ಸಚಿವ ಎಚ್.ಕೆ.ಪಾಟೀಲ ಅವರು ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆ ಕುರಿತಾದ ಮಸೂದೆ ಮಂಡಿಸಿರುವುದು (ಪ್ರ.ವಾ., ಮಾರ್ಚ್ 29) ಸ್ವಾಗತಾರ್ಹ.
ನಮ್ಮ ಇಂದಿನ ಎಲ್ಲ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬೇರುಗಳು ಗ್ರಾಮ ಪ್ರತಿಭೆ, ಗ್ರಾಮ ಚಿಂತನೆ ಮತ್ತು ಗ್ರಾಮ ತಂತ್ರಜ್ಞಾನಗಳ ಮೂಲ ಬೇರುಗಳಿಂದ ಚಿಗುರೊಡೆದಿವೆ ಎಂಬುದನ್ನು ಮರೆಯುವಂತಿಲ್ಲ.
ಮಾನವನ ಸಂಸ್ಕೃತಿಯ ಮೂಲ ನೆಲೆಯಾಗಿ, ಅವನ ಎಲ್ಲ ಅಂಗಗಳಿಗೆ ತಳಹದಿಯಾಗಿ ಹಳ್ಳಿಗಳನ್ನು ನೋಡಲಾಗುತ್ತಿತ್ತು. ಆದ್ದರಿಂದಲೇ ಗಾಂಧೀಜಿ ನಿಜವಾದ ಭಾರತವೆಂದರೆ ಗ್ರಾಮೀಣ ಭಾರತ ಎಂದಿದ್ದಾರೆ.
ಆದರೆ ಇಂತಹ ಗ್ರಾಮಗಳು ಇಂದು ನಗರೀಕರಣ, ಜಾಗತೀಕರಣ, ಪಾಶ್ಚಾತ್ಯೀಕರಣ ಮುಂತಾದವುಗಳ ಪರಿಣಾಮಗಳಿಂದ ಬಹಳಷ್ಟು ಪರಿವರ್ತನೆಗೊಂಡಿವೆ ಹಾಗೂ ಹಲವಾರು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿವೆ. ನೂತನ ವಿಶ್ವವಿದ್ಯಾಲಯ ಗ್ರಾಮೀಣ ಸಮಾಜದ ಸಮಗ್ರ ಅಧ್ಯಯನದ ಮೂಲಕ ಗ್ರಾಮೀಣಾಭಿವೃದ್ಧಿಗೆ ನೆರವಾಗಲಿ.