ ಸೇವಾ ಸಂಘದ ಬಿ.ಎಂ.ಮಣಿ, ತಾಲ್ಲೂಕು ಸಂಘದ ಗೌ.ಅಧ್ಯಕ್ಷ ಬಿ.ರಾಜ, ಉದ್ಯಮಿ ಬಿ.ಆರ್.ಬೋಜಪ್ಪ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಬಿ.ಎಂ.ಗಣೇಶ್, ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಬಿ.ಕೆ.ರಾಮಣ್ಣ, ಅಶ್ವಥ್, ಭರತ್ ಹಾಜರಿದ್ದರು. ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ.ಸತೀಶ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.