ವಾರ್ತಾ ಇಲಾಖೆ ಆಯೋಜಿಸಿರುವ ‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ಕುರಿತ (ವಾ.ವಾ. ಫೆ. 6) ಪ್ರಕಾಶ್ ಕಾಕಾಲ್ ಅವರ ಪ್ರತಿಕ್ರಿಯೆ ನೋಡಿ ದಿಗ್ಭ್ರಮೆಯಾಯಿತು. ಸರ್ಕಾರದ ಹಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದನ್ನು ಆಕ್ಷೇಪಿಸಿರುವ ಅವರು, ಅರ್ಥವಿಲ್ಲದ ಭಯವನ್ನು ತೋಡಿಕೊಂಡಿದ್ದಾರೆ.
ಬ್ರಾಹ್ಮಣರನ್ನು ಖಳನಾಯಕರಂತೆ ಬಳಸಲಾಗಿದೆ. ಆ ಪಾತ್ರಗಳ ಬಾಯಿಂದ ಹೊಲೆಯ, ಅಸ್ಪೃಶ್ಯ ತರದ ಶಬ್ದಗಳನ್ನು ಹೊರಡಿಸಿ ಸಾಮರಸ್ಯ ಕದಡುವ ಅಪಾಯವಿದೆ ಎಂದಿರುವುದು ದೇಶದ ಶ್ರೇಣೀಕೃತ ಸಮಾಜದಲ್ಲಿ ಬದುಕುತ್ತಿರುವ ನಮ್ಮಂಥವರಿಗೆ ಆಶ್ಚರ್ಯದ ಸಂಗತಿ. ಶ್ರೀಯುತರು ಪ್ರತಿದಿನ ಬೆಳಿಗ್ಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪತ್ರಿಕೆಗಳನ್ನು ಓದುತ್ತಾರೆನಿಸುತ್ತದೆ. ಅಸ್ಪೃಶ್ಯತೆ ಆಚರಣೆ,
ಜಾತಿ ನಿಂದನೆ, ಬಹಿಷ್ಕಾರದಂತಹ ಸುದ್ದಿಗಳಿಲ್ಲದೆ ಯಾವ ಪತ್ರಿಕೆಗಳೂ ಮುದ್ರಣಗೊಳ್ಳುವುದಿಲ್ಲ.
ತಳಸಮುದಾಯಗಳ ಜನರನ್ನು ಮನುಷ್ಯರಾಗಿಯೂ ಕಾಣದೆ ಗಾಯದ ಬೀಜಗಳನ್ನು ನೆಟ್ಟ ಇವರು ಈಗ ಮನಸ್ಸಿಗೆ ಬೇಸರ ಪಟ್ಟುಕೊಳ್ಳುತ್ತಿರುವುದನ್ನು ನೋಡಿದರೆ ಈ ರೂಪಕ ಪ್ರದರ್ಶನ ಸಾರ್ಥಕವಾಗಿದೆ. ಇಂಥ ಪ್ರಯತ್ನಗಳನ್ನು ವಿಸ್ತರಿಸುವಂತೆ ಒತ್ತಾಯ ಮಾಡಬೇಕಿದೆ.ಸಾವಿರ ವರ್ಷಗಳ ಹಿಂದಿನ ಗ್ರಂಥಗಳನ್ನು ತಿರುಚಲಾಗಿದೆ ಎಂದು ಹೇಳಿರುವ ಶ್ರೀಯುತರ ಮಾತನ್ನು ಕನ್ನಡ ಸಾಹಿತ್ಯ-, ಸಂಸ್ಕೃತಿಯ ಕನಿಷ್ಠ ಜ್ಞಾನವಿರುವ ಯಾರೂ ಒಪ್ಪಲಾರರು. ಗಾಯ ಮಾಡಿದ್ದನ್ನು ಒಪ್ಪಿಕೊಂಡಿರುವ ಇವರು, ಅವು ವರ್ತಮಾನದಲ್ಲಿ ರಣಗೊಂಡಿರುವುದನ್ನು ಕಾಣಲು ಹೆದರಿ, ಕೆರೆಯಬೇಡಿ ಎಂದು ಕಣ್ಣುಮುಚ್ಚಿ ಕೂಗಿದರೆ? ಇರುವ ಗಾಯ ಮೈ-ಮನಸ್ಸುಗಳನ್ನು ವ್ಯಾಪಿಸಿ
ದಾಗ ಅದನ್ನು ವಾಸಿ ಮಾಡುವ ಪ್ರಯತ್ನ ಮಾಡುವುದು ಮೊದಲ ಘಟ್ಟ. ಗಾಯ ಆಗದ ಹಾಗೆ ತಡೆಯುವುದು ನಂತರದ ಕೆಲಸವಲ್ಲವೇ? ಆ ಕೆಲಸ ಎಲ್ಲರದಲ್ಲವೇ?