ಒಂದು ವೇಳೆ ಕಡಿಮೆ ಅಂಕ ಬಂದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ ನ್ಯಾಯ ಪಡೆಯುವ ಅವಕಾಶವೇನೋ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಹಣವನ್ನೂ ಹೊಂದಿಸಲು ಸಾಧ್ಯವಾಗದಂತಹವರೂ ನಮ್ಮಲ್ಲಿ ಇದ್ದಾರೆ. ಅಂತಹವರು ಏನು ಮಾಡಬೇಕು? ತಮಗೆ ಅನ್ಯಾಯವಾಗಿದ್ದರೂ ಸಹಿಸಿಕೊಂಡೇ ಸುಮ್ಮನಿರಬೇಕಾಗುತ್ತದೆ. ಹಾಗೆಯೇ ಸ್ನಾತಕೋತ್ತರ ಪರೀಕ್ಷೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೆಲವು ವಿಶ್ವವಿದ್ಯಾಲಯಗಳಲ್ಲಿ ಅವಕಾಶವೇ ಇಲ್ಲ. ಉದಾಸೀನದ ಮೌಲ್ಯಮಾಪನದಿಂದಾಗಿ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣವಾದರೆ ಅಂತಹ ವಿದ್ಯಾರ್ಥಿಯ ಪಾಡೇನು? ಅಂತಹವರು ನ್ಯಾಯಕ್ಕಾಗಿ ಅಲೆದಾಡಿ ಬಳಲಿ ಕೊನೆಗೆ ಸುಮ್ಮನಾಗಬಹುದು ಅಥವಾ ಖಿನ್ನತೆಯಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು. ಇಂತಹ ಸ್ಥಿತಿಗೆ ಯಾರನ್ನು ಹೊಣೆ ಮಾಡುವುದು?ಹಾಗೆಂದ ಮಾತ್ರಕ್ಕೆ ಉಪನ್ಯಾಸಕರಿಗೆ ಸಮಸ್ಯೆಗಳಿಲ್ಲ ಎಂದೇನಿಲ್ಲ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕಟ್ಟುವ ಗುರುವಿನ ಸ್ಥಾನದಲ್ಲಿ ಇರುವವರು ತಾಳ್ಮೆ, ಸಹನೆ, ಜವಾಬ್ದಾರಿಯಿಂದ ಇರಬೇಕು.