ದಲಿತ ಸಮುದಾಯದ ಹಿರಿಯ ರಾಜಕಾರಣಿ ಡಾ. ಜಿ.ಪರಮೇಶ್ವರ್ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ವರ್ಷಗಳ ಸಾಧನೆಯ ಸಾರ್ಥಕ ಸಮಾವೇಶದಲ್ಲಿ ಮಾತನಾಡುವಾಗ (ಪ್ರ.ವಾ., ಅ. 30), ತಮ್ಮ ಸಮುದಾಯದವರು ಅನುಭವಿಸುತ್ತಾ ಬಂದಿರುವ ನೋವನ್ನು ನೆನೆದು ‘ನಾವು ಇನ್ನೂ ಎಷ್ಟು ನೋವು ಅನುಭವಿಸಬೇಕು’ ಎಂದು ಗದ್ಗದಿತರಾದರು.
ಇದು ರಾಜಕೀಯ ಅವಕಾಶವಾದದ ಕಣ್ಣೀರಲ್ಲ. ಇಂದಿಗೂ ದಲಿತ ಸಮುದಾಯ ಅನುಭವಿಸುತ್ತಿರುವ ಅವಮಾನ, ದಬ್ಬಾಳಿಕೆ, ತಾರತಮ್ಯ, ಶೋಷಣೆಯಿಂದ ಕೂಡಿದ ದುರಂತದ ಬದುಕಿಗಾಗಿ ಇಟ್ಟ ವೇದನೆಯ ಕಣ್ಣೀರು. ಬಾಯಿ ಕಳೆದುಕೊಂಡ ಇಡೀ ದಲಿತ ಸಮುದಾಯದ ಕಣ್ಣೀರು.
ದಲಿತ ನಾಯಕನೊಬ್ಬನ ನೇತೃತ್ವದಲ್ಲಿ ರಚಿತವಾದ ಸಂವಿಧಾನ ದೇಶದಲ್ಲಿ ಜಾರಿಯಲ್ಲಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತರು ಎಷ್ಟರಮಟ್ಟಿಗೆ ಅಸಹಾಯಕ ಮತ್ತು ಅಸುರಕ್ಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಈ ಕಣ್ಣೀರು ಸಾಕ್ಷೀಕರಿಸುತ್ತದೆ.
ಹಾಗೆಂದು ಪರಮೇಶ್ವರ್ ಅವರ ಕಣ್ಣೀರನ್ನು ಅಮಾನವೀಯ ಸಮಾಜದ ಎದುರಿಗಿನ ಅಸಹಾಯಕತೆ ಎಂದು ಬಿಂಬಿಸಬೇಕಾಗಿಲ್ಲ. ಕೊನೆಗಾಣದ ಈ ನೀಚ ಪ್ರವೃತ್ತಿಗೆ ನಾಗರಿಕ ಸಮಾಜ ತಲೆ ತಗ್ಗಿಸುತ್ತದೋ ಬಿಡುತ್ತದೋ ದಲಿತ ಸಮುದಾಯ ಮಾತ್ರ ಮತ್ತೊಮ್ಮೆ ಒಗ್ಗಟ್ಟಿನಿಂದ ಸಿಡಿದೇಳಬೇಕಾಗಿದೆ. ಕಣ್ಣೀರಿನ ದುರಂತ ಕತೆಗಳನ್ನು ಎದೆಯಾಳಕ್ಕೆ ತಂದುಕೊಳ್ಳಬೇಕಾಗಿದೆ. ಆಗಮಾತ್ರ ಈ ಕಣ್ಣೀರಿಗೆ ಅರ್ಥ ಲಭಿಸುತ್ತದೆ.