ತುಮಕೂರು: ಆಟೋ ಚಾಲಕರು ಶ್ರಮಜೀವಿಗಳಾಗಿದ್ದು, ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಆಟೋ ಚಾಲಕರು ಮತ್ತು ಮಾಲೀಕರ ಪ್ರಕೋಷ್ಠದಿಂದ ವತಿಯಿಂದ ಏರ್ಪಡಿಸಿದ್ದ ’ಆಟೋ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮನೆ ಯೋಜನೆಯಡಿ ನಗರ ಆಟೋ ಚಾಲಕರಿಗೆ ಮನೆಯನ್ನು ನಿರ್ಮಿಸಿ ಕೊಡಲಾಗುವುದು.ಅಪಘಾತ ವಿಮೆ ಸೌಕರ್ಯವನ್ನೂ ಒದಗಿಸಲಾಗುವುದು. ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತಮ್ಮ ಹಾಗೂ ಕುಟುಂಬದ ಹೆಸರು ನೋಂದಾಯಿಸಿ ಆರೋಗ್ಯದ ಸೌಲಭ್ಯ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಬಿಜೆಪಿ ಆಟೋ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೆ.ಎಂ.ಶಿವಕುಮಾರ್ ಮಾತನಾಡಿ, ’ನಗರದಲ್ಲಿರುವ ಆಟೋ ನಿಲ್ದಾಣಗಳನ್ನು ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಸರೋಜಗೌಡ ಅವರು ಹೆಚ್ಚು ಅಂಕ ಗಳಿಸಿದ ಆಟೋ ಚಾಲಕರ ಮಕ್ಕಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಿದರು.
ಬಿಜೆಪಿ ಮುಖಂಡ ಕೊಪ್ಪಲ್ ನಾಗರಾಜ್ ಅವರು ಆಟೋ ಚಾಲಕರಿಗೆ ಸ್ವಂತ ಹಣದಿಂದ ಅಪಘಾತ ವಿಮೆ ಮಾಡಿಸುವುದಾಗಿ ಭರವಸೆ ನೀಡಿದರು.