‘ಕ್ಷಮಿಸಿ! ಹಿಂದುತ್ವ ಬೇರೆ ಹಿಂದೂಧರ್ಮ ಬೇರೆ’ (ಪ್ರ.ವಾ., ಜೂನ್ 21) ಲೇಖನದಲ್ಲಿ ಪ್ರಸನ್ನ ಅವರು ಹಿಂದೂಧರ್ಮವೆಂಬ ಸೂರ್ಯನಿಗೆ ಜಾತೀಯತೆಯೆಂಬ ಅಪ್ಪಟ ದೇಸಿ ಗ್ರಹಣ ಹಿಡಿದಿರುವುದರಿಂದಾಗಿ ಅದರ ‘ಪ್ರಖರತೆ’ ಮಾಸಿದೆ, ಈ ಗ್ರಹಣದ ಸಂಧಿಯಲ್ಲಿ ಉಗ್ರ ಹಿಂದುತ್ವವು ಅವತರಿಸಿದೆಯೆಂದೂ ಇದನ್ನು ಹದ್ದುಬಸ್ತಿನಲ್ಲಿಡಲು ‘ಮೃದು ಹಿಂದುತ್ವವಾದಿ’ಗಳನ್ನು ಮುಖ್ಯವಾಹಿನಿಗೆ ತರಬೇಕೆಂದೂ ವಾದಿಸಿದ್ದಾರೆ. ಇದು ಅರೆಬರೆ ಮಾಹಿತಿಗಳನ್ನು ಮುಂದಿಟ್ಟುಕೊಂಡು ಅರ್ಥೈಸಲಾಗಿರುವ ಲೇಖನ.
ಇತರ ಧಾರ್ಮಿಕ ಮೂಲಭೂತವಾದಗಳಿಗೆ ಇರುವಂತೆಯೇ ಹಿಂದುತ್ವವಾದದ ಅವತರಣದ ಹಿಂದೆಯೂ ಅದರದ್ದೇ ಆದ ಆರ್ಥಿಕ- ರಾಜಕೀಯ ಅಜೆಂಡಾ ಇದೆ ಎಂಬುದನ್ನು ಪ್ರಸನ್ನ ಅವರು ಸರಿಯಾಗಿ ಗ್ರಹಿಸಿಯೇ ಇಲ್ಲ. ಆದ್ದರಿಂದಲೇ ಅವರು ಆರ್ಎಸ್ಎಸ್ನ ‘ಹಿಂದೂ ರಾಷ್ಟ್ರ ನಿರ್ಮಾಣ’ದ ಸ್ಪಷ್ಟ ಕಾರ್ಯಸೂಚಿಯನ್ನು ಚರ್ಚೆಯಿಂದ ಹೊರಗಿಟ್ಟಿದ್ದಾರೆ.