ವಿಜಾಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಬಡ ಕುಟುಂಬದ ಬಾಲಕಿ ಅಕ್ಷತಾ ಅರೆಮುಚ್ಚಿದ ಕೊಳವೆ ಬಾವಿಯೊಳಗೆ ಬಿದ್ದ ಪ್ರಕರಣ ವರದಿಯಾಗಿದೆ. ಜನಸಾಮಾನ್ಯರಿಗೆ ಕೊಳವೆ ಬಾವಿ ಹಾಕಿಸುವಾಗ ಇದ್ದ ಉತ್ಸಾಹ ನೀರಿನ ಸೆಲೆ ಕಾಣದಿದ್ದಾಗ ಇರುವುದಿಲ್ಲ. ನಿರಾಶೆಗೊಂಡ ಜನ ಕೊಳವೆ ಬಾವಿ ಮುಚ್ಚದೆ ಬೇಜವಾಬ್ದಾರಿತನದಿಂದ ಹಾಗೇ ಬಿಟ್ಟುಬಿಡುತ್ತಾರೆ. ಇದು ಮಹಾಪ್ರಮಾದ.
ಎಳೆಯ ಜೀವಗಳನ್ನು ಬಲಿತೆಗೆದುಕೊಳ್ಳುವ ಸಲುವಾಗಿ ಮುಚ್ಚದ ಕೊಳವೆ ಬಾವಿಗಳು ಬಾಯಿ ತೆರೆದು ಕುಳಿತಿರುತ್ತವೆ. ಇಂತಹ ಪ್ರಕರಣಗಳು ತಿಂಗಳಲ್ಲಿ ಒಂದು ಸಲವಾದರೂ ದೇಶದಾದ್ಯಂತ ಸುದ್ದಿಯಾಗುತ್ತಲೇ ಇವೆ. ಜಾತಿ, ಧರ್ಮ ಮರೆತು ಉರುಳುಸೇವೆ, ಪ್ರಾರ್ಥನೆಗಳು ವರದಿಯಾಗುತ್ತಿವೆ. ಅಕ್ಷತಾಳಿಗೆ ಮಿಡಿಯದ ಜೀವಗಳೇ ಇಲ್ಲ.
ಮುಖ್ಯವಾಗಿ ದೇಶದಾದ್ಯಂತ ಕೊಳವೆ ಬಾವಿಯ ನಿಯಮಗಳು ಬಿಗಿಗೊಳ್ಳಬೇಕು. ಅಲ್ಲದೇ ಜನಸಾಮಾನ್ಯರಲ್ಲಿ ಕೊಳವೆಬಾವಿಗಳ ಕುರಿತು ಅರಿವು ಮೂಡಿಸಬೇಕಿದೆ. ಇಂತಹ ಪ್ರಕರಣಗಳು ನಡೆದಾಗ ಕ್ಷಿಪ್ರ ಕಾರ್ಯಾಚರಣೆ ಪಡೆ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಲಿ.