ಮುಂಬೈ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿದ್ದ ಚಂಡಮಾರುತ ಸದ್ಯ ಪಶ್ಚಿಮ ಏಷ್ಯಾದ ಒಮನ್ ಮತ್ತು ಬಾಮನ್ ಕರಾವಳಿಯತ್ತ ಮುಖ ಮಾಡಿದೆ.
ಗಂಟೆಗೆ 11 ಕಿ.ಮೀ. ವೇಗದಲ್ಲಿ ಸುಂಟರಗಾಳಿ ಬೀಸುತ್ತಿದ್ದು, ಇದು ಪಶ್ಚಿಮ ಏಷ್ಯಾದಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ. ಮೇ 26ರ ವೇಳೆಗೆ ಇದು ದಕ್ಷಿಣ ಒಮನ್, ಆಗ್ನೇಯ ಯೆಮನ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಮೀನುಗಾರರು ಹಾಗೂ ಹಡಗುಗಳು ಮಹಾರಾಷ್ಟ್ರ–ಗೋವಾ ಕರಾವಳಿ ಭಾಗದಲ್ಲಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯ ಮುಂಬೈನ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.