ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸ್ಥಳೀಯ ಸರ್ಕಾರಗಳು ಹೆಚ್ಚಿನ ಮಹತ್ವ ಪಡೆದಿವೆ. ಆದರೆ, ಪಂಚಾಯಿತಿ ಚುನಾವಣೆಗಳು ನೈತಿಕವಾಗಿ ದಿವಾಳಿಯಾಗಿವೆ. ಇದಕ್ಕೆ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ಕಾರಣ.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರಗಳು ಹೆಚ್ಚಿನ ಅನುದಾನ ಒದಗಿಸುತ್ತಿವೆ. ಆದರೆ ಅದರ ಉಪಯೋಗ ಸರಿಯಾದ ರೀತಿಯಲ್ಲಿ ಆಗಿಲ್ಲ. ಗ್ರಾಮಗಳ ಅಭಿವೃದ್ಧಿ ಕನಸಿನ ಮಾತಾಗಿಯೇ ಉಳಿದಿದೆ. ಬಹುಪಾಲು ಹಳ್ಳಿಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಕೆಲವು ಗ್ರಾಮಗಳಿಗೆ ಇನ್ನೂ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಲಾಗಿಲ್ಲ. ರಸ್ತೆ ಇದ್ದರೆ ಬಸ್ ಸೇವೆ ಇಲ್ಲ. ಆಸ್ಪತ್ರೆಗಳ ಲಭ್ಯತೆಯೂ ಅಷ್ಟಕಷ್ಟೆ.
ಸ್ಥಳೀಯ ಸರ್ಕಾರಗಳು ಬರಿ ಅಧಿಕಾರಕ್ಕಾಗಿ, ಅಭಿವೃದ್ಧಿಗಾಗಿ ಅಲ್ಲ ಎಂಬಂತಾಗಿದೆ. ಆದಕಾರಣ ಈ ಸಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನರು ಎಚ್ಚರದಿಂದ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕಾಗಿದೆ. ಮತ ಅಸ್ತ್ರವನ್ನು ವಿವೇಚನೆಯಿಂದ ಬಳಸಬೇಕು.