ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಪ್ರತಿಷ್ಠಿತ ಶಾಲೆಯ ಶಿಕ್ಷಕನ ಬಂಧನ

Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಪ್ರತಿಷ್ಠಿತ ವಸತಿಯುತ ಪ್ರೌಢಶಾಲೆಯಲ್ಲಿ ಬುಡಕಟ್ಟು ಸಮುದಾಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕರೊಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

17 ವರ್ಷದ ಬಾಲಕ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು, ವಾರ್ಷಿಕ ಪರೀಕ್ಷೆ ಬರೆದಿದ್ದಾನೆ. ಇದೇ 5ರ ರಾತ್ರಿ ಈ ಘಟನೆ ನಡೆದಿದೆ. 6 ರಂದು ಕೊನೆಯ ಪರೀಕ್ಷೆ ಇಂಗ್ಲಿಷ್‌ ಇತ್ತು.

ಸಲಿಂಗಕಾಮಿಯಾಗಿರುವ ಶಿಕ್ಷಕ, ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ತನ್ನ ಕೊಠಡಿಗೆ ಕರೆಯಿಸಿ, ಬಾಲ‌ಕನಿಗೆ ಮದ್ಯಪಾನ, ದೂಮಪಾನ ಮಾಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

5ರಂದು ಘಟನೆ ನಡೆದಿದ್ದರೂ, ದೂರು ಶುಕ್ರವಾರ (ಏ.12) ದಾಖಲಾಗಿದೆ. ಬಾಲಕನು ಶುಕ್ರವಾರ ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಿಗೆ ದೂರು ನೀಡಿದ್ದಾನೆ. ಒಡನಾಡಿ ನಿರ್ದೇಶಕ ಪರಶುರಾಮ್‌ ಎಂ.ಎಲ್‌ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

‘ಪ್ರಕರಣ ನಡೆದು 24 ಗಂಟೆಗಳ ಒಳಗಾಗಿ ಎಫ್‌ಐಆರ್‌ ದಾಖಲಾಗಬೇಕು. ಆದರೆ ಇಲ್ಲಿ ವಾರ ಕಳೆದಿದೆ. ನಾವು ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದ ಬಳಿಕ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಮನವಿಗೆ ಸ್ಪಂದಿಸಿದ್ದಾರೆ. ಹಿಂದೆ ಪ್ರಕರಣಗಳು ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸುವ ಭರವಸೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಯವರು ನೀಡಿದ್ದಾರೆ’ ಎಂದು ಒಡನಾಡಿ ಸಂಸ್ಥೆಯ ಪರಶುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದಿನಿಂದಲೂ ಕೃತ್ಯ: ಆರೋಪಿ ಶಿಕ್ಷಕ ಹಲವು ವರ್ಷಗಳಿಂದಲೂ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾ ಬಂದಿದ್ದಾರೆ ಎಂದು ದೂರಲಾಗಿದೆ.

‘2000ದಲ್ಲಿ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಆದರೆ, ಪೊಲೀಸರಿಗೆ ದೂರು ನೀಡುತ್ತಾರೆ ಎಂಬ ಭಯದಲ್ಲಿ ಶಿಕ್ಷಕ ಕೈಯನ್ನು ಕತ್ತರಿಸಿಕೊಂಡಿದ್ದರಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು. ಇದರಿಂದ ಮುಖ್ಯ ಶಿಕ್ಷಕರು ಹಾಗೂ ಇತರರು ಆತಂಕಗೊಂಡಿದ್ದರು. ಆ ಪ್ರಕರಣ ನಂತರ ಮುಂದುವರಿದಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

'ಹಲವು ಮಕ್ಕಳು ದೌರ್ಜನ್ಯ ನಡೆದಿದ್ದರೂ, ಹೇಳಲು ಧೈರ್ಯ ಸಾಲದೆ ಸುಮ್ಮನಿದ್ದರು. ಹಲವರು ಶಾಲೆಯನ್ನೇ ತೊರೆದಿದ್ದರು’ ಎಂದು ತಿಳಿದು ಬಂದಿದೆ.

‘ಸಾಕ್ಷರರೇ ರಾಕ್ಷಸರಾದರೆ...’

‘ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವುದೇ ಕಷ್ಟ. ಅಂತಹದ್ದರಲ್ಲಿ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಲು ಬಂದವರ ಮೇಲೆ ಸಾಕ್ಷರತೆ ಹೊಂದಿರುವವರೇ ರಾಕ್ಷಸೀ ಕೃತ್ಯ ನಡೆಸುವುದು ನಿಜಕ್ಕೂ ಹೇಯವಾದ ಕೃತ್ಯ. ಪರೀಕ್ಷೆಯ ಹಿಂದಿನ ದಿನ ಬಾಲಕನ ಮೇಲೆ ದೌರ್ಜನ್ಯ ನಡೆದಿದೆ. ಮಾನಸಿಕ ಆಘಾತ ನೋವಿನ ನಡುವೆಯೇ ಆತ ಮರುದಿನ ಪರೀಕ್ಷೆ ಬರೆದಿದ್ದಾನೆ’ ಎಂದು ಪರಶುರಾಮ್‌ ತಿಳಿಸಿದರು.  ‘ಬಾಲಕನಿಗೆ ನಾವು ಕೌನ್ಸೆಲಿಂಗ್‌ ಮಾಡಿದ್ದೇವೆ. ನಡೆದುದ್ದನ್ನೆಲ್ಲಾ ನಮಗೆ ತಿಳಿಸಿದ್ದಾನೆ. ಈ ಶಿಕ್ಷಕ ಹಲವು ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಶಾಲೆಯ ಆಡಳಿತ ಮಂಡಳಿಯೂ ಅದನ್ನು ಒಪ್ಪಿಕೊಂಡಿರುವ ಬಗ್ಗೆಯೂ ಮಾಹಿತಿ ಇದೆ’ ಎಂದು ಅವರು ಹೇಳಿದರು. 

ಪೋಕ್ಸೊ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ಶಿಕ್ಷಕನನ್ನು ಬಂಧಿಸಲಾಗಿದೆ. ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ.
–ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಶಿಕ್ಷಕ ಹಿಂದಿನಿಂದಲೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು ಆ ಪ್ರಕರಣಗಳ ತನಿಖೆಯೂ ನಡೆಯಬೇಕು.
–ಪರಶುರಾಮ್‌, ಒಡ‌ನಾಡಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT