ರೈಲ್ವೆ ಅಥವಾ ರಸ್ತೆಯ ಕೆಳ ಹಾಗೂ ಮೇಲು ಸೇತುವೆಗಳು ಬಹುತೇಕ ಅಧ್ವಾನಗೊಂಡಿವೆ. ಮೇಲಿರಬಹುದು ಅಥವಾ ಕೆಳಗಿರಬಹುದು, ಗುಂಡಿಗಳಿಗೆ ‘ಬರ’ವಿಲ್ಲ. ರೈಲ್ವೆ ಕೆಳಸೇತುವೆಗಳು ತೊಟ್ಟಿಕ್ಕುತ್ತವೆ. ಉದಾ: ದಂಡುರೈಲ್ವೆ ನಿಲ್ದಾಣದ ಬಳಿ ಇರುವ ಸೀಲಿಂಗ್ನ ಕೆಳ ಸೀಮೆಂಟ್ ಪದರಗಳು ಬೀಳುವಂತಿವೆ. ಉದಾ: ಸಿಬಿಐ ಬಳಿ ಇರುವ ಇಂತಹ ಸೇತುವೆಗಳ ಪರಿಶೀಲನೆಯನ್ನು ಸಂಬಂಧಪಟ್ಟವರು ಕೈಗೊಂಡು, ದುರಸ್ತಿಗೆ ಮುಂದಾಗಬೇಕು. ಅಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಮಳೆನೀರು ಅಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು.
ಉದ್ದನೆಯ ಕೆಳಸೇತುವೆಗಳಲ್ಲಿ ವಿದ್ಯುತ್ ಶಕ್ತಿ ದೀಪಗಳು ಉರಿಯುವಂತೆ ನೋಡಿಕೊಳ್ಳಬೇಕು. ಉದಾ: ವಿಜಯನಗರ ಟೋಲ್ಗೇಟ್ ಬಳಿಯ ಇಂತಹ ಸೇತುವೆಗಳ ಮೂಲಕ ವಾಹನಗಳಲ್ಲಿ ಸಂಚರಿಸಲು ಭಯವೆನಿಸುತ್ತದೆ. ಮಳೆ ಒಂದೇ ಸಮನೆ ಸುರಿಯುತ್ತಿರುವುದರಿಂದ ಹಾಗೂ ಕಳಪೆ ಕಾಮಗಾರಿಯಿಂದ ಇತ್ತೀಚೆಗೆ ಡಾಂಬರು ಹಾಕಿದ ರಸ್ತೆಗಳಲ್ಲಿ ಕೂಡ ಅಲ್ಲಲ್ಲಿ ಗುಂಡಿ ಬಿದ್ದಿರುವುದನ್ನು ಕಾಣಬಹುದು. ತುರ್ತಾಗಿ ಈ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಮನವಿ.