ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯನ್ನು ಯಲಹಂಕ ಅರಕ್ಷಕ ಠಾಣೆಯಿಂದ ಬಿ.ಎಂ.ಎಸ್. ಕಾಲೇಜಿನವರೆವಿಗೂ ಅಭಿವೃದ್ಧಿಪಡಿಸಿದ್ದು, ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯುವ ಕಾಲುವೆಯ ಮೇಲೆ ಕಾಂಕ್ರೀಟ್ ಹಾಕಿ ಪಾದಚಾರಿ ರಸ್ತೆಯನ್ನಾಗಿ ಮಾಡಿದ್ದಾರೆ.
ಚರಂಡಿ ಮೇಲೆ ಕಾಂಕ್ರೀಟ್ ಹಾಕಿ, ಕಾಂಕ್ರೀಟ್ ಕ್ಯೂರಿಂಗ್ ಆದಮೇಲೆ ಸೆಂಟ್ರಿಂಗ್ ತೆಗೆಯುತ್ತಿದ್ದಂತೆಯೇ ಕಾಂಕ್ರೀಟ್ ಹಲವೆಡೆ ಕುಸಿದಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಸಾಕ್ಷಿ. ಬಿಬಿಎಂಪಿಯಿಂದ ನಿಯೋಜಿಸಲಾದ ಕಸ ಗುಡಿಸುವವರು ಸಂಗ್ರಹವಾದ ಕಸ, ತರಗೆಲೆಗಳನ್ನು ಕಾಂಕ್ರೀಟ್ ಕುಸಿದಿರುವ ಮೋರಿಗೆ ಸುರಿಯುತ್ತಾರೆ.
ನಿಗದಿತ ಪ್ರಮಾಣದಷ್ಟು ರಾಶಿ ಆದಮೇಲೆ ಬೆಂಕಿ ಹಚ್ಚುತ್ತಾರೆ. ಇವೆಲ್ಲವುಗಳಿಂದಾಗಿ ಅಲ್ಲಿ ತಿರುಗಾಡುವುದೇ ಕಷ್ಟ. ಪಾದಚಾರಿ ರಸ್ತೆ ಆಯ್ಕೆ ಮಾಡಿಕೊಂಡ ನಾಗರಿಕರು ಕಾಂಕ್ರೀಟ್ ಕುಸಿದಿರುವ ಕಡೆ ವಾಹನಗಳ ಓಡಾಟ ಅಪಾಯವನ್ನು ಲೆಕ್ಕಿಸದೆ ರಸ್ತೆಗಿಳಿದು ಮತ್ತೆ ಪಾದಚಾರಿ ರಸ್ತೆಗೆ ಹತ್ತುವ ಸರ್ಕಸ್ ಮಾಡುವುದು ದಿನನಿತ್ಯದ ಕಾಯಕ. ಇಷ್ಟೊಂದು ಗಂಭೀರ ಸಮಸ್ಯೆ ಇರುವ ಸ್ಥಳದತ್ತ ಮೂರು ನಾಲ್ಕು ವರ್ಷ ಕಳೆದರೂ ಗಮನಹರಿಸಿಲ್ಲದಿರುವುದು ವಿಪರ್ಯಾಸ.