ಈ ರಸ್ತೆ ಅಭಿವೃದ್ಧಿಗೆ 2011 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅನುದಾನ ಬಿಡುಗಡೆ ಮಾಡಿತ್ತು. ಆಗ ಹೊಳ್ಳರು ತನ್ನ ಪಟ್ಟಾ ಸ್ಥಳವನ್ನು ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದರು. ಆದರೆ ಶೇ75 ಮಾತ್ರ ಕಾಮಗಾರಿ ನಡೆಸಿ ಬಿಟ್ಟು ಬಿಟ್ಟಿದ್ದರು. ಅಪೂರ್ಣಗೊಂಡ ಕಾಮಗಾರಿಯಿಂದ ಕಾಳಿಂಗ ಹೊಳ್ಳರ ಮನೆ ಹಾಗೂ ಹತ್ತಿರದ ಹಲವು ಮನೆಗಳಿಗೆ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ನಡೆದಾಡಲು ಮತ್ತು ಯಾವುದೇ ವಾಹನ ಕೂಡ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಕಾಳಿಂಗ ಹೊಳ್ಳರು 2011 ರಿಂದ ಜಿಲ್ಲಾಧಿಕಾರಿ, ಎ.ಸಿ.ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಪ್ರಯೋಜನವಾಗದಿದ್ದಾಗ ತಹಶೀಲ್ದಾರ್, ಲೋಕಾಯುಕ್ತ, ಎ.ಸಿ.ಬಿ.ಗೂ ದೂರು ನೀಡಿದರು. ಅನಂತರ ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಹೊಳ್ಳರ ಈ ಹೋರಾಟ ಕುರಿತು ಪ್ರಜಾವಾಣಿಯೂ ಸೇರಿದಂತೆ ಹಲವು ಪತ್ರಿಕೆಗಳು ಹಲವುಬಾರಿ ವರದಿ ಮಾಡಿ ಗಮನ ಸೆಳೆದಿದ್ದವು.