ಹೆಚ್ಚು ಹೆಚ್ಚು ಆಧುನಿಕ ಸೌಕರ್ಯಗಳ ಬಗ್ಗೆ ಅನುಗಾಲವೂ ಮಾತನಾಡುವ ಪಟ್ಟಣದ ಜನರಾಗಲಿ ಅಥವಾ ಅವುಗಳನ್ನು ಒದಗಿಸಲು ಹರಸಾಹಸ ಮಾಡುತ್ತಿರುವ ಸರ್ಕಾರವಾಗಲಿ, ಶತ ಶತಮಾನದಿಂದಲೂ ಕಾಡಿನಲ್ಲಿಯೇ ಹುಟ್ಟಿ, ಪ್ರಾಣಿಗಳಂತೆ ಬದುಕನ್ನು ಸವೆಸಿ, ಕಾಡಿನಲ್ಲಿಯೇ ಮಣ್ಣಾಗಿ ಹೋಗುವ ಗಿರಿಜನರ ಬದುಕಿನ ಬಗ್ಗೆ ಕ್ಷಣವಾದರೂ ಚಿಂತಿಸಿವೆಯೋ? ಅವರು ಸೂರ್ಯನ ಬೆಳಕನ್ನೇ ಕಾಣದೆ ಕತ್ತಲಲ್ಲಿಯೇ ಮರೆಯಾಗಿ ಹೋಗುತ್ತಾರೆ.
ಶಿಕ್ಷಣ, ವೈದ್ಯಕೀಯ, ಸೌಲಭ್ಯ, ಆಹಾರ, ವಸತಿ ಮುಂತಾದ ಮೂಲ ಸೌಕರ್ಯಗಳಿಂದ ವಂಚಿತರಾದ ಗಿರಿಜನರಿಗೆ ಸಂಘಟನೆಯ ಪ್ರಾಮುಖ್ಯತೆ ತಿಳಿದಿಲ್ಲ. ಹಕ್ಕುಗಳ ಅರಿವಿಲ್ಲ. ಇಂದಿಗೂ ಪೇಟೆ ಮಂದಿ ಕಂಡರೆ ಕಾಡಿನೊಳಕ್ಕೆ ಓಡಿಹೋಗಿ ಅವಿತುಕೊಳ್ಳುತ್ತಾರೆ. ಅವರೂ ನಮ್ಮಂತೆ ಮನುಷ್ಯರಲ್ಲವೆ? ತಡವಾಗಿದ್ದರೂ ಅಡ್ಡಿಯಿಲ್ಲ. ಈಗಲಾದರೂ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಬುಡಕಟ್ಟು ಜನರ ಬದುಕನ್ನು ಹಸನಾಗಿಸಲು ಯೋಜನೆಗಳನ್ನು ಜಾರಿಗೆ ತರಬೇಕು.
-ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು.