ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪಿ ಆಚರಣೆ ಮೀರುವ ಬಗೆ

ಜಾತಿ ಸಂಕೇತಗಳ ಆಚರಣೆಯಲ್ಲಿ ಗಂಭೀರ ತೊಡಕುಗಳಿವೆ
Last Updated 30 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ಮಾನ್ಯ ಮಾಡಿದ ಆಚರಣೆಯಾಗಿ ವಾಲ್ಮೀಕಿ ಜಯಂತಿ ನಾಡಿನಾದ್ಯಂತ ನಡೆಯುತ್ತದೆ. ಕನಿಷ್ಠ ತಿಂಗಳ ಕಾಲ ಈ ಜಯಂತಿಯನ್ನು ವಾಲ್ಮೀಕಿ ಸಮುದಾಯ ತಮ್ಮ ಹಳ್ಳಿ, ಕಾಲೊನಿ, ನಗರಗಳಲ್ಲಿ ಆಚರಿಸುತ್ತದೆ. ಹಾಗಾಗಿ ಇದು ಸರ್ಕಾರಿ ಆಚರಣೆಯಂತೆಯೇ, ಸಮುದಾಯದ ಹಬ್ಬವಾಗಿಯೂ ಚಲನೆಗೊಳ್ಳುತ್ತಿದೆ.

ವಾಲ್ಮೀಕಿ ಜಯಂತಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ಆರಂಭಿಸಿದ್ದಕ್ಕೆ ಕೆಲವು ಮುಖ್ಯ ಕಾರಣಗಳಿದ್ದವು. ವಾಲ್ಮೀಕಿ, ರಾಮಾಯಣ, ರಾಮನನ್ನು ಜೋಡಿಸುವ ಮೂಲಕ ಕರ್ನಾಟಕದ ಬೇಡನಾಯಕ ಸಮುದಾಯವನ್ನು ಹಿಂದುತ್ವದ ಮೂಲಭೂತವಾದಿ ವಕ್ತಾರನನ್ನಾಗಿ ಮಾಡುವ ಉದ್ದೇಶವೊಂದು ಗುಪ್ತವಾಗಿತ್ತು. ಆರಂಭಿಕ ಆಚರಣೆಗಳಲ್ಲಿ ಇದಕ್ಕೆ ಪೂರಕವಾದ ಪ್ರಕ್ರಿಯೆಗಳೂ ನಡೆದವು. ಆದರೆ ಇದೀಗ ಈ  ಆಯಾಮ ಬದಲಾಗಿದೆ.

ರಾಜ್ಯದಲ್ಲಿ ನಡೆಯುವ ವಾಲ್ಮೀಕಿ ಜಯಂತಿಗಳಲ್ಲಿ ಒಂದು ಬಗೆಯ ಏಕರೂಪಿ ಆಚರಣೆಯ ಮಾದರಿ ಇದೆ. ಜಯಂತಿಯ ಫ್ಲೆಕ್ಸ್, ಹೋರ್ಡಿಂಗ್‌ಗಳನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ವಾಲ್ಮೀಕಿ ಋಷಿ, ಮದಕರಿ ನಾಯಕ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ, ಕೆಲವೆಡೆ ಯುವ ಸಮುದಾಯದ ಆಕರ್ಷಣೆಯಾದ ಚಿತ್ರನಟ ಸುದೀಪ್, ಆಯಾ ಭಾಗದ ವಾಲ್ಮೀಕಿ ಸಮುದಾಯದ ರಾಜಕಾರಣಿಗಳ ಚಿತ್ರಗಳನ್ನು ಹಾಕಲಾಗುತ್ತದೆ.

ಮೊದಲಿಗೆ ವಾಲ್ಮೀಕಿ ಋಷಿಯ ಭಾವಚಿತ್ರದ ಮೆರವಣಿಗೆ ಊರಿನ ಬೀದಿ ಬೀದಿಗಳಲ್ಲಿ ಸಾಗುತ್ತದೆ. ವಾಲ್ಮೀಕಿ ಸಮುದಾಯದ ಪುರಾಣ ಚರಿತ್ರೆಯ ನಾಯಕರ ಸ್ತಬ್ಧ ಚಿತ್ರಗಳ ವೇಷಧಾರಿಗಳು ಪಾಲ್ಗೊಳ್ಳುತ್ತಾರೆ. ನಂತರ ವೇದಿಕೆಯೊಂದರಲ್ಲಿ ವಾಲ್ಮೀಕಿ ಋಷಿ ಮತ್ತು ಸಮುದಾಯದ ಬಗೆಗೆ ಭಾಷಣಗಳು ನಡೆಯುತ್ತವೆ. ಈ ಮಾತುಗಳು ಬಹುಪಾಲು ಬೇಡ ಸಮುದಾಯದ  ವರ್ಣನೆಗೆ ಸೀಮಿತವಾಗುತ್ತವೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉದ್ಯೋಗದಾತರಿಗೆ, ಹಿರಿಯ ನಾಯಕರಿಗೆ ಸನ್ಮಾನಗಳು ನಡೆಯುತ್ತವೆ. ಕೆಲವೆಡೆ ಒಂದಷ್ಟು ಬದಲಾವಣೆ ಹೊರತುಪಡಿಸಿದರೆ ರಾಜ್ಯದಾದ್ಯಂತ ಈ ಬಗೆಯ ಏಕರೂಪಿ ಆಚರಣೆ ನಡೆಯುತ್ತದೆ. 

ರಾಷ್ಟ್ರೀಯ ಆಚರಣೆಗಳಲ್ಲಿ ಒಂದು ಬಗೆಯ ಏಕರೂಪಿತನವಿರುತ್ತದೆ. ‘ದೇಶ’, ‘ರಾಷ್ಟ್ರ’, ‘ರಾಜ್ಯ’ ಎನ್ನುವ ಒಟ್ಟಾದ ಗ್ರಹಿಕೆಯನ್ನು ಬಲಪಡಿಸುವ ಅಭಿಮಾನ ಹುಟ್ಟಿಸುವ ಪ್ರಕ್ರಿಯೆಗಳು ನಡೆಯುತ್ತವೆ. ಈ ಮಾದರಿಯನ್ನೇ ಜಾತಿ, ಸಮುದಾಯಗಳ ಸಾಂಕೇತಿಕ ಆಚರಣೆಗಳೂ ಪಾಲಿಸುತ್ತಿರುವಂತೆ ಕಾಣುತ್ತಿದೆ. ಇದು ಒಂದು ಹಂತದಲ್ಲಿ ಸರಿಯಾದರೂ, ಇದೇ ಮುಂದುವರಿದಲ್ಲಿ ಅಪಾಯಕರ. ಕಾರಣ ಒಂದು ಸಮುದಾಯದ ಪ್ರಾತಿನಿಧಿಕ ಆಚರಣೆಯಲ್ಲಿನ ಏಕರೂಪತೆ ಬಹು ಬೇಗ ಜಡತೆಯನ್ನು ತರುತ್ತದೆ.

ಒಂದು ಸಮುದಾಯವೂ ‘ಮೂರ್ತಿರೂಪ’ ತಾಳುವ ಅಪಾಯದೆಡೆಗೆ ಸಾಗುತ್ತದೆ. ಜೀವಂತ ಸಮುದಾಯದ ವರ್ತಮಾನದ ಸಂಕಟ, ನೋವು, ನಲಿವು, ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತದೆ. ತನ್ನ ಸಮುದಾಯದ ನೋವುಗಳಿಗೆ ಈ ಬಗೆಯ ಆಚರಣೆಗಳು ಕಿವುಡಾಗುತ್ತವೆ. ಎಲ್ಲವೂ ಮೆರವಣಿಗೆಯ ಗದ್ದಲದಲ್ಲಿ ಕಳೆದು ಹೋಗುತ್ತವೆ. ಇಂದು ಎಲ್ಲ ಸಮುದಾಯಗಳಲ್ಲಿ ವರ್ಗದ ಬೆಳವಣಿಗೆಯಾಗಿರುವಂತೆ, ಬೇಡನಾಯಕ ಸಮುದಾಯದಲ್ಲಿಯೂ ವರ್ಗದ ನೆಲೆ ರೂಪುಗೊಂಡಿದೆ. ಶ್ರೀಮಂತ ವರ್ಗ, ರಾಜಕಾರಣಿ ವರ್ಗ, ನೌಕರಶಾಹಿ ಅಥವಾ ಮಧ್ಯಮ ವರ್ಗ, ಅಂಚಿನ ಬಡವರ ವರ್ಗವೆಂದು ವಿಭಾಗಿಸಬಹುದು. ಇವರಲ್ಲಿ ಅಂಚಿನ ಬಡವರು ಹೆಚ್ಚಾಗಿದ್ದಾರೆ. ಇವರು ವಾಲ್ಮೀಕಿ ಜಯಂತಿಯ ಬೀದಿ ಮೆರವಣಿಗೆಯಲ್ಲಿ ಸಕ್ರಿಯವಾಗಿರುತ್ತಾರೆ. ಮೇಲಿನ ಮೂರು ವರ್ಗಗಳ ಜನ ವೇದಿಕೆಯ ಮೇಲೇರುತ್ತಾರೆ, ಸನ್ಮಾನ ಸ್ವೀಕರಿಸುತ್ತಾರೆ, ಭಾಷಣ ಮಾಡುತ್ತಾರೆ, ಈ ವರ್ಗಗಳಿಗೆ ಬರಬಹುದಾದ ಲಾಭಗಳ ಬಗ್ಗೆ ಮಾತನಾಡುತ್ತಾರೆ.

ಈ ಇಡೀ ಆಚರಣೆಯಲ್ಲಿ ಸೇರಿದ ಸಮುದಾಯದ ಸದಸ್ಯರನ್ನು ಮತದಾರರನ್ನಾಗಿಸಿಕೊಳ್ಳುವ ಯತ್ನಗಳೂ ನಡೆಯುತ್ತವೆ. ಇದೇ ಸಮುದಾಯದ ಅಂಚಿನ ಬಡವರ ಸಮಸ್ಯೆಗಳು ಈ ವೇದಿಕೆಯಲ್ಲಿ ಚರ್ಚೆಯಾಗುವುದಿಲ್ಲ. ಅಂತೆಯೇ ಈ ಮೂರು ವರ್ಗಗಳಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅಷ್ಟರಮಟ್ಟಿಗೆ ಪುರುಷವಾದಿ ಆಚರಣೆ ನಡೆಯುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಯಾವುದೇ ಜಾತಿ ಸಂಕೇತಗಳ ಆಚರಣೆಯಲ್ಲಿ ಎತ್ತಬೇಕಾದ ಕೆಲವು ಮುಖ್ಯ ಪ್ರಶ್ನೆಗಳಿವೆ. ಕೆಳಜಾತಿಗಳು ಒಗ್ಗಟ್ಟಾಗುತ್ತಿರುವುದು, ರಾಜಕೀಯ ಪ್ರಾತಿನಿಧ್ಯ ಕೇಳುತ್ತಿರುವುದು, ತಮ್ಮ ಚರಿತ್ರೆ, ವರ್ತಮಾನದ ಸಂಕೇತಗಳನ್ನು ಗುರುತಿಸಿಕೊಳ್ಳುತ್ತಿರುವುದು ಒಳ್ಳೆಯ ಪರಿಣಾಮಕಾರಿ ನಡೆ.

ಹೀಗೆ ಗುರುತಿಸಿಕೊಳ್ಳುವ ನಡೆಗಳಲ್ಲಿ ಗಂಭೀರ ತೊಡಕುಗಳಿವೆ. ಇವು ಜಾತಿಯೊಂದರ ಎಚ್ಚೆತ್ತ ಪ್ರಜ್ಞೆಯಾದಲ್ಲಿ, ಸಮುದಾಯಗಳ ಆಂತರಿಕ ಬಲಪಡಿಸುವಿಕೆಯ ಶಕ್ತಿಯಾದಲ್ಲಿ, ಜಾತಿಯೊಳಗಿನ ಬಡತನ, ಶಿಕ್ಷಣದ ಕೊರತೆಯನ್ನು ನೀಗುವ ದಾರಿಯಾದಲ್ಲಿ, ಆಯಾ ಜಾತಿಯೊಳಗಿನ ಹೆಣ್ಣನ್ನು ಬಲಗೊಳಿಸುವಂತಾದಲ್ಲಿ ಶ್ಲಾಘನೀಯ. ಆದರೆ ಜಾತಿಯ ಬಗ್ಗೆ ಅಂಧ ಅಭಿಮಾನ ಬೆಳೆಸುವ, ಪುರುಷಾಧಿಕಾರವನ್ನು ವಿಜೃಂಭಿಸುವ ಕಡೆಗೆ  ಜಾತಿ ಸಂಕೇತಗಳ ಆಚರಣೆ ಉತ್ಸವಗಳು ಚಲಿಸುತ್ತಿವೆಯೇನೊ ಎಂಬ ಅನುಮಾನ ಮೂಡುತ್ತದೆ. ಈ ಚಹರೆ ವಾಲ್ಮೀಕಿ ಜಯಂತಿ ಆಚರಣೆಯ ಸ್ವರೂಪದಲ್ಲೂ ಢಾಳಾಗಿ ಕಾಣುತ್ತಿದೆ. ಈ ಮಿತಿಗಳನ್ನು ಮೀರುವ ನಿಟ್ಟಿನಲ್ಲಿ ಆಚರಣೆಯ ಏಕರೂಪಿ ಮಾದರಿ ಬದಲಾಗಬೇಕಿದೆ.

ಯಾವುದೇ ಜಾತಿ ತಮ್ಮ ಸಮುದಾಯದ ಪುರಾಣ ಮತ್ತು ಚರಿತ್ರೆಯ ಜತೆ ಹೊಂದಬಹುದಾದ ಸಂಬಂಧವನ್ನು ಖಚಿತಪಡಿಸಿಕೊಳ್ಳಬೇಕು. ಸದ್ಯ ಇದರ ಸ್ವರೂಪ ಬಹುಪಾಲು ವೈಭವೀಕರಣದ ತುದಿಯಲ್ಲಿದೆ. ಜಾತಿ ಸಂಕೇತಗಳಿಗೆ ಮೂರ್ತಿಪೂಜೆಯ ಆಯಾಮವಿದೆಯೆ ಹೊರತು ವೈಚಾರಿಕ ಮುಖವಿಲ್ಲ. ಲಿಂಗಾಯತ ಸಮುದಾಯ ಬಸವಣ್ಣನ ಜತೆ, ದಲಿತರು ಅಂಬೇಡ್ಕರ್ ಜತೆ, ಕುರುಬ ಸಮುದಾಯ ಕನಕನ ಜತೆ ಮಾಡಿದ ವೈಚಾರಿಕ ಮುಖಾಮುಖಿ ಕೂಡ ಬಡವಾಗಿದೆ.

ಪೆರಿಯಾರ್‌ ರಾಮಸ್ವಾಮಿ ಅವರನ್ನು ನಾಯಕ–ಬೇಡ ಸಮುದಾಯದ ಸಂಕೇತವೆಂಬಂತೆ ಗುರುತಿಸಿಕೊಳ್ಳಲಾಗುತ್ತದೆ. ಪೆರಿಯಾರರ ಚಿಂತನೆಗಳ ಜತೆ ಈ ಸಮುದಾಯದ ಅನುಸಂಧಾನ ಶೂನ್ಯವಾಗಿದೆ. ಹೀಗೆ ಜಾತಿ ಸಂಕೇತಗಳ ಮೂರ್ತಿ ಆರಾಧನೆ ಇರುವ ತನಕ ಸಮುದಾಯ ಎಚ್ಚರಗೊಳ್ಳುವುದಿಲ್ಲ. ಬದಲಾಗಿ ಆಯಾ ಜಾತಿ ಸಾಂಕೇತಿಕ ಸುಧಾರಕರ ವೈಚಾರಿಕ ಎಚ್ಚರದ ತಿಳಿವಿನಿಂದ ಮಾತ್ರ ಸಮುದಾಯದೊಳಗೆ ಅರಿವಿನ ದೀಪವನ್ನು ಬೆಳಗಿಸಲು ಸಾಧ್ಯ.

