ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಕಾಂಗ್ರೆಸ್ ನಿಯಮವಲ್ಲ!

ಬಿಜೆಪಿಯ ಜನಪ್ರಿಯತೆ ಅಲ್ಲಗಳೆಯಲಾಗದ ವಾಸ್ತವ ಎಂಬುದನ್ನು ಕಾಂಗ್ರೆಸ್‌ ಮನಗಾಣಲೇ ಇಲ್ಲ
Last Updated 30 ಮೇ 2019, 7:17 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಅನೇಕರು ಕಾರಣಗಳನ್ನು ಹುಡುಕುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಮಾತ್ರ ನಿಖರ ಕಾರಣಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಆ ಪಕ್ಷದ ರಾಜಕೀಯ ಸಂಸ್ಕೃತಿಯ ಮುಂದುವರಿದ ಭಾಗವಷ್ಟೇ.

ಇಂದಿರಾ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್‌ ‘ಆನೆ ನಡೆದದ್ದೇ ಹಾದಿ’ ಎಂಬ ಉಕ್ತಿಯನ್ನು ಪಕ್ಷದ ಧ್ಯೇಯವಾಕ್ಯ ಎಂಬಂತೆ ಪಾಲಿಸುತ್ತಾ, ‘ಕೆಳಗೆ ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ’ ಎಂಬ ಉಕ್ತಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಇಷ್ಟು ದಶಕಗಳ ಕಾಲ, ಪಕ್ಷದ ಸೋಲಿಗೆ ಇಂದಿರಾ ಕುಟುಂಬದ ಯಾವ ಸದಸ್ಯರೂ ಕಾರಣರಲ್ಲ ಎಂದು ಕಾಂಗ್ರೆಸ್ಸಿಗರು ಮೊದಲೇ ತೀರ್ಮಾನಿಸಿಕೊಳ್ಳುತ್ತಿದ್ದರು. ಆದರೆಈ ಬಾರಿಯ ವಿಶೇಷವೆಂದರೆ, ಈ ಮಟ್ಟದ ಅಪಜಯಕ್ಕೆ ರಾಹುಲ್ ಗಾಂಧಿಯವರೇ ಕಾರಣವೆಂಬ ಭಾವನೆ ಹಲವರಲ್ಲಿ ಮನೆಮಾಡಿದೆ. ಆದರೆ, ಜನ ಕಾಂಗ್ರೆಸ್‌ನಿಂದ ದೂರವಾಗಿ ಬಿಟ್ಟಿರುವುದು ಕಾಂಗ್ರೆಸ್ ಪಕ್ಷದ ಸಮಸ್ಯೆಯೇ ವಿನಾ ಅದು ಒಬ್ಬ ವ್ಯಕ್ತಿಯ ಕಾರಣದಿಂದಲ್ಲ. ಪಕ್ಷದ ಸಂಘಟನೆಯಲ್ಲಿ ರಾಹುಲ್ ಅನೇಕ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ಅಹಂಭಾವ, ನಿರ್ಲಕ್ಷ್ಯ ಮತ್ತು ಉಡಾಫೆಯ ಮೂರ್ತರೂಪದಂತೆಯೇ ಬೆಳೆದುಬಿಟ್ಟಿರುವ ಕಾಂಗ್ರೆಸ್, ಸೋನಿಯಾ ಗಾಂಧಿಯವರ ಇಡೀ ಕುಟುಂಬವೇ ಸೇರಿಕೊಂಡು ಬದಲಾವಣೆ ತರುತ್ತೇವೆಂದರೂ ಅದಕ್ಕೆ ಒಳಪಡುವ ಸಾಧ್ಯತೆ ಕಂಡುಬರುತ್ತಿಲ್ಲ. ‘ನಮ್ಮ ಸಿದ್ಧಾಂತವೇ ಸರಿ, ನಾವು ಹೇಳಿಕೊಂಡಿದ್ದೇ ರಾಜಕೀಯದ ಪರಿ’ ಎಂಬಂತೆ ನಡೆಯುತ್ತಿರುವ ಕಾಂಗ್ರೆಸ್ಸಿಗರು, ತಮ್ಮ ಮೂರ್ಖತನದಿಂದಲೇ ತಮ್ಮನ್ನು ತಾವು ಈ ಸ್ಥಿತಿಗೆ ತಂದುಕೊಂಡಿದ್ದಾರೆ.

