ಹುಬ್ಬಳ್ಳಿ: ಮೂರು ವರ್ಷಗಳ ಹಿಂದೆ ಸ್ಥಾಪನೆಯಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂದಿಗೂ ತರಗತಿಗಳು ಶೆಡ್ನಲ್ಲಿಯೇ ನಡೆಯುತ್ತಿವೆ. ಅದೂ ಒಂದೇ ಆವರಣದಲ್ಲಿ ಮೂರು ತರಗತಿ! ಇದು ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಕೀರ್ತಿ ಪಡೆದಿರುವ ವಿಶ್ವವಿದ್ಯಾಲಯದ ಸ್ಥಿತಿ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಟ್ಟಡದಲ್ಲಿಯೇ ಸದ್ಯ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದೇ ಕಟ್ಟಡದ ಮೂರು ಕೊಠಡಿಗಳನ್ನು ತರಗತಿಗಳಿಗೂ ಬಳಸಲಾಗುತ್ತಿದೆ. ಕಟ್ಟಡದ ಪಕ್ಕದಲ್ಲಿಯೇ ಶೆಡ್ ನಿರ್ಮಿಸಲಾಗಿದ್ದು, ಅಲ್ಲಿ ಮೂರು ತರಗತಿಗಳನ್ನು ನಡೆಸಲಾಗುತ್ತಿದೆ. ಇದನ್ನೇ ಸಭೆ–ಸಮಾರಂಭಗಳಿಗೆ ಸಭಾಂಗಣವಾಗಿಯೂ ಬಳಸಿಕೊಳ್ಳಲಾಗುತ್ತಿದೆ!
ವಿಶ್ವವಿದ್ಯಾಲಯಕ್ಕೆ ಸರ್ಕಾರ 160 ಎಕರೆ ಜಮೀನು ನೀಡಿದೆಯಾದರೂ ಅನುದಾನದ ಕೊರತೆಯಿಂದ ಮೂಲಸೌಕರ್ಯ ದೊರೆತಿಲ್ಲ. ಪ್ರಸ್ತುತ ವಿ.ವಿ ಆವರಣದಲ್ಲಿ ರೂ. 8 ಕೋಟಿ ವೆಚ್ಚದಲ್ಲಿ ಆಡಳಿತ ಹಾಗೂ ಶೈಕ್ಷಣಿಕ ಭವನ, ರೂ. 90 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳಿಗೂ ಹಣದ ಕೊರತೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
2011ರಲ್ಲಿ ಕಾರ್ಯಾರಂಭ ಮಾಡಿದ ವಿಶ್ವವಿದ್ಯಾಲಯಕ್ಕೆ ಈವರೆಗೆ ದೊರೆತಿರುವ ಅನುದಾನ ಸುಮಾರು ರೂ.17 ಕೋಟಿ. ವಿಶ್ವವಿದ್ಯಾಲಯಕ್ಕೆ ಇನ್ನೂ ಯುಜಿಸಿ ಮಾನ್ಯತೆ ದೊರೆಯದ ಕಾರಣ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅನುದಾನವನ್ನೇ ಅವಲಂಬಿಸಬೇಕಾಗಿದೆ.
ಗೊಟಗೋಡಿ ಕ್ಯಾಂಪಸ್ನಲ್ಲಿ ಸದ್ಯ 120 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದಲ್ಲದೆ ಗೊಟಗೋಡಿ ಹಾಗೂ ಶಿಗ್ಗಾಂವಿಯಲ್ಲಿ 200 ವಿದ್ಯಾರ್ಥಿಗಳು ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್ ಕಲಿಯುತ್ತಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾಲಯಕ್ಕೆ ಕುಲಪತಿಯೊಬ್ಬರನ್ನು ಬಿಟ್ಟರೆ ಕಾಯಂ ಸಿಬ್ಬಂದಿ ಇಲ್ಲ. ಬೇರೆ ವಿಭಾಗಗಳಿಂದ ನಿಯೋಜನೆ ಮೇಲೆ ಇಬ್ಬರು ರಿಜಿಸ್ಟ್ರಾರ್, ಒಬ್ಬರು ಪ್ರಾಧ್ಯಾಪಕರು ಹಾಗೂ ಒಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಉಪನ್ಯಾಸಕರು, 12 ಕಲಾವಿದರ ಸಹಿತ 20 ಬೋಧಕ ವರ್ಗದವರಿದ್ದಾರೆ. ಬೀದರ್ ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ವಿಶ್ವವಿದ್ಯಾಲಯವು ಅಧ್ಯಯನ ಕೇಂದ್ರಗಳನ್ನು ಹೊಂದಿದೆ. ಅಲ್ಲಿಯೂ ಒಟ್ಟು ಆರು ಮಂದಿ ಯೋಜನಾ ಸಿಬ್ಬಂದಿ ಇದ್ದಾರೆ.
‘2013–14ನೇ ಸಾಲಿನಲ್ಲಿ ಸರ್ಕಾರ ರೂ. 4.93 ಕೋಟಿ ಅನುದಾನ ನೀಡಿತ್ತು. ಹಣಕಾಸಿನ ಕೊರತೆಯ ಕಾರಣ ಎಲ್ಲ ಕೆಲಸವನ್ನೂ ಹೊರಗುತ್ತಿಗೆ ನೀಡುತ್ತಿದ್ದೇವೆ. ಮುಂಬರುವ ಬಜೆಟ್ನಲ್ಲಿ ಕನಿಷ್ಠ ರೂ.10 ಕೋಟಿ ಅನುದಾನ ನೀಡುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ’ ಎಂದು ವಿ.ವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕನ್ನಡ ನಿಘಂಟು, ಗ್ರಾಮ ಚರಿತ್ರಾ ಕೋಶ, ದೇಸಿ ಕೃಷಿ ವಿಜ್ಞಾನ ಕೋಶ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿದೆ. ಇದರಲ್ಲಿ ಗ್ರಾಮ ಚರಿತ್ರಾ ಕೋಶಕ್ಕೆ ಮಾತ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಸಿಗುತ್ತಿದೆ. ಇತರ ಸಂಶೋಧನೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ನೀಡುವಂತೆ ಕೋರಿದ್ದು, ಪ್ರತಿಕ್ರಿಯೆ ದೊರೆತಿಲ್ಲ. ಸದ್ಯ ವಿಶ್ವವಿದ್ಯಾಲಯದ ಸಿಬ್ಬಂದಿಗೆ ವಸತಿಗೃಹಗಳ ನಿರ್ಮಾಣ, ಬಯಲು ರಂಗಮಂದಿರ, ಬಯಲು ವಸ್ತುಸಂಗ್ರಹಾಲಯದಂತಹ ಮಹತಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲವೂ ನಮ್ಮ ಮುಂದಿನ ಹಣಕಾಸು ಪರಿಸ್ಥಿತಿಯನ್ನು ಅವಲಂಬಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.