ವಾಲ್ಮೀಕಿ ಸಮುದಾಯದ ಮದುವೆ ಬ್ಯೂರೊಗಳು ಕ್ರಿಯಾಶೀಲವಾಗಿರುವಷ್ಟು, ಈ ಜಾತಿಯೊಳಗಿನ ಬಡತನ ಕಳೆಯಲು ಸಮುದಾಯದ ಉದ್ಯೋಗಸ್ಥರು, ಶಿಕ್ಷಿತರು, ರಾಜಕಾರಣಿಗಳು ಕ್ರಿಯಾಶೀಲರಾಗಿಲ್ಲ ಎನ್ನುವುದು ಸತ್ಯ. ಸಮುದಾಯವನ್ನು ಆಧರಿಸಿ ಪ್ರಕಟವಾಗುತ್ತಿರುವ ಪತ್ರಿಕೆಗಳು ಬಹುಪಾಲು ಜಾತಿಯ ವೈಭವೀಕರಣವನ್ನೇ ಧ್ಯೇಯವನ್ನಾಗಿಸಿಕೊಂಡಂತಿವೆ.

ಗ್ರಾಮೀಣ ಭಾಗಗಳಲ್ಲಿ ಅಂಬೇಡ್ಕರ್ ಸಂಘಗಳನ್ನು ಹೊರತುಪಡಿಸಿದರೆ ವಾಲ್ಮೀಕಿ ಯುವಕ ಸಂಘಗಳ ಸಂಖ್ಯೆ ಹೆಚ್ಚಿದ್ದಂತಿದೆ. ಈ ಸಂಘಟನೆಗಳು ವರ್ಷಕ್ಕೊಮ್ಮೆ ವಾಲ್ಮೀಕಿ ಜಯಂತಿಗೆ ಎಚ್ಚರವಾಗಿ ವರ್ಷಪೂರ್ತಿ ನಿದ್ದೆಯಲ್ಲಿದ್ದಂತಿರುತ್ತವೆ. ಈ ಯುವಕ ಸಂಘಗಳನ್ನು ವೈಚಾರಿಕವಾಗಿ ಜಾಗೃತಗೊಳಿಸುವ ಕಾರ್ಯವಾದರೆ ಅದು ಹೆಚ್ಚು ಮಹತ್ವದ ನಡೆಯಾಗುತ್ತದೆ.

ಈ ಬಗೆಯ ವೈಚಾರಿಕ ಜಾಗೃತಿ ಮೂಡಿಸಲು ವಾಲ್ಮೀಕಿ ಜಯಂತಿಯನ್ನೂ ಒಂದು ವೇದಿಕೆಯನ್ನಾಗಿ ರೂಪಿಸಲು ಪ್ರಯತ್ನಿಸಬಹುದಾಗಿದೆ. ಯುವಕರ ಸಂಘಟನೆಗಳಂತೆ ಯುವತಿಯರ ಸಂಘಗಳ ಸ್ಥಾಪನೆಗೂ ಪ್ರೇರಣೆ ನೀಡಬೇಕಿದೆ. ಈ ಸಂಘಟನೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ಮಾದರಿಯನ್ನು ಎಲ್ಲ ಜಾತಿ, ಸಮುದಾಯಗಳ ಸಂಘಗಳಿಗೂ ಅನ್ವಯಿಸಬಹುದಾಗಿದೆ.

ತಳ ಸಮುದಾಯಗಳ ಸಾಹಿತಿಗಳು ತಮ್ಮ ಸಮುದಾಯದ  ಜತೆ ಯಾವ ಬಗೆಯ ಸಂಬಂಧವನ್ನು ಹೊಂದಬೇಕು, ಈ ಸಮುದಾಯಗಳ ವಿದ್ಯಾವಂತರು ಮಾಡಬಹುದಾದ ಕೆಲಸಗಳೇನು, ಉದ್ಯೋಗಾವಕಾಶಗಳಿಗೆ ತೆರೆದುಕೊಳ್ಳುತ್ತಿರುವ ನೆಲೆ ಯಾವುದು ಮುಂತಾದ ಪ್ರಶ್ನೆಗಳನ್ನು ಎಚ್ಚರದಿಂದ ಪರಿಶೀಲಿಸಬೇಕಾಗಿದೆ. ಇಂತಹ ಚರ್ಚೆಗಳು ಜಯಂತಿಗಳ ಆಚರಣೆ ವೇದಿಕೆಗಳಲ್ಲಿ ಜೀವ ತಳೆಯಬೇಕಾಗಿದೆ. ಹೀಗೆ ಜಯಂತಿಗಳ ಏಕರೂಪಿ ಆಚರಣೆಯ ಮಿತಿಗಳನ್ನು ಮೀರುವ ಚರ್ಚೆಗಳು ಅಗತ್ಯವಾಗಿ ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT