ಆನೇಕಲ್: ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷ ಆನೇಕಲ್ ತಾಲ್ಲೂಕಿನ ಬಿದರಗುಪ್ಪೆಯ ಬಿ.ಜಿ. ಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಅಪ್ಪಯ್ಯಣ್ಣ ರಾಜೀನಾಮೆಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು.
ಬಿ.ಜಿ.ಆಂಜಿನಪ್ಪ ಮಾತನಾಡಿ, ಬಮೂಲ್ಗೆ ಹೊಸ ರೂಪ ನೀಡುವ ಗುರಿ ಹೊಂದಲಾಗಿದೆ. ₹500ಕೋಟಿ ವೆಚ್ಚದಲ್ಲಿ ಕನಕಪುರದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೈರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಇದರಿಂದಾಗಿ ಹಾಲಿನ ಉತ್ಪನ್ನಗಳನ್ನು ಹೆಚ್ಚು ಮಾಡಿ ಮಾರುಕಟ್ಟೆಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ ಎಂದರು.
ನಾಲ್ಕು ವರ್ಷಗಳಿಂದ ಲಾಭದಲ್ಲಿ ನಡೆಯುತ್ತಿರುವ ಬಮೂಲ್ನ್ನು ಮತ್ತಷ್ಟು ಲಾಭದಾಯಕವಾಗಿ ಮಾಡಿ ಮಾದರಿ ಒಕ್ಕೂಟವನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ ಬಿ.ಜಿ.ಆಂಜಿನಪ್ಪ ಅವರನ್ನು ಬಿಜೆಪಿ ಮುಖಂಡ ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಿ.ಆಂಜಿನಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅತ್ತಿಬೆಲೆ ಎನ್.ಬಸವರಾಜು, ಎಪಿಎಂಸಿ ನಿರ್ದೇಶಕ ಬಿ.ಬಿ.ಐ. ಮುನಿರೆಡ್ಡಿ ಅಭಿನಂದಿಸಿದರು.