ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿ/ಹೊಂಡಗಳಿಂದ ತುಂಬಿ ಹೋಗುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡುತ್ತಿವೆ. ಶಕ್ತಿಕೇಂದ್ರ ಹಾಗೂ ಲೋಕಾಯುಕ್ತ ಕಾರ್ಯಾಲಯಗಳಿಗೆ ಹತ್ತಿರದ ರಸ್ತೆಗಳಲ್ಲಿಯೂ (ಉದಾ: ಕೆ.ಆರ್.ಸರ್ಕಲ್) ಹೊಂಡ/ಗುಂಡಿಗಳು ಇರುವುದು ಸಂಬಂಧಪಟ್ಟವರಿಗೆ ಕಾಣಿಸುತ್ತಿಲ್ಲ! ಹಣಕ್ಕೆ ‘ಬರ’ವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆಧುನಿಕ ತಂತ್ರಜ್ಞಾನದ ಬಗ್ಗೆ ನಮ್ಮ ಎಂಜಿನಿಯರುಗಳು ಹಾಗೂ ದಕ್ಷ ಅಧಿಕಾರಿಗಳಿಗೆ ತಿಳಿದಿಲ್ಲವೇ? ಮಳೆಗಾಲದಲ್ಲಿಯೂ ಇಂತಹ ಗುಂಡಿ/ಹೊಂಡಗಳನ್ನು ಮುಚ್ಚುವಂತಹ ಡಾಂಬರು ಹಾಗೂ ಮುಚ್ಚಿದ ಈ ಗುಂಡಿಗಳನ್ನು ಸಮತಟ್ಟು ಮಾಡಲು ಒಂದು ಟನ್ ಗಾತ್ರದ ‘ರೋಡ್ ರೋಲರ್’ ಅನ್ನು ಕೆಲವು ವರ್ಷಗಳ ಹಿಂದೆ ಸ್ವಲ್ಪಕಾಲ ನಗರಪಾಲಿಕೆಯಲ್ಲಿ ಉಪಯೋಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ‘ತಂಡೋಪತಂಡ’ಗಳಲ್ಲಿ ಹೊರದೇಶಗಳಿಗೆ ಹೋಗಿ ಬರುತ್ತಿದ್ದಾರೆ. ಅಲ್ಲಿ ಎಲ್ಲಿಯೂ ಮಳೆಗಾಲದಲ್ಲಿಯೂ ಇಂತಹ ರಸ್ತೆಗಳ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಬಳಕೆ ತಿಳಿಯಲಿಲ್ಲವೇ? ಅಂತಹ ತಂತ್ರಜ್ಞಾನವನ್ನು ಬಳಸುವುದನ್ನು ಬಿಟ್ಟು ಸರ್ಕಾರ ಹಾಗೂ ಬಿಬಿಎಂಪಿ, ಮಳೆಗಾಲದ ‘ಸಬೂಬು’ ಮುಂದಿಟ್ಟು, ಜನರನ್ನು, ವಾಹನಗಳ ಸಂಚಾರವನ್ನು ಭಯಂಕರಗೊಳಿಸಿದೆ. ಇನ್ನಾದರೂ ಆಧುನಿಕ ತಂತ್ರಜ್ಞಾನ ಬಳಸಿ ಗುಂಡಿ ಹಾಗೂ ಹೊಂಡಗಳಿಂದ ರಸ್ತೆಗಳನ್ನು ಮುಕ್ತಗೊಳಿಸಲು ವಿನಂತಿ.