‘ಪ್ರಜಾವಾಣಿ’ ಪತ್ರಿಕೆಯಲ್ಲಿ (ಮೇ ೨ ಮತ್ತು ಮೇ ೧೫) ಪ್ರಕಟವಾಗಿರುವ ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ಬಿ. ರಾಜಶೇಖರಪ್ಪ ಅವರ ಬರಹಗಳಿಗೆ ಈ ಪ್ರತಿಕ್ರಿಯೆ.
ಡಾ. ಕಲಬುರ್ಗಿ ಅವರು ಬೆಂಗಳೂರಿನಲ್ಲಿ ಸಂಕಿರಣವೊಂದರಲ್ಲಿ ಮಾತನಾಡಿದ್ದಕ್ಕೆ ವಿಷಯಾಂತರವಾಗದಂತೆ ಉತ್ತರಿಸಿದ್ದೇನೆ (ಪ್ರ.ವಾ. ಏ.೨೫). ಜೈನರೇ ಮುಂದಾಗಿ ಅನ್ಯಮತಗಳ ಮೇಲೆ ಭೌತಿಕ, ಬೌದ್ಧಿಕ ದಾಳಿ ಮಾಡಿದ ವಿವರಗಳು ಇತಿಹಾಸದಲ್ಲಿವೆ ಎಂಬ ಅವರ ಮಾತಿಗೆ ಪೂರಕವಾಗಿ ಬಿ. ರಾಜಶೇಖರಪ್ಪನವರು ‘...ಬಿಟ್ಟ ಸಂಗತಿಗಳು’ ಎಂದು ದೃಷ್ಟಾಂತ ಕೊಟ್ಟಿದ್ದಾರೆ.
ತಮ್ಮ ಅಸ್ತಿತ್ವ, ವಿಸ್ತಾರಕ್ಕಾಗಿ ಎಲ್ಲ ಮತಧರ್ಮದವರು ವಾದ ಮಾಡಿದ್ದಾರೆ. ಷಡ್ದರ್ಶನಗಳವರು, ಜೈನರು, ಬೌದ್ಧರು, ಶೈವರು ವಾದದಲ್ಲಿ ಒಬ್ಬರನ್ನೊಬ್ಬರು ಹತ್ತಿಕ್ಕಿದ ಹೆಗ್ಗಳಿಕೆಯನ್ನು ಹೇಳಿದ್ದಾರೆ. ಈ ವಾದ ಪ್ರತಿವಾದ ಭಯಂಕರರು ತಮ್ಮತಮ್ಮ ನಡುವೆ ಮಂಡನೆ ಖಂಡನೆಯನ್ನು ವಾದಗೋಷ್ಠಿಯಲ್ಲೂ ರಾಜರ ಆಸ್ಥಾನದಲ್ಲೂ ಮಾಡುತ್ತಿದ್ದರು.
ಗೆದ್ದವರಿಗೆ ರಾಜಶೇಖರಪ್ಪ ಉದಾಹರಿಸಿದ ವಾದ ವಿಜೇತ ಪ್ರಶಸ್ತಿಗಳನ್ನಿತ್ತು ಸನ್ಮಾನಿಸುತ್ತಿದ್ದರು. ಸ್ವಾರಸ್ಯವೆಂದರೆ ಈ ಧರ್ಮಗಳವರೆಲ್ಲ ಒಟ್ಟಾಗಿ ಚಾರ್ವಾಕ (ಲೋಕಾಯತ), ಆಜೀವಿಕರನ್ನು ಖಂಡಿಸುತ್ತಿದ್ದರು. ಶ್ರವಣಬೆಳಗೊಳವಲ್ಲದೆ ಇತರೆಡೆಗಳಲ್ಲೂ ಶಾಸನಗಳಲ್ಲಿ ವಾದವರೇಣ್ಯರ ಬಿರುದಾವಳಿ ಇವೆ.
ಕಾಪಾಲಿಕ, ಪಾಶುಪತ, ಲಕುಲೀಶ, ಕಾಳಾಮುಖ ಮಹಾವ್ರತಿಗಳೂ ವಾದದಲ್ಲಿ ಗಟ್ಟಿಗರು. ಬಳ್ಳಿಗಾವಿಯ ಲಕುಲೀಶ್ವರ ಪಂಡಿತನು ಲೋಕಾ ಯತ ಮಹಾವೃಕ್ಷವನ್ನು ಕತ್ತರಿಸಿ ಉರು ಳಿಸುವ ಗರಗಸ ಆಗಿದ್ದನು. ಜೈನರೂ ಬೌದ್ಧರೂ ಭಯಂಕರವಾದಿಗಳಾಗಿದ್ದರು. ಈ ಬಗೆಯ ವಾದ-ವಿವಾದಗಳೂ ಪ್ರಶಸ್ತಿಗಳೂ ಬೌದ್ಧಿಕ ಸ್ತರಕ್ಕೆ ಮೀಸಲಾದುವು. ವಾದದಲ್ಲಿ ಗೆದ್ದವರು ಯಾರೂ ಸಶಸ್ತ್ರ ಸೈನ್ಯ ಕಟ್ಟಿ ಸೋತ ಧರ್ಮದವರ ಊರುಕೇರಿ ಮನೆ ಮಠ ಮಂದಿರ ನಾಶ ಮಾಡಲಿಲ್ಲ. ಹೆಂಗಸರ ಬಟ್ಟೆ ಕಳಚಲಿಲ್ಲ. ದೇವಾಲಯ ದೇವರ ವಿಗ್ರಹ ತುಳಿದು ತುಂಡರಿಸಲಿಲ್ಲ.
ಜೈನರನ್ನು ಹಿಂಸಿಸಿದರೆಂದು ನಾನು ಹೊಸದಾಗಿ ಕಲ್ಪಿಸಿ ಹೇಳಿಲ್ಲ. ವೀರಶೈವ ಪುರಾಣಗಳೂ ಕವಿಗಳೂ ಶಾಸನಗಳೂ ವಿಸ್ತಾರವಾಗಿ ಬರೆದಿರುವುದರಲ್ಲಿ ಸ್ವಲ್ಪ ಮಾತ್ರ ಉದಾಹರಿಸಿದ್ದೇನೆ. ಓದುಗರಲ್ಲಿ ಕನಿಕರ ಹುಟ್ಟಿಸುವ ಜರೂರು ನನಗಿಲ್ಲ. ಬೌದ್ಧರನ್ನು ನನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಜಾಣತನ ತೋರಿಸಿದೆನೆಂಬುದು ಕೊಂಕು ಮಾತು. ಜೈನರನ್ನೂ ಬೌದ್ಧರನ್ನೂ ಒಟ್ಟೊಟ್ಟಿಗೆ ನರಬೇಟೆಯಾಡಿ ಸಾಮೂಹಿಕ ಹತ್ಯೆ ಮಾಡಿದ ವರ್ಣನೆಯೂ ನನ್ನದಲ್ಲ. ಅಬ್ಬಲೂರು ಮತ್ತು ತಾಳಿಕೋಟೆ ಶಾಸನೋಕ್ತ ದಾಖಲೆ ಗಳು. ಅಬ್ಬಲೂರು ಶಾಸನದ ಆರಂಭದಲ್ಲೇ ‘ಸಾಕ್ಷಾತ್ ಮಹೇಶ್ವ ರನೇ ಪರಸಮಯಿಗಳನ್ನು ಹಿಂಸಿಸು’ ಎಂದು ಅಪ್ಪಣೆ ಮಾಡಿದನೆಂದಿದೆ. ತಮಗಿರುವ ಮತದ್ವೇಷವನ್ನು ಲೋಕ ಆರಾಧಿಸುವ ಮಹೇಶ್ವರ ನಿಗೆ ಆರೋಪಿಸುವ ಬುದ್ಧಿಗೆ ಏನು ಹೇಳುವುದು.
ಎಲ್ಲ ಧರ್ಮದವರೂ ಅವರವರ ಗುಡಿಗಳನ್ನ್ನು ಕಟ್ಟಿಸುವುದು ಸಹಜ. ಬೇರೆಯವರ ದೇವಾಲಯಗಳನ್ನು ಧ್ವಂಸ ಮಾಡಿ ಅಪವಿತ್ರಗೊಳಿಸುವುದು ಅಕ್ಷಮ್ಯ ಅಪರಾಧ. ಸ್ಥಳೀಯ ಕನ್ನಡಿಗರು ಎಲ್ಲ ಧರ್ಮಗಳನ್ನು ಗೌರವಿಸಿದ ಧರ್ಮ ಸಹಿಷ್ಣುಗಳು. ದೇವಾಲಯಗಳ ನಿರ್ಮಾಣದಿಂದ ಅಸಂಖ್ಯಾತ ಕನ್ನಡಿಗರಿಗೆ ಉದ್ಯೋಗ ದೊರೆತು ಬದುಕಿಗೆ ಅನ್ನ ನೀರು ನೆರಳು ಒದಗಿತು. ಸ್ಥಳೀಯ ಪರಿಣತ ಕಲಾವಿದರ ಪ್ರತಿಭೆ ಪ್ರಕಾಶಿತವಾಯಿತು. ಹೊಟ್ಟೆಕಿಚ್ಚು ಪಟ್ಟವರು ಕನ್ನಡಿಗರಲ್ಲ.
‘ಪ್ರಭುವರ್ಗ ಸೊಕ್ಕಿತು, ಪ್ರಜಾವರ್ಗ ಸೊರಗಿತು, ಮಹಿಳೆಯು ಧಾರ್ಮಿಕ ವಿಧಿಗಳಿಂದ ಮೋಕ್ಷದಿಂದ ವಂಚಿತಳಾಗಿದ್ದಳು’ ಎಂಬ ಮಾತುಗಳು ಅತಿರಂಜಿತ ಪ್ರಚೋದಕಗಳು. ಪ್ರಸ್ತುತ ಚರ್ಚೆಯ ಪರಿಪ್ರೇಕ್ಷ್ಯಕ್ಕೆ ಸಲ್ಲದ ಸೊಲ್ಲುಗಳು. ಪ್ರಭುವರ್ಗದ ಪ್ರಜಾವತ್ಸಲತೆ ಅಮಿತವಾಗಿತ್ತು. ರಾಜರು ಪರಸಮಯ ಸಮುದ್ಧರಣರಾಗಿದ್ದರು.
ಮಹಿಳೆಯರು ಅಭಿಷೇಕ, ನೋಂಪಿ ಆರಾಧನೆ ಮೊದಲಾದ ಧಾರ್ಮಿಕ ವಿಧಾನಗಳಲ್ಲಿ ಪಾಲುಗಾರರಾಗಿದ್ದರು. ಆಕೆ ಮೋಕ್ಷದಿಂದ ವಂಚಿತಳಾಗಿರಲಿಲ್ಲ. ಸ್ತ್ರೀಣಾ ತದ್ಭವೇ ಮೋಕ್ಷಃ –- ಮಹಿಳೆಗೆ ಅದೇ ಭವದಲ್ಲಿ ಮೋಕ್ಷವಿತ್ತು. ಸಗ್ರಂಥಾನಾಂ ಮೋಕ್ಷಃ– - ಬಟ್ಟೆ ತೊಟ್ಟವರಿಗೂ ಮೋಕ್ಷ ಪ್ರಾಪ್ತಿಯಿತ್ತು. ಮಹಿಳೆ ಮಲ್ಲಿಯು ತೀರ್ಥಂಕರಳಾಗಿದ್ದಳು. ಆದಿತೀರ್ಥಂಕರನಿಗಿಂತ ಆಕೆಯ ತಾಯಿ ಮೊದಲು ಮೋಕ್ಷ ಪಡೆದಿದ್ದಳು!
ಕನ್ನಡ ಭಾಷೆಯನ್ನು ಬಳಸಿ ಉತ್ತರ ಭಾರತದ ಕೃತಿಗಳು ಅನುವಾದಗೊಂಡುವೆಂಬ ಆಕ್ಷೇಪ ಹುರುಳಿಲ್ಲದ ಮಾತು. ಭಾಷೆ ಯಾರ ಗುತ್ತಿಗೆಯೂ ಅಲ್ಲ. ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕೆಂದು ಒತ್ತಾಯಿಸುವ ನಾವೇ ಉಲ್ಟಾ ಹೊಡೆದರೆ ಹೇಗೆ? ಕನ್ನಡ ಕಲಿತು ಕನ್ನಡದಲ್ಲೇ ಮಹಾಕಾವ್ಯಗಳನ್ನು ರಚಿಸಿದ್ದು ಹೆಮ್ಮೆಪಡುವ ಸಂಗತಿ. ಲೇವಡಿ ತರವಲ್ಲ. ಹಾಗಾದರೆ ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ ಉತ್ತರ ಭಾರತದ ವಸ್ತು ಒಳಗೊಂಡಿವೆಯೆಂದು ತಿರಸ್ಕರಿಸುತ್ತೇವೆಯೆ? ಹೊಸವಸ್ತು ವಿಚಾರಗಳಿಂದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಹಿಗ್ಗಿ ವೈವಿಧ್ಯದಿಂದ ಕಂಗೊಳಿಸುತ್ತಿದೆ. ಭಾಷೆ ಸಾಹಿತ್ಯ ಸಂಸ್ಕೃತಿಗಳ ಸಂಗಮವು ಸಮನ್ವಯ ಪಥ. ಇದರಿಂದ ಕನ್ನಡದ ಅರಿವು ಹೆಚ್ಚಿತು, ಅಸ್ಮಿತೆ ಇನ್ನೂ ಬಲವಾಯಿತು.
ಬಸವಣ್ಣನವರ ಚಳವಳಿ ಉತ್ತರ ಭಾರತದ ಸಂಸ್ಕೃತಿಯ ವಿರುದ್ಧವಾಗಿತ್ತೆಂಬುದು ಅಪವ್ಯಾಖ್ಯಾನಕ್ಕೆ ಒಳ್ಳೆಯ ಉದಾಹರಣೆ ಆಗಬಹುದಷ್ಟೆ. ವಲಸೆ ಬಂದವರು ಎಂಬ ಚರ್ವಿತ ಚರ್ವಣ ಪೂರ್ವಗ್ರಹ ಆರೋಗ್ಯಕರ ಚಿಂತನೆ ಎನಿಸದು. ಆ ಚಕ್ರತೀರ್ಥದ ಸುಳಿಯಲ್ಲಿ ಸುತ್ತುವವರಿಗೆ ದಿಟದ ದರ್ಶನ ಬಿಸಿಲ್ಗುದುರೆ. ವೀರಶೈವ ಲಿಂಗಾಯತರು ಪೂಜಿಸುವ ಶಿವ, ಪಾರ್ವತಿ, ಗಣೇಶ ಉತ್ತರ ಭಾರತದಿಂದ ಬಂದ ವಲಸೆ ದೇವರೆನ್ನೋಣವೆ?
ಉತ್ತರದಿಂದ ವಲಸೆ ಬಂದವರು ಎಂಬಿತ್ಯಾದಿ ಹಣೆಪಟ್ಟಿ ಕಟ್ಟಿ ಸೀಳಿ ಆಳುವ ಮೈಂಡ್ ಸೆಟ್ ಅಥವಾ ಅಜೆಂಡ ಆತ್ಮಹತ್ಯಾಕಾರಿ. ಸೌಹಾರ್ದದಿಂದ ಒಟ್ಟಿಗೆ ಕೂಡಿ ಬಾಳಲು ಬಯಸುವ ಕನ್ನಡ ಮನಸುಗಳಿಗೆ ಆಘಾತಕಾರಿ. ಅಸಹನೆಯ ಕಾಳು ಬಿತ್ತಿ ರಾಗದ್ವೇಷದ ಬೆಳೆಯನ್ನು ಅಪೇಕ್ಷಿಸುವುದು ಫ್ಯಾಸಿಸ್ಟ್ ಮನೋವೃತ್ತಿಗೆ ಹತ್ತಿರ. ಉತ್ತರದವರು, ವಲಸೆ ಬಂದವರು, ನಮ್ಮ ಭಾಷೆಯಲ್ಲಿ ಬರೆದರು, ಅವರ ದೇವಾಲಯಗಳನ್ನು ಕಟ್ಟಿ ಅವರ ದೇವರನ್ನು ಬಿಟ್ಟರು - ಎಂಬಿತ್ಯಾದಿ ಬರಹ ಓದುತ್ತಿದ್ದರೆ ಸರ್ವಾಧಿಕಾರಿಯ ಕತ್ತಿ ತೂಗಾಡುತ್ತಿರುವ ದೃಶ್ಯ ಕಾಣುತ್ತದೆ. ಭಾರತೀಯತ್ವ, ಪ್ರಜಾಪ್ರಭುತ್ವ ಮತ್ತು ಮಾನವತ್ವ ನಂಬುವ ಕನ್ನಡಿಗರಿಗೆ ಅಪಾಯಕಾರಿ ಧೋರಣೆ ಎನಿಸುತ್ತದೆ.
(ಈ ವಿಷಯ ಕುರಿತ ಚರ್ಚೆ ಇಲ್ಲಿಗೆ ಮುಗಿಯಿತು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.