ಒಮ್ಮೆ ಕಾರ್ಯನಿಮಿತ್ತ ದೆಹಲಿಯಲ್ಲಿದ್ದಾಗ ಹಾಲಿನ ಬೂತಿನಲ್ಲಿ ಹಾಲು ಖರೀದಿಸಿ ಪ್ಲಾಸ್ಟಿಕ್ ಕವರ್ ಕೇಳಿದೆ. ಅಂಗಡಿಯವ ನೀಡಲು ನಿರಾಕರಿಸಿದ. ಜನವರಿ ತಿಂಗಳಾದ ಕಾರಣ ಹೆಚ್ಚು ಚಳಿಇತ್ತು, ನನ್ನ ಹತ್ತಿರ ಬೇರೆ ಯಾವುದೇ ಚೀಲವಿರಲಿಲ್ಲ, ಮನೆಯೂ ಸಾಕಷ್ಟು ದೂರವಿತ್ತು. ಹಾಗಾಗಿ ಆ ಚಳಿಯಲ್ಲಿ, ಫ್ರಿಜ್ನಿಂದ ತೆಗೆದ ಕೊರೆಯುವ ಪ್ಯಾಕೆಟ್ ಹಿಡಿದು ಸಾಗುವುದು ಅಸಾಧ್ಯವಾಗಿತ್ತು. ನನ್ನ ಅನಿವಾರ್ಯ ತಿಳಿಸಿ ಪರಿಪರಿಯಾಗಿ ಬೇಡಿದರೂ ಅವನ ಮನಸ್ಸು ಕರಗಲಿಲ್ಲ. ಹಾಲಿಲ್ಲದೆ ಮನೆಗೆ ಮರಳಿದೆ. ನೆರೆಮನೆಯವರಿಂದ ತಿಳಿಯಿತು ದೆಹಲಿಯಲ್ಲಿ ಪ್ಲಾಸ್ಟಿಕ್ ನಿಷೇಧ ಎಂದು.
ಕರ್ನಾಟಕದಲ್ಲಿ ಹಿಂದೊಮ್ಮೆ ಪ್ಲಾಸ್ಟಿಕ್ ನಿಷೇಧ ಎಂದಾಗ ನನ್ನ ಮನದಲ್ಲಿದ್ದುದು ಇದೇ ಚಿತ್ರಣ. ಹಾಗಾಗಿ ಮೊದಲು ನನ್ನ ಬ್ಯಾಗಿನಲ್ಲಿ, ಗಾಡಿಯಲ್ಲಿ ಒಂದೊಂದು ಚೀಲವಿಟ್ಟುಕೊಂಡೆ. ಆದರೆ ವಾಸ್ತವ ಬೇರೆಯೇ ಆಗಿತ್ತು. ಅಂಗಡಿಯವ ಪ್ಲಾಸ್ಟಿಕ್ ನಿಷೇಧವಾಗಿದೆ, ಹಾಗಾಗಿ ಕವರ್ ಬೇಕಿದ್ದಲ್ಲಿ ₹ 2 ಕೊಡಿ ಎಂದ. ಇಂದಿಗೂ ಇದೇ ವ್ಯವಸ್ಥೆ ಜಾರಿಯಲ್ಲಿದೆ.
ದುಡ್ಡು ಕೊಟ್ಟರೆ ಎಲ್ಲ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಲಭ್ಯವಾಗುವುದಾದರೆ ಇದು ಯಾವ ರೀತಿ ನಿಷೇಧವಾಯಿತು ಎಂದು ನನಗೆ ಅರ್ಥವಾಗಿಲ್ಲ. ಈ ಬಾರಿಯ ನಿಷೇಧ ಯಾವ ರೀತಿಯದ್ದಾಗಿರುತ್ತದೆ ಕಾದು ನೋಡಬೇಕಿದೆ.