ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ತಮಗೆ ಸಂದ ‘ಡಾ. ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ’ ಹಣವನ್ನು ಪ್ರಶಸ್ತಿ ನೀಡುವ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ಗೇ ಹಿಂದಿರುಗಿಸಿ ಕನ್ನಡ ಚಟುವಟಿಕೆಗಳಿಗೆ ಬಳಸಿ ಎಂದು ಹೇಳಿರುವುದು ಸ್ವಾಗತಾರ್ಹ (ಪ್ರ.ವಾ.,ಜುಲೈ 31). ಈ ಹಿಂದೆಯೂ ಭೈರಪ್ಪನವರು ತಮಗೆ ಬಂದ ಪ್ರಶಸ್ತಿ ಹಣವನ್ನು ಆಯಾ ಸಂಸ್ಥೆಗಳಿಗೇ ಹಿಂದಿರುಗಿಸಿದ್ದಾರೆ. ಇದೊಂದು ಅನುಕರಣೀಯ ಆದರ್ಶ.
ಭೈರಪ್ಪನವರು ಶ್ರೀಮಂತರೇನಲ್ಲ; ಅವರದು ಶ್ರೀಮಂತಿಕೆಯ ಜೀವನವೂ ಅಲ್ಲ. ಆದರೆ ಅವರ ಹೃದಯ ಶ್ರೀಮಂತಿಕೆ ದೊಡ್ಡದು. ಇಂಥವರು ಯಾವ ಭಾಷೆಗಾದರೂ ಭೂಷಣರು. ಅವರು ಕನ್ನಡದವರು ಎಂಬುದು ನಮ್ಮ ಹೆಮ್ಮೆ!