ಪ್ರತಿ ವರ್ಷವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸುತ್ತವೆ. ಬೇಡಿಕೆ ಹೆಚ್ಚಿರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವುದು, ಕಡಿಮೆ ಬೇಡಿಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವುದು ಸರ್ವೇ ಸಾಮಾನ್ಯ. ಈ ಮೂಲಕ ಹೆಚ್ಚು ತೆರಿಗೆ ಸಂಗ್ರಹದ ಗುರಿ ಸರ್ಕಾರಗಳಿಗೆ ಇರುತ್ತದೆ.
ಕೃಷಿ, ಶಿಕ್ಷಣ, ರಕ್ಷಣೆ, ನೀರಾವರಿ, ರಸ್ತೆ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ ಇನ್ನಿತರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂಪಾಯಿ ಒದಗಿಸುವುದಾಗಿ ಹೇಳಿಕೊಳ್ಳುತ್ತವೆ. ಆದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಹಳ್ಳಿಗಳನ್ನು ಮುಟ್ಟುವುದು ಅರೆಕಾಸಿನ ಮಜ್ಜಿಗೆ ಮಾತ್ರ.
‘ಪಂಡಿತ’ ರಾಜಕಾರಣಿಗಳು ಎಂದಿನಂತೆ ಬಜೆಟ್ ಕುರಿತು ತಮ್ಮ ಪರ ವಿರೋಧದ ಹೇಳಿಕೆಗಳನ್ನು ಮಾಧ್ಯಮಗಳಿಗೆ ಕೊಡುತ್ತಾರೆ. ಆಡಳಿತಾರೂಢ ಪಕ್ಷದ ಮುಖಂಡರು ಬಜೆಟ್ ಜನಪರ, ರೈತಪರ, ಬಡವರ ಪರ ಎನ್ನುತ್ತಾ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯನ್ನು ಹೊಗಳಿ ಹೀರೊ ಮಾಡುತ್ತಾರೆ. ಅದೇ ವಿರೋಧ ಪಕ್ಷದ ಮುಖಂಡರು ಈ ಬಜೆಟ್ ರೈತರಿಗೆ, ಕೂಲಿಕಾರರಿಗೆ, ಬಡವರಿಗೆ, ನೇಕಾರರಿಗೆ, ನೀರಾವರಿಗೆ, ಅಭಿವೃದ್ಧಿಗೆ ನಿರಾಶಾದಾಯಕ ಎಂದು ಖಂಡಿಸುತ್ತಾರೆ. ಇದು ಪ್ರತಿವರ್ಷ ಬಜೆಟ್ ಮಂಡನೆಯಾದಾಗ ಪುನರಾವರ್ತನೆಯಾಗುವ ಪ್ರಕ್ರಿಯೆ.
ಇನ್ನು ಟಿ.ವಿ. ವಾಹಿನಿಗಳು ಬಜೆಟ್ ಕುರಿತು ನಾಲ್ಕಾರು ಪಂಡಿತರನ್ನು ಕರೆಸಿ ಬೆಳಗಿನಿಂದ ಸಂಜೆಯವರೆಗೂ ನಾಲ್ಕೆಂಟು ದಿನ ಕೊರೆದದ್ದೇ ಕೊರೆದದ್ದು. ಆದರೆ ಜನಸಾಮಾನ್ಯರಿಗೆ ಇದರಿಂದ ಏನು ಪ್ರಯೋಜನವಾಗುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿಯುವುದೇ ಇಲ್ಲ.
- ಜಿ.ಬಿ.ಕಂಬಾಳಿಮಠ, ಹುನಗುಂದ