ಸರ್ಕಾರ, ವಿದ್ಯುತ್ ಉಳಿತಾಯಕ್ಕಾಗಿ ಎಲ್.ಇ.ಡಿ. ಬಲ್ಬುಗಳ ಬಳಕೆಯನ್ನು ಕಡ್ಡಾಯ ಮಾಡಲು ಹೊರಟಿದೆ. ಆದರೆ ಈ ಯೋಜನೆ ಜಾರಿಯ ನಂತರ ನೇಪಥ್ಯಕ್ಕೆ ಸರಿಯುವ ಹಳೆಯ ಬಲ್ಬುಗಳು, ಟ್ಯೂಬ್ಲೈಟ್ಗಳು, ಸೋಡಿಯಂ– ಮರ್ಕ್ಯುರಿ ಬಲ್ಬುಗಳು, ಸಿ.ಎಫ್.ಎಲ್. ಬಲ್ಬುಗಳ ವಿಲೇವಾರಿ ಹೇಗೆ ಎಂದು ಎಂದಾದರೂ ಯೋಚಿಸಿದೆಯೆ?
ಕೋಟ್ಯಂತರ ಸಂಖ್ಯೆಯಲ್ಲಿ ಸಂಗ್ರಹಗೊಳ್ಳುವ ಈ ತ್ಯಾಜ್ಯವನ್ನು ಜನ ತಿಳಿವಳಿಕೆಯ ಕೊರತೆಯಿಂದ ಎಲ್ಲೆಂದರಲ್ಲಿ ಬಿಸಾಡಿದರೆ ಅದರೊಳಗಿರುವ ವಿಷಾನಿಲ, ವಿಷಕಾರಿ ರಾಸಾಯನಿಕಗಳು ನಮ್ಮ ಭೂಮಿ, ಅಂತರ್ಜಲದ ಒರತೆ ಮತ್ತು ವಾಯುಮಂಡಲವನ್ನು ಸೇರಿ ಅವನ್ನು ಕಲುಷಿತಗೊಳಿಸಿ, ನಮಗೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ತರಬಲ್ಲವು.
ಇವುಗಳ ಸುರಕ್ಷಿತ ವಿಲೇವಾರಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಈ ಕಾರ್ಯವನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸುವುದು ಅತ್ಯಂತ ಸಮಯೋಚಿತ ಕ್ರಮವಾಗುತ್ತದೆ. ಈ ಅನಪೇಕ್ಷಿತ ಆಧುನಿಕ ಭಸ್ಮಾಸುರನನ್ನು ಹತ್ತಿಕ್ಕುವ ಕೆಲಸ ಇಂಧನ ಸಚಿವರದೋ ಅಥವಾ ಪರಿಸರ ಸಚಿವರದೋ
ಎಂಬುದನ್ನು ಸಹ ಮುಖ್ಯಮಂತ್ರಿ ನಿರ್ಧರಿಸಲಿ.