9ನೇ ವಿಶ್ವ ಯೋಗ ದಿನದ ಅಂಗವಾಗಿ ಇಂದು ಮುಂಜಾನೆಯಿಂದಲೇ ರಾಜ್ಯದಾದ್ಯಂತ ಯೋಗಾಭ್ಯಾಸ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳು ನಡೆದವು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಯೋಗ ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಒಳಾಂಗಣಗಳಲ್ಲಿ ಯೋಗ ದಿನದ ಆಚರಣೆಗಳು ನಡೆದವು.
9ನೇ ವಿಶ್ವ ಯೋಗ ದಿನದ ಅಂಗವಾಗಿ ಇಂದು ಮುಂಜಾನೆಯಿಂದಲೇ ರಾಜ್ಯದಾದ್ಯಂತ ಯೋಗಾಭ್ಯಾಸ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳು ನಡೆದವು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಯೋಗ ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಒಳಾಂಗಣಗಳಲ್ಲಿ ಯೋಗ ದಿನದ ಆಚರಣೆಗಳು ನಡೆದವು.
ವಿಶ್ವ ಯೋಗ ದಿನದ ಪ್ರಯುಕ್ತ ವಿಜಯನಗರ ಜಿಲ್ಲಾಡಳಿತ ವತಿಯಿಂದ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಗುರುವಾರ ಬೆಳಿಗ್ಹೆ ಇಲ್ಲಿನ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ಶಿಬಿರ ನಡೆಯಿತು.
ಸಂಸದ ವೈ.ದೇವೇಂದ್ರಪ್ಪ ಅವರು ಗಿಡಕ್ಕೆ ನೀರೆರೆಯುವ ಮೂಲಕ ಯೋಗ ಶಿಬಿರ ಉದ್ಘಾಟಿಸಿದರು. ಶಾಸಕ ಎಚ್. ಆರ್. ಗವಿಯಪ್ಪ, ಹೆಚ್ವುವರಿ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು, ಬಿ ಇದ್ದರು. ಬಳಿಕ ನೂರಾರು ಮಂದಿ ಯೋಗ ಮಾಡಿದರು.
ಮೈಸೂರು ಅರಮನೆ ಆವರಣದಲ್ಲಿ ಬುಧವಾರ 9ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಾವಿರಾರು ಮಂದಿ ಯೋಗಾಭ್ಯಾಸ ಮಾಡಿದರು. ಬೆಳಿಗ್ಗೆ 7.25ಕ್ಕೆ ಆರಂಭಗೊಂಡು ಸುಮಾರು 45 ನಿಮಿಷಗಳ ಕಾಲ ಯೋಗಗುರುಗಳ ನೇತೃತ್ವದಲ್ಲಿ ವಿವಿಧ ಆಸನಗಳನ್ನು ಅಭ್ಯಾಸಿಸಲಾಯಿತು.
ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ ಬುಧವಾರ ಬೆಳಿಗ್ಗೆ ಆಯುಷ್ ಇಲಾಖೆ ಮತ್ತು ಜಿಲ್ಲಾ ಆಡಳಿತದಿಂದ ವಿಶ್ವ ಯೋಗ ದಿನದ ದಿನ ಪ್ರಯುಕ್ತ ಯೋಗ ಶಿಬಿರ ಆಯೋಜಿಸಲಾಗಿತ್ತು.
ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಶಿಬಿರ ಉದ್ಘಾಟಿಸಿದರು.
ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಂತ. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ, ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು.– ಸಿದ್ಧಲಿಂಗ ಸ್ವಾಮೀಜಿ
ಹುಬ್ಬಳ್ಳಿ: ನಗರದ ಕರ್ನಾಟಕ ಜಿಮಖಾನಾ ಮೈದಾನ, ಇಂದಿರಾ ಗಾಜಿನಮನೆ ಸೇರಿದಂತೆ ವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಕ್ಷಮತಾ ಸೇವಾ ಸಂಸ್ಥೆ ಹಾಗೂ ಧನ್ಯೊಸ್ಮಿ ಯೋಗ ಕೇಂದ್ರದಿಂದ ಜಿಮಖಾನಾ ಮೈದಾನದಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ತೆಂಗಿನಕಾಯಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು.
ಸಾರ್ವಜನಿಕರು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.
ರಾಮನಗರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಬುಧವಾರ 9ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಯೋಗಾಸ್ತರು ಸಾಮೂಹಿಕ ಯೋಗಾಭ್ಯಾಸ ಮಾಡಿದರು.
ಚಿಕ್ಕಬಳ್ಳಾಪುರ: ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ. ಸುಧಾಕರ್ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಯೋಗ ಅಭ್ಯಾಸ ಮಾಡುವ ಮೂಲಕ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಗ ತರಬೇತುದಾರರಾದ ನಾಗರಾಜ್, ಲೋಕನಾಥ್, ಎಂ. ರವಿ, ಗೋವಿಂದ್,ಮಹೇಶ್, ರಾಮಚಂದ್ರ ರೆಡ್ಡಿ, ವೀಣಾ ಲೋಕನಾಥ್, ಸುಧಾ ನಾಗರಾಜ್ ಅವರು ಆಸನಗಳನ್ನು ಹೇಳಿಕೊಟ್ಟರು.
ಮಂಗಳೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಪುರಭವನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಆಯೋಜಿರುವ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಎಚ್ ಒ ಡಾ.ಕಿಶೋರ್ ಕುಮಾರ್, ಆಯುಷ್ ಅಧಿಕಾರಿ ಡಾ. ಇಕ್ಬಾಲ್ ಅಹಮ್ಮದ್ ಭಾಗವಹಿಸಿದರು.
ಬೀದರ್: ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಅವರು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮಾಡಿದರು. ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.