ಮಥುರಾ: ‘ಮಹಾಭಾರತ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭವಾಗಿತ್ತು’ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಗುರುವಾರ ಹೇಳಿದ್ದಾರೆ.
ಹಿಂದಿ ಪತ್ರಿಕೋದ್ಯಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಕೆಲವು ಮಹಾಕಾವ್ಯಗಳನ್ನು ಉಲ್ಲೇಖ ಮಾಡುವ ಮೂಲಕ, ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭಗೊಂಡಿತ್ತು ಎಂದು ಪ್ರತಿಪಾದಿಸಿದ್ದಾರೆ.
‘ಹಸ್ತಿನಾಪುರದಲ್ಲಿ ಕುಳಿತ ಸಂಜಯ, ಕುರುಕ್ಷೇತ್ರ ಯುದ್ಧವನ್ನು ದೃತರಾಷ್ಟ್ರನಿಗೆ ವಿವರಿಸಿದ್ದ. ಇದು ನೇರಪ್ರಸಾರವಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದ್ದಾರೆ.
ನಾರದರನ್ನು ಗೂಗಲ್ಗೆ ಹೋಲಿಕೆ ಮಾಡಿರುವ ಅವರು, ‘ಗೂಗಲ್ ಈಗಷ್ಟೇ ಆರಂಭವಾಗಿದೆ. ಆದರೆ ನಮ್ಮ ಗೂಗಲ್ ಬಹಳ ಹಿಂದೆಯೇ ಆರಂಭವಾಗಿತ್ತು. ನಾರದ ಮುನಿ ಮಾಹಿತಿಯ ಮೂರ್ತರೂಪವಾಗಿದ್ದರು. ನಾರದ ಎಂದು ಮೂರು ಬಾರಿ ಹೇಳುವ ಮೂಲಕ ಎಲ್ಲಿ, ಯಾವಾಗ ಬೇಕಾದರೂ ಹೋಗಿ ಮಾಹಿತಿ ನೀಡುತ್ತಿದ್ದರು’ ಎಂದಿದ್ದಾರೆ.
ಇದೇ ವೇಳೆ ಪತ್ರಿಕಾ ಸ್ವಾತಂತ್ರ್ಯವನ್ನು ಶ್ಲಾಘಿಸಿದ ಅವರು, ಪತ್ರಕರ್ತರಿಗೆ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.