‘ರಾಷ್ಟ್ರಪತಿಗಳು ಮತದಾನದಿಂದ ಹೊರಗೆ’ ಎಂಬ ಸುದ್ದಿ ಓದಿದಾಗ, ‘ಇದು ಸರಿಯೇ’ ಎಂಬ ಪ್ರಶ್ನೆ ಮೂಡಿತು. ನಮ್ಮ ಸಂವಿಧಾನದ ಪ್ರಕಾರ ಮತದಾನಕ್ಕೆ ಅರ್ಹರಾದ ಪ್ರತಿಯೊಬ್ಬ ಭಾರತೀಯ ಪ್ರಜೆ ತಪ್ಪದೆ ಮತದಾನ ಮಾಡಬೇಕು ಎಂಬುದು ನಿಯಮ.
ಅನರ್ಹ ಮತದಾರರು ಯಾರ್್ಯಾರು ಎಂಬುದನ್ನು ಚುನಾವಣೆ ನಿಯಮದಲ್ಲಿ ವಿವರವಾಗಿ ತಿಳಿಸಲಾಗಿದೆ. ಹೀಗಿರುವಾಗ, ರಾಷ್ಟ್ರಪತಿಗಳು ಸಹ ಮೊದಲು ಭಾರತೀಯ ಅರ್ಹ ಪ್ರಜೆ, ಆ ನಂತರ ಆ ಸ್ಥಾನಕ್ಕೆ ನೇಮಕವಾಗಿ ರಾಷ್ಟ್ರಪತಿಗಳಾಗುತ್ತಾರೆ. ಸ್ಥಾನದ ಘನತೆ, ಗೌರವ ಕಾಪಾಡಲು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸುತ್ತಾರೆ.
ಆದರೆ ಮತದಾನ ಅವರ ಹಕ್ಕು. ಇಲ್ಲಿ ಯಾವುದೇ ಒಂದು ಪಕ್ಷದ ಪರ–ವಿರೋಧ ಎಂಬುದು ಬರುವುದಿಲ್ಲ. ಮುಂದೆ ತಮ್ಮನ್ನು ಆಳುವ ಸರ್ಕಾರ ಯಾವುದಿರಬೇಕೆಂಬುದನ್ನು ಬಹುಮತದಿಂದ ಚುನಾಯಿಸಲು ಅವರು ಮತ ಹಾಕುತ್ತಾರೆಯೇ ಹೊರತು ಅವರು ಯಾರ
ಪರವಾಗಿದ್ದಾರೆಂಬುದು ಇಲ್ಲಿ ಮುಖ್ಯವಾಗುವುದಿಲ್ಲ.
ಈ ವಿಷಯದಲ್ಲಿ ರಾಷ್ಟ್ರಪತಿಗಳ ನಿರ್ಧಾರ ಸರಿ ಎಂದಾದರೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಅಂದರೆ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮೊದಲಾದವರು ಅದರಲ್ಲೂ ವಿಶೇಷವಾಗಿ ಯಾರ್್ಯಾರು ಹುದ್ದೆಗೆ ಸೇರುವಾಗ ಪ್ರಮಾಣ ಮಾಡಿ ಹುದ್ದೆ ಅಲಂಕರಿಸುತ್ತಾರೋ ಅಂತಹವರು ಮತದಾನ ಮಾಡುವಂತಿಲ್ಲ. ಅಂತಹವರ ಮತ ಚಲಾವಣೆ ಆಗಿದ್ದರೆ ತನ್ನಿಂದ ತಾನೆ ಅನರ್ಹಗೊಳ್ಳಬೇಕು ತಾನೆ?
ನಮ್ಮ ವ್ಯವಸ್ಥೆಯಲ್ಲಿ ಮತದಾನ ಎಂಬುದು ಗೌಪ್ಯತೆಯ ವಿಷಯ. ಪ್ರತಿಯೊಬ್ಬರ ಹಕ್ಕು. ಮತದಾನದಿಂದ ದೂರ ಉಳಿಯುವ ವಿಷಯ ಕುರಿತು ಚರ್ಚೆ ಅಗತ್ಯ.