ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಹಿತಿ ತಂತ್ರಜ್ಞಾನ ಮತ್ತು ಸಮುದಾಯಭಾಗಿತ್ವ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ - ಈ ವಿಷಯದ ಬಗ್ಗೆ  ಸಾಕಷ್ಟು ಚರ್ಚೆ­ಗಳಾ­ಗಿವೆ. ಕರ್ನಾಟಕ ಸರ್ಕಾ­ರವು ಈಗಲಾ­ದರೂ ಕೈಗೊಳ್ಳಬೇಕಾದ ತುರ್ತು ಕೆಲಸ­ಗಳಿವೆ. ಜಾಗತಿಕ ಮಟ್ಟ­ದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ ವ್ಯಕ್ತಿಗಳ ಸಲಹೆ, ಸೂಚನೆಗಳೇ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದು ಸರ್ಕಾರವು ನಂಬಿರುವುದು ವಿಷಾದನೀಯ.

ಕರ್ನಾಟಕ ಸರ್ಕಾರವು ಅಂತಿಮ ಆವೃತ್ತಿ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ‘ಆಂಡ್ರಾಯ್ಡ್‌ ಕನ್ನಡ ಕೀಲಿಮಣೆ ಸಹಿತ ಮಾರುತಿ ತಂತ್ರಾಂಶ’ ಅಭಿವೃದ್ಧಿಗಾರರು ರೂಪಿಸಿದ ಎಲ್ಲ ತಂತ್ರಾಂಶಗಳೂ ಕಳಪೆಯಾಗಿವೆ. ಈ ಬಗ್ಗೆ ಇ–ಮೇಲ್‌ಗಳ ಮೂಲಕ ಪ್ರತಿಕ್ರಿಯೆ ಕೇಳುವುದಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಬಳಕೆದಾರರನ್ನು ಸೇರಿಸಿ ಚರ್ಚಿಸಬೇಕಿತ್ತು. ಆದರೆ, ಕಾಟಾ­ಚಾರದ ಪ್ರಕ್ರಿಯೆ ಮೂಲಕ ತಂತ್ರಾಂಶವನ್ನು ದೃಢೀಕರಿಸಿರು­ವುದು ಖಂಡನೀಯ. 
  
ಸರ್ಕಾರವು ಬಿಡುಗಡೆ ಮಾಡಿದ ಇತರೆ ಮೂರೂ ತಂತ್ರಾಂಶಗಳು ಸಂಪೂರ್ಣವಾಗಿ ದೋಷಪೂರಿತವೂ, ನಿಷ್ಪ್ರ­ಯೋಜಕವೂ, ನಿಗದಿತ ನಿಧಿಗೆ ಅನರ್ಹವೂ, ಕಾಲ­ಬಾಹಿರವೂ ಆಗಿರುತ್ತವೆ. ಈ ಕುರಿತು ನಾನು ಕಳೆದ ವರ್ಷವೇ ಬರೆದ ಪತ್ರ (http://bit.ly/ZhMbkP)ದಲ್ಲಿ ವಿವರಣೆ ನೀಡಿದ್ದೆನಲ್ಲದೆ ಸರ್ಕಾರಕ್ಕೆ ನೆರವು ಕೊಡಲು ಮುಂದೆ ಬಂದ ತಜ್ಞರ, ಸಂಸ್ಥೆಗಳ ಮತ್ತು ತಂತ್ರಾಂಶ ತಯಾರಕರ ಪಟ್ಟಿಯನ್ನೂ ನೀಡಿದ್ದೆ. ಸರ್ಕಾರವು ಈವರೆಗೆ ಈ ಪತ್ರಕ್ಕೆ ಪ್ರತಿಕ್ರಿಯಿಸಿಲ್ಲ.

ಈ ಹಿನ್ನೆಲೆಯಲ್ಲಿ ಮತ್ತು ಕನ್ನಡ ಸಮುದಾಯಕ್ಕಾಗಿ ಆಗ­ಬೇಕಿರುವ ಹಲವು ಕಾರ್ಯಗಳನ್ನು ನಾನು ಸಮೂಹ­ ಮಾಹಿತಿ ಮೂಲಕ ಈ ರೀತಿಯಾಗಿ ಪಟ್ಟಿ ಮಾಡುತ್ತಿದ್ದೇನೆ:
* ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಅಳವಡಿಕೆ ಕುರಿತು ದುಂಡುಮೇಜಿನ ಸಭೆ: ಕನ್ನಡ ತಂತ್ರಾಂಶಗಳ ಅಗತ್ಯ, ಈಗಿನ ಸ್ಥಿತಿಯ ಬಗ್ಗೆ ಸರ್ಕಾರವು ಕೂಡಲೇ ಒಂದು ದುಂಡುಮೇಜಿನ ಸಭೆ ಕರೆಯಬೇಕು. ಈ ಸಭೆಗೆ ಆಸಕ್ತ ಸಾರ್ವಜನಿಕರಲ್ಲದೆ  ಕನ್ನಡಿಗ ಯುವ ತಂತ್ರಜ್ಞರ ಸಮೂಹವನ್ನು, ಕನ್ನಡ ತಂತ್ರಾಂಶ ತಯಾರಕರನ್ನು, ಕನ್ನಡವನ್ನು ತಂತ್ರಜ್ಞಾನದಲ್ಲಿ ಅಳವಡಿಸಲು ಶ್ರಮಿಸಿದ ಹಿರಿಯರನ್ನು ಮತ್ತು ಕನ್ನಡಿಗ ಐಟಿ ಸಂಸ್ಥೆಗಳ ಪ್ರತಿ­ನಿಧಿಗಳನ್ನು ಆಹ್ವಾನಿಸಬೇಕು.

ಸಭೆಯಲ್ಲಿ ಈವರೆಗೆ ನಡೆದ ತಂತ್ರಾಂಶ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟು ವಿವರ­ವಾದ ವಿಶ್ಲೇಷಣೆಗೆ ಒಳಪಡಿಸಬೇಕು. ಇದನ್ನು ಒಂದು ಕಾರ್ಯಾ­ಗಾರದ ಮಾದರಿಯಲ್ಲಿ ದಿನವಿಡೀ  ಅಥವಾ ಎರಡು ದಿನ ನಡೆಸಿ ವ್ಯಾಪಕ ಚರ್ಚೆ ನಡೆಸಬೇಕು. ಕನ್ನಡ ತಂತ್ರಾಂಶ ಅಭಿ­ವೃದ್ಧಿ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದ ಅಗತ್ಯ ತಂತ್ರಾಂ­ಶ­ಗಳ ಪಟ್ಟಿಯ ಪರಿಷ್ಕರಣೆ, ವಿಶ್ಲೇಷಣೆಯೂ ಆಗಬೇಕು. ಈ ಸಭೆಯ ಅಧ್ಯಕ್ಷತೆಯನ್ನು ಕನ್ನಡ ಕಂಪ್ಯೂಟಿಂಗ್‌ನ ಹರಿಕಾರ ಡಾ.ಕೆ.ಪಿ. ರಾವ್‌ ಅವರೇ ವಹಿಸಿಕೊಳ್ಳುವಂತೆ ಮನವಿ ಮಾಡಿ­ಕೊಳ್ಳಬೇಕು.