ಮತದಾರರಿಗೆ ಇನ್ನೂ 60-70ರ ದಶಕದ ವಿಚಾರಗಳೇ ಪ್ರಸ್ತುತ, ಇಂದಿರಾ ಗಾಂಧಿ, ದೇವರಾಜ ಅರಸು ಅವರು ಜಾರಿಗೆ ತಂದ ಕಾರ್ಯಕ್ರಮಗಳ ಋಣಭಾರ ಅವರ ಮೇಲಿದೆ, ರೋಟಿ, ಕಪಡಾ ಔರ್ ಮಕಾನ್ ಅಷ್ಟರಲ್ಲೇ ಇದ್ದಾರೆ, ಜೇಬಿನಲ್ಲಿ ಒಂದಿಷ್ಟು ದುಡ್ಡು, ಕೈಗೊಂದಷ್ಟು ತುತ್ತು ಕೊಟ್ಟರೆ ಮತ ಹಾಕಿಬಿಡುತ್ತಾರೆ,ನಾವು ಪ್ರತಿಪಾದಿಸುವ ಸಮಾಜವಾದ, ಸೆಕ್ಯುಲರ್ ವಾದವನ್ನು ತುಟಿಪಿಟಕ್ ಎನ್ನದೇ ಒಪ್ಪಿಕೊಂಡುಬಿಡುತ್ತಾರೆ ಎಂಬೆಲ್ಲ ಭ್ರಮೆಗಳು ಪ‍ಕ್ಷವನ್ನು ಆವರಿಸಿಕೊಂಡಿವೆ.

80ರ ದಶಕದಿಂದ ಈಚೆಗೆ ಬಿಜೆಪಿ ಸತತವಾಗಿ ಬೆಳೆಯುತ್ತಾ ಬಂದಿದೆ. ಇದನ್ನು ಕಾಂಗ್ರೆಸ್ ಒಂದು ಅಸಹಜ ಬೆಳವಣಿಗೆ ಎಂಬ ರೀತಿಯಲ್ಲೇ ನೋಡುತ್ತಾ ಬಂದಿದೆ ವಿನಾ, ಬಿಜೆಪಿಯ ಸಿದ್ಧಾಂತವನ್ನು ಜನ ಮೆಚ್ಚಿಕೊಂಡು ಒಪ್ಪಿಕೊಂಡಿರುವ ಸಿದ್ಧಾಂತವೆಂದು ಎಂದೂ ಗುರುತಿಸಿಲ್ಲ. ಇದು, ಕಾಂಗ್ರೆಸ್ ಇಷ್ಟೊಂದು ಕೃಶವಾಗುವುದಕ್ಕೆ ಮತ್ತೊಂದು ಕಾರಣ.

ಅಲ್ಪಸಂಖ್ಯಾತರೂ ಸೇರಿ ಎಲ್ಲ ವರ್ಗಗಳಲ್ಲೂ ಬೆಂಬಲವನ್ನು ಹೆಚ್ಚಿಸಿಕೊಂಡಿರುವ ಬಿಜೆಪಿ, ರಾಜಕೀಯವಾಗಿ ಎದುರಾಳಿ ಮಾತ್ರವಲ್ಲ, ಅದು ಒಂದು ಅಲ್ಲಗಳೆಯಲಾಗದ ವಾಸ್ತವ ಎಂದು ಕಾಂಗ್ರೆಸ್‌ನವರು ಮನಗಂಡಿಲ್ಲ. ಅನೇಕ ಬುದ್ಧಿವಂತರು, ಪ್ರಜ್ಞಾವಂತರು ಮತ್ತು ವಿದ್ಯಾವಂತರು ಸಹ ಯಾಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಸ್ತುನಿಷ್ಠ ಮತ್ತು ಪ್ರಾಮಾಣಿಕ ಅಧ್ಯಯನ ಮಾಡಲು ಹೋಗಲೇ ಇಲ್ಲ. ಏಕೆಂದರೆ ಅದಕ್ಕೊಂದು ಕಾರಣವಿದೆ. ಹಾಗೆ ಮನಬಿಚ್ಚಿ ಒಂದೊಮ್ಮೆ ಸತ್ಯವನ್ನು ಹುಡುಕಲು ಹೊರಟರೆ, ಆ ಕ್ಷಣದಲ್ಲಿ ಕಾಂಗ್ರೆಸ್‌ನ ಅನೇಕ ಮಿಥ್ಯೆಗಳು ಬಹಿರಂಗವಾಗಿಬಿಡುತ್ತವೆ. ನಾವಂದುಕೊಂಡದ್ದೇ ಸರಿ ಎನ್ನುವ ಮನೋಭಾವದಿಂದಾಗಿ, ಆ ಮಿಥ್ಯೆಗಳು ಮತ್ತು ಭ್ರಮೆಗಳು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ಕಟ್ಟಾ ಬೆಂಬಲಿಗರಿಗೆ ಅತ್ಯವಶ್ಯಕ. ಬಿಜೆಪಿಯುಜನರಿಗೆ ಮತಾಂಧತೆಯ ವಿಷ ಉಣಿಸಿಬಿಟ್ಟಿದೆ, ಅವರ ಮನಸ್ಸು ಹಾಳುಮಾಡಿಬಿಟ್ಟಿದೆ ಎಂದೆಲ್ಲ ಹೇಳುವ ಕಾಂಗ್ರೆಸ್, ಇಂತಹ ಬದಲಾವಣೆಯಲ್ಲಿ ತನ್ನ ಪಾತ್ರವೇನು ಎಂಬುದನ್ನು ಮಾತ್ರ ಹುಡುಕಲು ಹೋಗಿಲ್ಲ.

ಮೋದಿ ಅವರಿಗೆ ಸಮರ್ಥ ಎದುರಾಳಿ ಇದ್ದರೆ ಆಗ ಮಾತ್ರ ಪರ್ಯಾಯ ಯೋಚನೆಗೆ ಸಿದ್ಧ ಎಂದು ಇಡೀ ದೇಶ ಹೇಳಿದಾಗಲೂ, ರಾಹುಲ್ ಅವರೇ ಇದಕ್ಕೆ ಪರಿಹಾರ ಎಂದು ಕಾಂಗ್ರೆಸ್‌ ಹಟ ಹಿಡಿಯಿತು. ಒಂದೆಡೆ ರಾಹುಲ್ ಹೇಳಿದ್ದಕ್ಕೆಲ್ಲ ತಲೆದೂಗುತ್ತಾ, ಇನ್ನೊಂದೆಡೆ ಅವರ ತಲೆಗೆ ಗೊಡ್ಡು ವಿಚಾರಗಳನ್ನು ತುಂಬುತ್ತಾ, ಕಡೆಗೆ ತನ್ನ ನಾಯಕನನ್ನೂ ಹಾಳು ಮಾಡಿ ತಾನೂ ಹಾಳಾಯಿತು.

ಕಾಂಗ್ರೆಸ್‌ಗೆ ತಾನು ವಿರೋಧಿಸಿದ ಯಾವ ವಿಚಾರದಲ್ಲೂ ಪ್ರಾಮಾಣಿಕತೆ ಇರಲಿಲ್ಲ. ಮೋದಿಯವರು ಮಾಡಿದ ಅನೇಕ ತಪ್ಪುಗಳಿಗೆ ಬುನಾದಿ ಹಾಕಿದ್ದೇ ಕಾಂಗ್ರೆಸ್. ಹಲವು ತೆರಿಗೆ ಸುಲಿಗೆ ಚಾಳಿಗಳನ್ನು ಆರಂಭಿಸಿದ್ದೇ ಆ ಪಕ್ಷ ಎಂಬುದನ್ನೂ ಜನರು ಮರೆತಿಲ್ಲ. ನೋಟು ಅಮಾನ್ಯೀಕರಣ ಮಾಡಿದಾಗ ಗಂಟಲು ಹರಿದುಹೋಗುವಂತೆ ಅರಚಾಡಿದ ಕಾಂಗ್ರೆಸ್ಸಿಗರು, ಭ್ರಷ್ಟಾಚಾರದ ವಿರುದ್ಧ ಮೋದಿ ಏನೋ ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದ್ದುದನ್ನು ಅರ್ಥಮಾಡಿಕೊಳ್ಳಲಿಲ್ಲ.

ರಫೇಲ್‌ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಾ ಕಾಂಗ್ರೆಸ್‌, ಒಂದು ವರ್ಷ ಇದೇ ವಿಷಯವನ್ನು ಹಿಡಿದು ಜಗ್ಗಾಡಿತು. ರಫೇಲ್‌ ಒಂದು ಯುದ್ಧ ವಿಮಾನ ಎನ್ನುವುದನ್ನು ಬಿಟ್ಟರೆ ಹೆಚ್ಚಿನ ಜನರಿಗೆ ಅದರ ಬಗ್ಗೆ ಬೇರೇನೂ ಗೊತ್ತಿಲ್ಲ ಎಂಬ ಕನಿಷ್ಠ ಜ್ಞಾನವೂ ಪಕ್ಷಕ್ಕೆ ಇರಲಿಲ್ಲ. ಹೀಗಾಗಿ, ಮೋದಿಯವರನ್ನು ಕಳ್ಳ ಎಂದು ಕರೆದ ತರ್ಕ ಜನರಿಗೆ ಅರ್ಥವಾಗಲೇ ಇಲ್ಲ. ಮೋದಿ ಏನನ್ನೂ ಮಾಡಿಲ್ಲ ಎನ್ನುವುದನ್ನೇ ಹೇಳುತ್ತಿದ್ದ ಕಾಂಗ್ರೆಸ್, ತಾನು ಮೋದಿ ಜಾಗದಲ್ಲಿದ್ದರೆ ಏನು ಮಾಡಬಹುದಿತ್ತು ಎಂಬುದನ್ನು ಘಂಟಾಘೋಷವಾಗಿ ಸಾರಲಿಲ್ಲ.

ಭಾರತದಲ್ಲಿ ಅತ್ಯಂತ ಜರಿಯಲ್ಪಟ್ಟವರಿಗೆ ಜನ ಯಾವಾಗಲೂ ಅಧಿಕಾರ ನೀಡುತ್ತಾರೆ ಎಂಬುದು ಶತಃಸಿದ್ಧ. ಚುನಾವಣೆಗೆ ಒಂದು ವರ್ಷ ಮೊದಲು, ಅತ್ಯಂತ ಜರಿಯಲ್ಪಟ್ಟಿದ್ದ ರಾಹುಲ್ ಅವರ ಬಗ್ಗೆ ಜನರಿಗೆ ಒಲವು ಮೂಡಲು ಆರಂಭವಾಗಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಏನೋ ಆವರಿಸಿಕೊಂಡಂತೆ ವಿಪರೀತ ವಿಶ್ವಾಸದೊಂದಿಗೆ ಪುಟಿದಾಡತೊಡಗಿದ ಅವರು, ಸಿಕ್ಕ ಪ್ರತಿ ಅವಕಾಶವನ್ನೂ ಮೋದಿಯವರನ್ನು ಹೀಯಾಳಿಸಲೇ ಬಳಸಿಕೊಂಡರು. ಅದು, ಯಾವ ಸಮರ್ಥನೆಯೂ ಇಲ್ಲದ, ವೈಯಕ್ತಿಕ, ವೈಷಮ್ಯದ ಮಾತುಗಳಂತೆ ಕಂಡುಬರತೊಡಗಿದಾಗ, ಜನ ಸ್ವಾಭಾವಿಕವಾಗಿ ಮೋದಿ ಅವರೆಡೆ ವಾಲತೊಡಗಿದರು. ಜನರಿಗೆ ಮೋದಿ ಅವರ ತಪ್ಪುಗಳ ಬಗ್ಗೆ ಆಲೋಚನೆ ಮಾಡಲೂ ಬಿಡದೆ, ಅವರಲ್ಲಿ ಅಸಹನೆ ಬರುವಷ್ಟು ನಕಾರಾತ್ಮಕತೆಯನ್ನು ತುಂಬಲಾಯಿತು. ಹೀಗಾಗಿ, ಮೋದಿ ಅವರಿಗೆ ಕಾಂಗ್ರೆಸ್ ಪರ್ಯಾಯವಲ್ಲ ಎಂದು ಜನ ನಿರ್ಧರಿಸಿಬಿಟ್ಟರು. ಪ್ರಿಯಾಂಕಾ ಗಾಂಧಿಯವರಂತೂ ಇಂದಿರಾ ಅವರಂತೆ ನಡೆದಾಡುತ್ತಾ, ಕೈಬೀಸುತ್ತಾ, ಅವರಂತೆಯೇ ಕಾಣಿಸಿಕೊಳ್ಳಲು ಆರಂಭಿಸಿದರು. ಇದೆಲ್ಲ 1980ರಲ್ಲಿ ನಡೆಯುತ್ತಿದೆಯೇನೋ ಎಂಬಂತೆ ತಮ್ಮನ್ನು ತಾವೇ ಮರುಳು ಮಾಡಿಕೊಂಡಂತೆ ಓಡಾಡಿದರು.

ದಲಿತರು ಸೇರಿದಂತೆ ಬಹುಸಂಖ್ಯಾತ ಹಿಂದೂಗಳು ಹಾಗೆಯೇ ಇತರರು ಯಾಕಾಗಿ ಕಾಂಗ್ರೆಸ್‌ನ ಸಿದ್ಧಾಂತವನ್ನು ಒಪ್ಪುತ್ತಿಲ್ಲ, 50 ವರ್ಷಗಳಿಂದ ತಾನು ಹೇಳಿಕೊಂಡು ಬರುತ್ತಿರುವ ಪ್ರಗತಿ ಮತ್ತು ಪುರೋಭಿವೃದ್ಧಿಯ ಆಶ್ವಾಸನೆಗೆ ಯಾಕಾಗಿ ಸ್ಪಂದಿಸುತ್ತಿಲ್ಲ ಎಂಬುದು ಆ ಪಕ್ಷಕ್ಕೆ ಅರ್ಥವಾಗುತ್ತಲೇ ಇಲ್ಲ.

ಸಮಾಜ ಬದಲಾಗಿದೆ, ಜನರಲ್ಲೂ ಒಂದಷ್ಟು ತಿಳಿವಳಿಕೆ ಇದೆ, ತನ್ನ ಬಗ್ಗೆ ಜನರಲ್ಲಿ ಅತಿಹೆ‌ಚ್ಚು ಅಸಹನೆ ಇದೆ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡರೆ, ಆ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಪಕ್ಷ ಮಾಡಿಕೊಳ್ಳಬಹುದು.ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದಿದ್ದರೂ, ಹೇಳಿಕೊಳ್ಳುವಂಥ ಅಭಿವೃದ್ಧಿ ಆಗದಿದ್ದರೂ, ಆರ್ಥಿಕತೆಯಲ್ಲಿ ಪ್ರಗತಿಯಾಗದಿದ್ದರೂ, ಜನರಿಗೆ ಉದ್ಯೋಗ ಇಲ್ಲವಾಗಿದ್ದರೂ, ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯಿಂದಾಗಿ ಅನೇಕರ ಬಾಳು ಹಾಳಾಗಿದ್ದರೂ ಜನ ಯಾಕಾಗಿ ಮೋದಿಯವರಿಗೇ ಪುನಃ ಮತ ಹಾಕಿದ್ದಾರೆ ಎಂಬುದಕ್ಕೆ ಉತ್ತರವನ್ನು ಕಾಂಗ್ರೆಸ್ ಊಹಿಸುವ ಬದಲು, ಜನರನ್ನೇ ಹೋಗಿ ಕೇಳಿದರೆ ಸರಿಯುತ್ತರ ಸಿಗುತ್ತದೆ. ಅದರಿಂದ, ಮುಂದಿನ ದಿನಗಳಲ್ಲಾದರೂ ಪಕ್ಷ ಒಂದಷ್ಟು ಚೇತರಿಸಿಕೊಳ್ಳುವಂತೆ ಮಾಡಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT