ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಗೋಣಿಬೀಡು ಪ್ರವೇಸಿಸುತ್ತಿದ್ದಂತೆ ಸಿಗುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ರಸ್ತೆ ಬದಿಯಲ್ಲಿಯೇ ಆಳವಾದ ಕಂದಕ ಬಿದ್ದಿದ್ದು, ಎದುರಿನಿಂದ ಬರುವ ವಾಹನಕ್ಕೆ ದಾರಿ ಬಿಟ್ಟುಕೊಡುವ ವೇಳೆ ವಾಹನಗಳು ಕಂದಕಕ್ಕೆ ಉರುಳುತ್ತಿವೆ. ವಾಹನ ಸವಾರರು ಎಚ್ಚರಗೊಳ್ಳುವಂತೆ ಗುಂಡಿಗೆ ಕೆಂಪುಬಣ್ಣ ಸುತ್ತಿದ ಕೋಲನ್ನು ಅಳವಡಿಸಿದ್ದರೂ, ತಿರುವಿನಿಂದ ಒಮ್ಮೆಲೆ ವಾಹನಗಳು ನುಗ್ಗುವುದರಿಂದ ಎದುರಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಗುಂಡಿಯೊಳಗೆ ವಾಹನಗಳು ಉರುಳುತ್ತಿವೆ.
ಇದೇ ಪ್ರದೇಶದಲ್ಲಿ ಮೂರು ವರ್ಷಗಳ ಹಿಂದೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ನಂತರ ಈ ಪ್ರದೇಶವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಗುಂಡಿ ಮುಚ್ಚುವ ಯತ್ನ ನಡೆಸಿಲ್ಲ. ಇದೀಗ ಶಿರಾಡಿ ಘಾಟಿ ಬಂದ್ ಆಗಿರುವುದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಳವಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.