ಜಗತ್ತಿನ ಹಲವು ದೇಶಗಳು ಮಾನವೀಯ ನೆಲೆಯಲ್ಲಿ ಸಿರಿಯಾ ಪ್ರಜೆಗಳ ನೆರವಿಗೆ ನಿಂತಿರುವುದು ನಾಗರಿಕತೆ, ಅಂತಃಕರಣ ಮತ್ತು ಭ್ರಾತೃತ್ವ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನ. ಆದರೆ ಸಮಾನತೆ, ಸಹೋದರತೆ, ನೋವು ಹಂಚಿಕೊಳ್ಳುವ ತತ್ವದ ಮೇಲೆ ಸರ್ಕಾರ ನಡೆಸುತ್ತಿರುವ ಮುಸ್ಲಿಂ ರಾಷ್ಟ್ರಗಳು ಸಿರಿಯಾ ಕಲಹಕ್ಕೆ ಮನುಷ್ಯತ್ವದ ಆಧಾರದ ಮೇಲೆ ಯಾಕೆ ಸ್ಪಂದಿಸುತ್ತಿಲ್ಲ?
ಪವಿತ್ರ ಧರ್ಮದ ವಾರಸುದಾರರಂತೆ ಬಿಂಬಿಸಿ ಕೊಳ್ಳುವ ಸೌದಿ ಅರೇಬಿಯಾ, ಪಾಕಿಸ್ತಾನ, ಇರಾನ್, ಇರಾಕ್, ಮಲೇಷ್ಯಾದಂಥ ದೇಶಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದನ್ನು ಯಾವ ರೀತಿ ಅರ್ಥೈಸಿಕೊಳ್ಳಬೇಕು?
ಉದಾರತೆ, ಪ್ರಜಾಪ್ರಭುತ್ವದ ರಕ್ಷಣೆ, ಸರ್ವಧರ್ಮ ಸಹಿಷ್ಣುತೆ, ಸಮಾನತೆ, ಸಹಬಾಳ್ವೆಯನ್ನೇ ಮಾನವೀಯತೆಯ ಬುನಾದಿ ಎಂದುಕೊಂಡಿರುವ ಭಾರತ, ಅಮೆರಿಕ, ಕೆನಡಾ, ಜರ್ಮನಿ, ಹಂಗೆರಿ, ಆಸ್ಟ್ರೇಲಿಯಾ, ಐರ್ಲೆಂಡ್, ನೆದರ್ಲೆಂಡ್ ಮುಂತಾದ ದೇಶಗಳಲ್ಲಿ ಈ ಸಮಸ್ಯೆಗೆ ವ್ಯಕ್ತವಾಗಿರುವ ಸ್ಪಂದನೆ ಮುಸ್ಲಿಂ ದೇಶಗಳಲ್ಲಿ ವ್ಯಕ್ತವಾಗಿಲ್ಲ.
ಈ ಸಂದರ್ಭವನ್ನು ಬಳಸಿಕೊಂಡು ಕೆಲವು ದೇಶಗಳು ಬಲಶಾಲಿ ದೇಶಗಳಲ್ಲಿ ಆಂತರಿಕ ಕ್ಷೋಭೆ ಉಂಟುಮಾಡಲು ಹವಣಿಸುತ್ತಿವೆಯೇ? ದುರ್ಜನರ ಅನಾಚಾರಕ್ಕಿಂತ ಸಜ್ಜನರ ಮೌನ ಹೆಚ್ಚು ಅಪಾಯಕಾರಿ. ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಕೂಡಲೇ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕು.