ತುಮಕೂರು: ಬೆಳೆಗಾರರು ಬೆಳೆದ ಮಾವಿನ ಹಣ್ಣನ್ನು ಆಹಾರ ಸಂಸ್ಕರಣ ಘಟಕದ ಮೂಲಕ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಸಂಘಟನೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಹಸಂಚಾಲಕ ಬಿ.ಉಮೇಶ್ ಮಾತನಾಡಿ, ‘ದೇಶದಲ್ಲಿ ಜಿಎಸ್ಟಿ ಮತ್ತು ನೋಟು ಅಮಾನ್ಯೀಕರಣದಿಂದಾಗಿ ಸಣ್ಣ ಕೈಗಾರಿಗಳು ಮುಚ್ಚಿ ಹೋಗಿವೆ’ ಆರೋಪಿಸಿದರು.
‘ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಪ್ರದೇಶದ ರೈತರಿಗೆ ಈ ಘಟಕದ ಮೂಲಕ ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಖರೀದಿ ಮಾಡುವುದಾಗಿ ಜೊತೆಗೆ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆ ಹಾಗೆಯೇ ಉಳಿದಿದ್ದು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
ಸಿಐಟಿಯು ಸಂಘಟನೆ ತುಮಕೂರು ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ, ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಮಣ್ಯ, ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ, ಸಹ ಸಂಚಾಲಕ ನೌಷಾದ್ ಸೆಹಗನ್, ಕಾರ್ಮಿಕ ಮುಖಂಡರಾದ ರಾಮಚಂದ್ಪಪ್ಪ, ಶ್ರೀಧರ್, ಲಕ್ಷ್ಮಣ್ ಹಾಗೂ ಗೋವಿಂದರಾಜು ಇದ್ದರು.