ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಣಯಿಸಿರುವುದು ಆಶ್ಚರ್ಯದ ಸಂಗತಿ. ರಾಜ್ಯದಲ್ಲಿ ವಿವಿಧ ಕಾರಣಗಳಿಗಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ದುರದೃಷ್ಟಕರ. ರೈತರ ಬವಣೆಗೆ ಸರ್ಕಾರ ಅನುಕಂಪ ತೋರಿಸಿದರೆ ಸಾಲದು. ತೀವ್ರ ಆರ್ಥಿಕ ತೊಂದರೆ ಎದುರಿಸುತ್ತಿರುವ ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಬೇಕು. ಆ ಮೂಲಕ ಅವರಲ್ಲಿ ಜೀವನೋತ್ಸಾಹ ತುಂಬಬೇಕು.
ಆದರೆ ಬರ ಮತ್ತಿತರ ಕಾರಣಗಳನ್ನು ಮುಂದೊಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯ ವೈಭವವನ್ನು ಬಿಂಬಿಸುವ ಮೈಸೂರು ದಸರಾ ಉತ್ಸವವನ್ನು ಎಂದಿನಂತೆ ಆಚರಿಸಲು ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ಪರಂಪರೆ ವಿರೋಧಿ ಧೋರಣೆಯಾಗುತ್ತದೆ.
ಮೈಸೂರಿನ ಅರಸರು ತಮ್ಮ ಕುಟುಂಬದಲ್ಲಿ ಸಾವು– ನೋವು ಸಂಭವಿಸಿದ ಸಮಯದಲ್ಲಿಯೂ ದಸರಾ ಉತ್ಸವವನ್ನು ನಿಲ್ಲಿಸಿಲ್ಲ ಎಂಬುದಕ್ಕೆ ನಿದರ್ಶನಗಳು ಇವೆ. ಅಡಗೂರು ಎಚ್. ವಿಶ್ವನಾಥ್ ಜಾರಿಯೋಗ್ಯ ಸಲಹೆ ನೀಡಿದ್ದಾರೆ. ಅವರು ಸೂಚಿಸಿರುವಂತೆ ಸರ್ಕಾರ, ಖಾಸಗಿಯವರ ಸಹಭಾಗಿತ್ವದಲ್ಲಿ ದಸರಾ ಉತ್ಸವವನ್ನು ಆಚರಿಸಲಿ. ಈ ಉತ್ಸವದಿಂದ ರಾಜ್ಯದ ಕಲಾವಿದರಿಗೆ ಆರ್ಥಿಕ ಸಹಾಯ ಸಿಗುತ್ತದೆ. ರಿಕ್ಷಾ ಚಾಲಕರು, ಸಣ್ಣ ವ್ಯಾಪಾರಿಗಳಿಗೆ ಜೀವನೋಪಾಯಕ್ಕೆ ಹಾದಿ ತೆರೆದುಕೊಳ್ಳುತ್ತದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಬರ ಅಂತ ವಿಚಾರ ಸಂಕಿರಣಗಳು ನಿಂತಿಲ್ಲ. ಚುನಾವಣಾ ಖರ್ಚು ಕಡಿಮೆ ಆಗಿಲ್ಲ. ಅಲ್ಲವೇ?