* ತಂತ್ರಾಂಶ ತಯಾರಿಕೆಯ ನೀತಿ ಪ್ರಕಟಣೆ: ಮೇಲೆ ತಿಳಿಸಿ­ದಂತೆ ನಡೆಸುವ ಸಭೆಯಲ್ಲಿ ಆಸಕ್ತರನ್ನು ಒಗ್ಗೂಡಿಸಿ, ಸರ್ಕಾ­ರವು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ತಂತ್ರಾಂಶ ತಯಾರಿಕಾ ನೀತಿ ಪತ್ರವನ್ನು ರೂಪಿಸಿ ಪ್ರಕಟಿಸಬೇಕು. ಇದ­ರಲ್ಲಿ ಟೆಂಡರ್‌ ಕರೆದು ಕಾಲಬಾಹಿರ ತಂತ್ರಾಂಶ ರೂಪಿಸುವ ಪ್ರಕ್ರಿಯೆಯ ಬದಲಿಗೆ ಯುವ  ತಂತ್ರಜ್ಞ ಸಮುದಾಯವನ್ನು ಒಳಗೊಳ್ಳುವ ಸಮೂಹಭಾಗಿತ್ವ (ಕ್ರೌಡ್‌ಸೋರ್ಸಿಂಗ್‌), ಹೊರೆ­ಯಾ-­­ಗದ ಮತ್ತು  ಯಾವುದೇ ತಂತ್ರಜ್ಞರೂ ನಿರಂತರ­ವಾಗಿ ಅಭಿವೃದ್ಧಿಪಡಿಸ­ಬಹುದಾದ ಮುಕ್ತ ತಂತ್ರಾಂಶ (ಓಪನ್‌­ಸೋರ್ಸ್), - ಇವೇ ತಳಹದಿಯಾಗಬೇಕು.

* ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ರದ್ದತಿ: ಸರ್ಕಾರವು ಈಗ ಬಿಡುಗಡೆ ಮಾಡಿದ ಕಳಪೆ ತಂತ್ರಾಂಶಗಳನ್ನು ನೋಡಿದಾಗ ಈ ಸಮಿತಿಯು ತನ್ನ ಹೊಣೆಗಾರಿಕೆಯಲ್ಲಿ ವಿಫಲ­ವಾಗಿರುವುದು ಸ್ಪಷ್ಟ. ಆದ್ದರಿಂದ ಈಗಿರುವ ಸಮಿತಿ­ಯನ್ನು  ರದ್ದು­ಪಡಿಸಬೇಕು. ದುಂಡುಮೇಜಿನ ಸಭೆಯ ಶಿಫಾ­ರಸು­ಗಳ ಆಧಾರದಲ್ಲಿ ಸಮಿತಿ ಬೇಕೆ, ಬೇಡವೆ, ಹೇಗಿರಬೇಕು ಎಂಬ ನಿರ್ಣಯಕ್ಕೆ ಬರಬಹುದು.

* ‘ಕಣಜ’ ಕನ್ನಡ ಅಂತರ್ಜಾಲ ಜ್ಞಾನಕೋಶದ ಸಮರ್ಥ ನಿರ್ವಹಣೆ: ಹಿಂದಿನ ಸರ್ಕಾರವು ಆರಂಭಿಸಿದ್ದ ಕಣಜ (www.kanaja.in) ಅಂತರ್ಜಾಲ ಕನ್ನಡ ಜ್ಞಾನಕೋಶದ ಕೆಲಸವು ನಿಂತೇ­ಹೋಗಿದೆ. ಇಂಥ ಮಹತ್ವದ ಜ್ಞಾನಕೋಶ­ವನ್ನು ಉಳಿಸುವ ಮತ್ತು ಬೆಳೆಸುವ ಕುರಿತು ಈ ಕೋಶದ ಹೊಣೆಗಾರಿಕೆ ವಹಿಸಿಕೊಂಡಿರುವ ಇಂಟರ್‌ನ್ಯಾಷನಲ್‌ ಇನ್‌­ಸ್ಟಿ­ಟ್ಯೂಟ್‌ ಆಫ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಸಂಸ್ಥೆಗೆ (ಐಐ­ಐಟಿ-ಬಿ) ಯಾವುದೇ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲ.  ಆದ್ದರಿಂದ ‘ಕಣಜ’ ಜಾಲತಾಣ ಯೋಜನೆಯನ್ನು ಈ ಸಂಸ್ಥೆ­ಯಿಂದ ವಾಪಸು ಪಡೆದು, ಸಾರ್ವಜನಿಕ ಪ್ರಾತಿ­ನಿಧಿತ್ವ ಇರುವ ಸರ್ಕಾರಿ ಟ್ರಸ್ಟ್‌ ರಚಿಸಬೇಕು. ಈ ಬಗ್ಗೆಯೂ ದುಂಡುಮೇಜಿನ ಸಭೆಯಲ್ಲಿ ಚರ್ಚಿಸಿ  ನಿರ್ಧರಿಸಬಹುದು.

* ಪಠ್ಯಪುಸ್ತಕಗಳಲ್ಲಿ ಮಾಹಿತಿ ತಂತ್ರಜ್ಞಾನದ ಮಾಹಿತಿ ಪರಿಷ್ಕರಣೆ: ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಇರುವ ಪಾಠ­ಬರಹಗಳು ಅತ್ಯಂತ ಕಾಲಬಾಹಿರವಾಗಿವೆ. ­ಉದಾಹರಣೆಗೆ, ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಕನ್ನಡದಲ್ಲಿ ಇರುವ ಪಾಠಗಳು ಹತ್ತು ವರ್ಷಗಳಿಗಿಂತ ಹಳೆಯ, ಸತ್ತುಹೋದ   ತಾಣಗಳನ್ನು ಉಲ್ಲೇಖಿಸುತ್ತವೆ! ಇಂಥ ಆಭಾಸಗಳನ್ನು ಕೂಡಲೇ ನಿಲ್ಲಿಸಬೇಕು. ನಾಡಿನ ಎಲ್ಲ ಪಾಠಗಳನ್ನೂ  ಕನ್ನಡಿಗ ಐಟಿ ಲೇಖಕರ ಸಂಪಾದಕೀಯ ಬಳಗಕ್ಕೆ ವಹಿಸಿ ಸೂಕ್ತವಾಗಿ ಪರಿಷ್ಕರಿಸಿ, ಸಾಮಯಿಕಗೊಳಿಸಬೇಕು. ಕ್ಷಣಕ್ಷಣಕ್ಕೂ ಬದಲಾ­ಗುವ ತಂತ್ರಜ್ಞಾನದ ಬಗ್ಗೆ ದಶಕ ಕಳೆದರೂ ಪಾಠ ಬದಲಾ­ಯಿಸದೇ ಇರುವುದು ಅಕ್ಷಮ್ಯ.

* 'ಸಮಿತಿಯಲ್ಲ ಸಮುದಾಯ’ ಪರಿಕಲ್ಪನೆಗೆ ಗೌರವ: ಒಟ್ಟಿನಲ್ಲಿ ಸರ್ಕಾರವು ಇನ್ನುಮುಂದೆ ಸರ್ಕಾರಿ ಚಿಂತನೆಯಲ್ಲೇ ಸಮಿತಿ  ರಚಿಸುವ ಮತ್ತು ಅದನ್ನು ಕಾಯಂಗೊಳಿಸುವ ಪರಿಪಾ­ಠಕ್ಕೆ ಇತಿಶ್ರೀ ಹಾಡಬೇಕು. ಬದಲಿಗೆ ಸಮುದಾಯದ ತಾಜಾ ತಿಳಿವಳಿಕೆಯ ನಿರಂತರ ಪ್ರವಾಹಕ್ಕೆ ಮೈ ಒಡ್ಡಬೇಕು. ಇನ್ನಾದರೂ ಸರ್ಕಾರವು ಕನ್ನಡ ಮತ್ತು ಮಾಹಿತಿ ತಂತ್ರಾಂಶದ, ಕನ್ನಡ ಮತ್ತು ಅಂತರ್ಜಾಲದ ವಿಷಯಗಳಲ್ಲಿ ಕಡಿಮೆ ಸರ್ಕಾರಿ ನಿಯಂತ್ರಣ, ಹೆಚ್ಚು ಆಡಳಿತ ಎಂಬ ನೀತಿ­ಯನ್ನು ಅನುಸರಿಸಬೇಕಿದೆ. ಅಲ್ಲದೇ ಸಿದ್ಧ, ಪುರಾತನ ಸೂತ್ರ­ಗಳಲ್ಲಿಯೇ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT