‘ಅತ್ಯಾಚಾರಿ ಅಲ್ಲದಿದ್ದರೆ ವ್ಯಭಿಚಾರಿ!’ (ಸಂಗತ, ನ.18) ಲೇಖನ ಓದಿದರೆ ದೇಶದ ಕಾನೂನಿನಲ್ಲಿರುವ ನ್ಯೂನತೆಗಳ ಅರಿವಾಗುತ್ತದೆ. ಎಂದೋ ದೇಶದಲ್ಲಿ ಶಿಕ್ಷಣ, ವಿದ್ಯಾಭ್ಯಾಸ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳು ಅಂಬೆಗಾಲಿಡುತ್ತಿದ್ದ ಕಾಲದಲ್ಲಿ, ಆಗಿನ ಅರಿವಿನ ಪ್ರಕಾರ ಮಾಡಿದ್ದ ಕಾನೂನು ಇಂದಿನ ಸ್ಥಿತಿಗತಿಗಳಿಗೆ ಎಷ್ಟು ಪ್ರಸ್ತುತವೆಂಬುದು ಈಗಿನ ಓಲೈಕೆ ರಾಜಕೀಯ ಪರಿಸರದಲ್ಲಿ ಇನ್ನಷ್ಟು ಕಾಲ ಪ್ರಶ್ನೆಯಾಗಿಯೇ ಉಳಿದರೆ ಆಶ್ಚರ್ಯವಲ್ಲ.
ಈ ಹಿಂದೆ ನ್ಯಾಯಮೂರ್ತಿಗಳು ಈ ಕಾನೂನಿಗೆ ತಿದ್ದುಪಡಿಯ ಅವಶ್ಯಕತೆ ಮನವರಿಕೆ ಮಾಡಿದ್ದರೂ ಸರ್ಕಾರ ಚಿಂತನೆ ನಡೆಸದಿರುವುದು ವಿಪರ್ಯಾಸ. ಬದಲಾಗುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗನುಗುಣವಾಗಿ ಕಾನೂನುಗಳೂ ಕಾಲದಿಂದ ಕಾಲಕ್ಕೆ ಬದಲಾದರೆ ಮಾತ್ರ ಲಿಂಗ ತಾರತಮ್ಯವಿಲ್ಲದೆ ನ್ಯಾಯ ಒದಗಿಸಲು ಸಾಧ್ಯ. ಸಂಸತ್ತು, ವಿಧಾನಮಂಡಲಗಳಲ್ಲಿರುವ ಶಾಸನ ಕರ್ತೃಗಳೆಲ್ಲರೂ ವಿದ್ಯಾವಂತರೂ, ತಿಳಿವಳಿಕೆಯುಳ್ಳವರೇ. ಇಷ್ಟಾಗಿ ಈಗಿನ ಕಾನೂನೇ ಸಮರ್ಪಕವಾಗಿದೆ, ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದಾದರೆ ಅದು ಶೋಷಣೆಯೇ ಸರಿ.